ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ

ನಾಗಪುರ, ಜೂನ್ ೪ (ಸುದ್ದಿ) – ಮೂಲತಃ ಮಧ್ಯಪ್ರದೇಶದ ನಿವಾಸಿಯಾಗಿದ್ದು, ನಾಗಪುರದಲ್ಲಿ ‘ನೀಟ್’ (ವೈದ್ಯಕೀಯ ಪ್ರವೇಶ ಪರೀಕ್ಷೆ) ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ಕುಮಾರಿ ಆಕಾಂಕ್ಷಾ ಚತುರ್ವೇದಿ (ವಯಸ್ಸು 18 ವರ್ಷ) ಮೇ 20 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳ ಸರಣಿ ಮತ್ತು ಆಡಳಿತ ಮಂಡಳಿಯು ಪರೀಕ್ಷೆಯನ್ನು ರದ್ದುಗೊಳಿಸಿದ ಕಾರಣದಿಂದ ನಿರ್ಮಾಣವಾದ ತೀವ್ರ ಮಾನಸಿಕ ಒತ್ತಡದಿಂದಾಗಿ ಆಕೆ ಈ ಹೆಜ್ಜೆ ಇಟ್ಟಿರುವುದು ಬೆಳಕಿಗೆ ಬಂದಿದೆ.

ತಂದೆಯು ಸಾಲ ಮಾಡಿ ಸಹಾಯ ಮಾಡಿದ್ದರು

ಆಕಾಂಕ್ಷಾಳ ತಂದೆ ಕೃಷ್ಣಕುಮಾರ ಚೌಬೇ ಅವರು ಮಧ್ಯಪ್ರದೇಶದ ಮೌಗಂಜ್ ನ ಸಣ್ಣ ಹಿಡುವಳಿದಾರ ರೈತರಾಗಿದ್ದಾರೆ. ತಮ್ಮ ಮಗಳನ್ನು ವೈದ್ಯೆಯನ್ನಾಗಿ ಮಾಡಲು ಅವರು ‘ಕಿಸಾನ್ ಕ್ರೆಡಿಟ್ ಕಾರ್ಡ್’ ಮೂಲಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಅಷ್ಟೇ ಅಲ್ಲದೆ, ನಾಗಪುರದಲ್ಲಿ ಆಕೆಯ ಕೋಚಿಂಗ್ ಕ್ಲಾಸ್ ವೆಚ್ಚವನ್ನು ಭರಿಸಲು ತಂದೆಯು ಸ್ವತಃ ನಾಗಪುರದಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದರು. ಆಕಾಂಕ್ಷಾಳಿಗೆ ಪರೀಕ್ಷೆಯಲ್ಲಿ 650 ಕ್ಕೂ ಹೆಚ್ಚು ಅಂಕಗಳು ಬರುವುದು ಖಚಿತವಾಗಿತ್ತು; ಆದರೆ ಭ್ರಷ್ಟ ಶಿಕ್ಷಣ ವ್ಯವಸ್ಥೆಯಿಂದಾಗಿ ಆಕೆಯ ಈ ಆನಂದ ಕ್ಷಣಿಕವಾಯಿತು. ಆಕಾಂಕ್ಷಾಳ ಕೋಣೆಯಲ್ಲಿ ಸಿಕ್ಕಿದ ಡೆತ್ ನೋಟ್ನಲ್ಲಿ ಆಕೆ, ಅಮ್ಮ ಮತ್ತು ಅಪ್ಪ, ನಿಮ್ಮ ಮಗಳು ಮನಸ್ಸಿಟ್ಟು ಓದಿ ಒಂದು ದಿನ ವೈದ್ಯೆಯಾಗುತ್ತಾಳೆ ಎಂಬ ನಂಬಿಕೆ ನಿಮಗಿತ್ತು; ಆದರೆ ಈಗ ನನ್ನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಧೈರ್ಯವಿಲ್ಲ, ನಾನು ನಿಮ್ಮ ಕನಸನ್ನು ನನಸು ಮಾಡಲು ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನದಲ್ಲಿ ನನಗೆ ಒಳ್ಳೆಯ ಅಂಕಗಳು ಸಿಗುತ್ತಿದ್ದವು; ಆದರೆ ಈಗ ಮತ್ತೊಮ್ಮೆ ಅಷ್ಟೇ ಚೆನ್ನಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆಯೇ ಎಂಬ ಯಾವುದೇ ಖಚಿತತೆ ಇಲ್ಲ. ನನ್ನನ್ನು ಕ್ಷಮಿಸಿ ಅಮ್ಮ ಅಪ್ಪ, ಎಂದು ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾಳೆ.

ಆಕಾಂಕ್ಷಾಳ ಚಿಕ್ಕಪ್ಪ ಜಗದೀಶ ಚತುರ್ವೇದಿ ಮಾತನಾಡಿ, ಪರೀಕ್ಷೆ ಬರೆದು ಆಕಾಂಕ್ಷಾ ಮನೆಗೆ ಮರಳಿದಾಗ, ಆಕೆಯ ಆತ್ಮವಿಶ್ವಾಸ ಗಗನಚುಂಬಿಯಾಗಿತ್ತು. ಆದರೆ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಸುದ್ದಿಗಳು ಬರಲು ಪ್ರಾರಂಭವಾದಾಗ, ಆಕೆಗೆ ದೊಡ್ಡ ಆಘಾತವಾಯಿತು. ಅವಳು ಊಟ ಮಾಡುವುದನ್ನು ಬಿಟ್ಟಳು, ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಸದಾ ಒತ್ತಡದಲ್ಲೇ ಇರುತ್ತಿದ್ದಳು; ಆದರೆ ಈ ಎಲ್ಲದರ ಅಂತ್ಯ ಇಷ್ಟು ಭೀಕರವಾಗಿರುತ್ತದೆ ಎಂದು ನಾವು ಊಹಿಸಿರಲಿಲ್ಲ, ಎಂದರು.

ಸಂಪಾದಕೀಯ ನಿಲುವು

  • ಸಧ್ಯದ ಶಿಕ್ಷಣ ಪದ್ಧತಿ ಮತ್ತು ಪರೀಕ್ಷಾ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಪದೇ ಪದೇ ಬದಲಾಗುವ ನಿರ್ಧಾರಗಳಿಂದಾಗಿ ಪ್ರಾಮಾಣಿಕವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರಮಯವಾಗುತ್ತಿದೆ. ಕೇವಲ ಭೌತಿಕ ಶಿಕ್ಷಣದ ಬೆನ್ನಟ್ಟಿದ್ದರಿಂದಾಗಿ ವಿದ್ಯಾರ್ಥಿಗಳಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯ ಉಳಿದಿಲ್ಲ. ಸರಕಾರವು ಈ ಚಿತ್ರಣವನ್ನು ಬದಲಾಯಿಸುವ ಅವಶ್ಯಕತೆಯಿದೆ !
  • ವೈಫಲ್ಯ ಅಥವಾ ಒತ್ತಡದ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಆತ್ಮಬಲವು ಸಾಧನೆಯಿಂದ ಮಾತ್ರ ನಿರ್ಮಾಣವಾಗುತ್ತದೆ !