ಪಾಕಿಸ್ತಾನದ ಐ.ಎಸ್.ಐ. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿದೆ ! – ಬಾಂಗ್ಲಾದೇಶದ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧರಿ

ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಬಳಕೆ

(ಐಎಸ್‌ಐ ಎಂದರೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ – ಅಂತರಿಕ ಗುಪ್ತಚರ ಸಂಸ್ಥೆ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕಳೆದ ಒಂದು ವರ್ಷದಿಂದ ಮೊಹಮ್ಮದ್ ಯುನೂಸ್ ಅವರ ನೇತೃತ್ವದ ಮಧ್ಯಂತರ ಸರಕಾರದ ಅವಧಿಯಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಿಂತಿಲ್ಲ. ವಿಶೇಷವಾಗಿ, ಬಾಂಗ್ಲಾದೇಶದಲ್ಲಿ ಮೂಲಭೂತವಾದವನ್ನು ಹೆಚ್ಚಿಸುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್‌.ಐ. ಪ್ರಮುಖ ಪಾತ್ರ ವಹಿಸುತ್ತಿದೆ. ಯುನೂಸ್ ಸರಕಾರವು ಐ.ಎಸ್‌.ಐ.ಗೆ ಮುಕ್ತವಾಗಿ ತನ್ನ ಕೆಲಸ ಮಾಡಲು ಅವಕಾಶ ನೀಡಿದೆ. ಅದರ ಲಾಭ ಪಡೆದು, ಐ.ಎಸ್‌.ಐ. ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ. ಈ ಕೆಲಸಕ್ಕಾಗಿ ಐ.ಎಸ್.ಐ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಬಳಸುತ್ತಿದೆ. ಬಾಂಗ್ಲಾದೇಶದ ಪ್ರಸಿದ್ಧ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧರಿ ಅವರು ಬಾಂಗ್ಲಾದೇಶವು ಈಗ ಐ.ಎಸ್‌.ಐ. ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಹೇಳಿದ್ದಾರೆ.

ಹಿಂದೂ ದೇವಸ್ಥಾನಗಳೆ ನೇರ ಗುರಿ!

ಶೋಯೆಬ್ ಚೌಧರಿ ಪ್ರಕಾರ, ಬಾಂಗ್ಲಾದೇಶವು ತನ್ನ ಸಾರ್ವಭೌಮತ್ವ ಮತ್ತು ಧಾರ್ಮಿಕ ಸಾಮರಸ್ಯಕ್ಕಾಗಿ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಶೇಷವಾಗಿ ದೇಶದ ಹಿಂದೂ ಸಮುದಾಯವನ್ನು ವ್ಯವಸ್ಥಿತವಾಗಿ ಬೆದರಿಸಲಾಗುತ್ತಿದೆ ಮತ್ತು ಅವರ ದೇವಸ್ಥಾನಗಳನ್ನು ಗುರಿಯಾಗಿಸಲಾಗುತ್ತಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಕೇಂದ್ರದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್‌.ಐ. ಇದೆ. ಐ.ಎಸ್‌.ಐ., ಲಷ್ಕರ್-ಎ-ತೊಯ್ಬಾ ಮೂಲಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಮತ್ತು ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಾರಂಭಿಸಿದೆ.

ಯುನೂಸ್ ಅಧಿಕಾರಕ್ಕೆ ಬಂದ ನಂತರ ಬದಲಾದ ಪರಿಸ್ಥಿತಿ

ಆಗಸ್ಟ್ 16 ರಂದು ಸೈಫುಲ್ ಇಸ್ಲಾಂ ಎಂಬ ಇಸ್ಲಾಮಿಕ್ ಕಟ್ಟರವಾದಿ ಸೀತಾಕುಂಡ್ ಪರ್ವತದ ಮೇಲೆ ಮಸೀದಿ ನಿರ್ಮಿಸುವ ಬಗ್ಗೆ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದನು. ಇದಕ್ಕೆ ಲಷ್ಕರ್-ಎ-ತೊಯ್ಬಾ ಮತ್ತು ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಭಯೋತ್ಪಾದಕ ಹಾರೂನ್ ಇಜಾಹರ್ ಸಹಾಯ ಮಾಡುತ್ತಿದ್ದಾನೆ. ಇಜಾಹರ್ ಕುಟುಂಬವೂ ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾದ ಇತಿಹಾಸವನ್ನು ಹೊಂದಿದೆ ಎಂದು ಶೋಯೆಬ್ ಚೌಧರಿ ಮಾಹಿತಿ ನೀಡಿದ್ದಾರೆ.

ಸೀತಾಕುಂಡದ ಮೇಲೆ ಕಣ್ಣು

ಭಯೋತ್ಪಾದಕ ಇಜಾಹರ್ ಮತ್ತು ಅವನ ಸಹಚರರು 11ನೇ ಶತಮಾನದ ಸೀತಾಕುಂಡ ಚಂದ್ರನಾಥ ಧಾಮದ ಮೇಲೆ ಕಣ್ಣಿಟ್ಟಿದ್ದಾರೆ. ಇದು ದಕ್ಷಿಣ ಏಷ್ಯಾದ ಹಿಂದೂ ಮತ್ತು ಬೌದ್ಧ ಧರ್ಮದವರಿಗೆ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಇಲ್ಲಿ ಶಿವರಾತ್ರಿಗಾಗಿ ಸಾವಿರಾರು ಭಕ್ತರು ಸೇರುತ್ತಾರೆ. ಚಂದ್ರನಾಥ ದೇವಸ್ಥಾನವು ಸಮುದ್ರ ಮಟ್ಟದಿಂದ 1,000 ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಹಿಂದೂ ಪುರಾಣಗಳ ಪ್ರಕಾರ, ದೇವತೆ ಸತಿಯ ಬಲಗೈ ಈ ಸ್ಥಳದಲ್ಲಿ ಬಿದ್ದಿತ್ತು ಎಂದು ನಂಬಲಾಗಿದೆ.

ಬಾಂಗ್ಲಾದೇಶದ ಕಟ್ಟರವಾದಿ ಗುಂಪುಗಳು ಚಂದ್ರನಾಥ ಪರ್ವತವನ್ನು ನಿಯಂತ್ರಿಸಲು ಮತ್ತು ಅದರ ಶಿಖರದ ಮೇಲೆ ಮಸೀದಿ ನಿರ್ಮಿಸಲು ಪದೇ-ಪದೇ ಪ್ರಯತ್ನಿಸಿವೆ. ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಅವಮಾನಿಸಲು ಮತ್ತು ಅವರ ಸಂಪ್ರದಾಯಗಳನ್ನು ಅವಮಾನಿಸಲು ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಹಿಂದೂ ಭಕ್ತರ ಮೇಲೆ ಹಲವಾರು ಬಾರಿ ದಾಳಿಗಳನ್ನು ಮಾಡಲು ಪ್ರಯತ್ನಿಸಲಾಗಿದೆ.

ಅನೇಕ ದೇವಸ್ಥಾನಗಳು ಐ.ಎಸ್‌.ಐ. ಗುರಿಯಾಗಿವೆ!

ಪಾಕಿಸ್ತಾನದ ಐ.ಎಸ್‌.ಐ. ಯೋಜನೆಗಳು ಸೀತಾಕುಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಚಟ್ಟಗ್ರಾಮ್‌ನ ಮೇಧಾಸ್ ಮುನಿ ಆಶ್ರಮ, ಬಂಡರಬನ್ ಜಿಲ್ಲೆಯ ಸ್ವರ್ಣ ದೇವಸ್ಥಾನ ಮತ್ತು ಕಾಕ್ಸ್ ಬಜಾರ್‌ನ ಮಹೇಶಖಲಿಯ ಆದಿನಾಥ ದೇವಸ್ಥಾನಗಳು ಅವುಗಳ ಗುರಿಯಾಗಿವೆ. ಈ ಎಲ್ಲಾ ಪ್ರಾಚೀನ ಮತ್ತು ಪವಿತ್ರ ಹಿಂದೂ ಸ್ಥಳಗಳು ದಕ್ಷಿಣ ಏಷ್ಯಾದ ಆಧ್ಯಾತ್ಮಿಕ ಪರಂಪರೆಯೊಂದಿಗೆ ಆಳವಾಗಿ ಸಂಬಂಧ ಹೊಂದಿವೆ, ಅವುಗಳ ಮೇಲೆ ಪಾಕಿಸ್ತಾನ ಕೆಟ್ಟ ಕಣ್ಣಿಟ್ಟಿದೆ.

ಶರಿಯತ್ ಕಾನೂನಿನ ಬೇಡಿಕೆ

ಭಯೋತ್ಪಾದಕ ಇಜಾಹರ್ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಶರಿಯತ್ ಕಾನೂನನ್ನು ಜಾರಿಗೆ ತರುವ ತನ್ನ ಅಭಿಯಾನವನ್ನು ವೇಗಗೊಳಿಸಿದ್ದಾನೆ. ಇದರಲ್ಲಿ ಅವನಿಗೆ ಜಮಾತ್-ಎ-ಇಸ್ಲಾಮಿ, ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ ಮತ್ತು ಹಿಫಾಜತ್-ಎ-ಇಸ್ಲಾಮ್‌ನಂತಹ ಕಟ್ಟರವಾದಿ ಸಂಘಟನೆಗಳಿಂದ ಬೆಂಬಲ ಸಿಗುತ್ತಿದೆ. ಅವನು ಅಲ್-ಕಾಯ್ದಕ್ಕೆ ಸಂಬಂಧಿಸಿದ ಅನ್ಸಾರ್-ಅಲ್-ಇಸ್ಲಾಮ್ ಮುಖ್ಯಸ್ಥ ಜಸಿಮುದ್ದೀನ್ ರಹಮಾನಿಯ ನಿಕಟವರ್ತಿ ಆಗಿದ್ದಾನೆ.

ಐ.ಎಸ್‌.ಐ.ನ ನೇಮಕಾತಿ ಮತ್ತು ಕಳ್ಳಸಾಗಣೆ

ಐ.ಎಸ್‌.ಐ. ರೋಹಿಂಗ್ಯಾ ಮತ್ತು ಬಿಹಾರದಿಂದ ಬಂದ ಜನರನ್ನು ವೇಗವಾಗಿ ನೇಮಕ ಮಾಡುತ್ತಿದೆ. ನೇಮಕಾತಿ ನಂತರ, ಈ ಯುವಕರನ್ನು ನೇಪಾಳ ಮತ್ತು ಪಾಕಿಸ್ತಾನದಲ್ಲಿರುವ ತರಬೇತಿ ಶಿಬಿರಗಳಿಗೆ ಕಳುಹಿಸಲಾಗುತ್ತದೆ. ಯುನೂಸ್ ಸರಕಾರದ ಅವಧಿಯಲ್ಲಿ, ಐ.ಎಸ್‌.ಐ.ಗೆ ಬಾಂಗ್ಲಾದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ತರಲು ಮುಕ್ತ ಅವಕಾಶ ಸಿಕ್ಕಿದೆ. ಇದರಿಂದ ಬಂದ ಆದಾಯವನ್ನು ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದೆ.

ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ವಿರುದ್ಧ ಪಾಕಿಸ್ತಾನ ಆರಂಭಿಸಿದ ನಿರಂತರ ಯುದ್ಧ!

ಚೌಧರಿ ಅವರ ಪ್ರಕಾರ, ಬಾಂಗ್ಲಾದೇಶವನ್ನು ಜಿಹಾದಿಗಳ ಭದ್ರಕೋಟೆಯನ್ನಾಗಿ ಮಾಡಿ ಭಾರತದ ಪೂರ್ವ ಗಡಿಯನ್ನು ಅಸ್ಥಿರಗೊಳಿಸುವುದು ಪಾಕಿಸ್ತಾನದ ದೊಡ್ಡ ಯೋಜನೆಯಾಗಿದೆ. ಯುನೂಸ್ ಸರಕಾರದ ಅವಧಿಯಲ್ಲಿ, ಬಾಂಗ್ಲಾದೇಶವು ಕಟ್ಟರವಾದಿ ಇಸ್ಲಾಮಿಕ್ ಮತ್ತು ಭಯೋತ್ಪಾದಕ ಶಕ್ತಿಗಳಿಗೆ ಒಂದು ಲಾಂಚ್ ಪಾಡ್ (ಭಯೋತ್ಪಾದಕರಿಗೆ ತರಬೇತಿ ನೀಡಿ ಅವರನ್ನು ವಿವಿಧ ಯೋಜಿತ ಸ್ಥಳಗಳಿಗೆ ಕಳುಹಿಸುವುದು) ಆಗುತ್ತಿದೆ. ಇದು ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ವಿರುದ್ಧ ಪಾಕಿಸ್ತಾನ ಆರಂಭಿಸಿದ ನಿರಂತರ ಯುದ್ಧದ ಒಂದು ಭಾಗವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.