‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!

ಜೇಜೂರಿಯ ರಸಾಯನಯುಕ್ತ ಭಂಡಾರದ ಮಾರಾಟದ ವಿರುದ್ಧ ಭಾಜಪ ಶಾಸಕ ವಿಕ್ರಮ್ ಪಾಚಪುತೆ ಆಕ್ರೋಶ!

ಪುಣೆ – ಜೇಜೂರಿ ಗಡದಲ್ಲಿ (ಬೆಟ್ಟದ ಮೇಲೆ) ಭಂಡಾರಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ಉಲ್ಲೇಖಿಸಿ ಭಾಜಪದ ಶಾಸಕ ವಿಕ್ರಮ ಪಾಚಪುತೆ ಅವರು ಭಂಡಾರದಲ್ಲಿನ ರಾಸಾಯನಿಕ ಕಲಬೆರಕೆಯನ್ನು ಎತ್ತಿ ತೋರಿಸಿದ್ದಾರೆ. ಜೇಜೂರಿ ಗಡ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ದೇವಸ್ಥಾನಗಳ ಪರಿಸರದಲ್ಲಿ ದೊಡ್ಡ ಪ್ರಮಾಣದಲ್ಲಿ ರಸಾಯನಯುಕ್ತ ಭಂಡಾರ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಕಷ್ಟವು ಭಕ್ತರ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿರುವುದರಿಂದ, ಶಾಸಕ ಪಾಚಪುತೆ ಅವರು ಅನ್ನ ಮತ್ತು ಔಷಧ ಆಡಳಿತದ ಆಯುಕ್ತರಾದ ತುಕಾರಾಂ ಮುಂಢೆ ಅವರನ್ನು ಭೇಟಿಯಾಗಿ ವಿಶೇಷ ಮನವಿ ಪತ್ರ ಸಲ್ಲಿಸಿದರು. ‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು, ‘ಮುಂಬರುವ ದಿನಗಳಲ್ಲಿ ಭಂಡಾರ ಎಂದರೆ ಅರಿಶಿನ ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗುವುದು’ ಎಂದು ಶಾಸಕರಿಗೆ ಖಚಿತ ಭರವಸೆ ನೀಡಿದರು. ಅನ್ನ ಮತ್ತು ಔಷಧ ಆಡಳಿತದ ವತಿಯಿಂದ ಶೀಘ್ರದಲ್ಲೇ ಈ ಕುರಿತು ಅಧಿಕೃತ ಸುತ್ತೋಲೆಯನ್ನು ಹೊರಡಿಸುವ ಸಾಧ್ಯತೆಯಿದೆ.

ಶಾಸಕ ಪಾಚಪುತೆ ಅವರು ಮಂಡಿಸಿದ ಪ್ರಮುಖ ಅಂಶಗಳು!

1. ಇತ್ತೀಚಿನ ದಿನಗಳಲ್ಲಿ ಭಂಡಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಮಿಶ್ರಣ (ಕಲಬೆರಕೆ) ಮಾಡಲಾಗುತ್ತಿದೆ. ಇದರ ನೇರ ನಷ್ಟವು ಮುಗ್ಧ ಭಕ್ತರಿಗೆ ಆಗುತ್ತಿದ್ದು, ನಮ್ಮ ಧಾರ್ಮಿಕ ನಂಬಿಕೆಯ ಮೇಲೆಯೂ ಇದು ಕೆಟ್ಟ ಪರಿಣಾಮ ಬೀರುತ್ತಿದೆ.

2. ಮೊದಲಿನಿಂದಲೂ ಭಂಡಾರವಾಗಿ ಶುದ್ಧ ಅರಿಶಿನವನ್ನೇ ಮಾರಾಟ ಮಾಡಲಾಗುತ್ತಿತ್ತು ಮತ್ತು ಮುಂದೆಯೂ ಅರಿಶಿನವನ್ನೇ ಭಂಡಾರವಾಗಿ ಮಾರಾಟ ಮಾಡಬೇಕು ಎಂಬ ಸಿದ್ಧಾಂತವನ್ನು ನಾವು ಹೊಂದಿದ್ದೇವೆ. ಆದ್ದರಿಂದಲೇ ಆದಷ್ಟು ಬೇಗ ‘ಭಂಡಾರ ಎಂದರೆ ಅರಿಶಿನವೇ’ ಎಂಬುದನ್ನು ಕಾನೂನಿನಲ್ಲಿ ಉಲ್ಲೇಖಿಸುವುದು ಅತ್ಯಂತ ಅಗತ್ಯವಾಗಿದೆ.

ಕಾನೂನಿನಲ್ಲಿ ಭಂಡಾರ ಎಂದರೆ ‘ಅರಿಶಿನ’ ಎಂದು ಎಲ್ಲಿಯೂ ಉಲ್ಲೇಖಿಸದಿರುವುದರ ದುರುಪಯೋಗ!

ಪ್ರಸ್ತುತ ಅನ್ನ ಮತ್ತು ಔಷಧ ಆಡಳಿತದ ಬಳಿ ‘ಭಂಡಾರ’ ಎಂದರೆ ನಿಖರವಾಗಿ ಏನು?, ಎಂಬುದರ ಕುರಿತು ಯಾವುದೇ ಖಚಿತ ಅಥವಾ ಕಾನೂನುಬದ್ಧ ವ್ಯಾಖ್ಯಾನ ಸ್ಪಷ್ಟವಾಗಿಲ್ಲ. ಕಾನೂನಿನಲ್ಲಿಯೂ ಇದನ್ನು ಎಲ್ಲಿಯೂ ಉಲ್ಲೇಖಿಸದಿರುವುದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ರಾಸಾಯನಿಕ ಬಣ್ಣಗಳು ಮತ್ತು ಸುಲಭವಾಗಿ ಉರಿಯುವ ರಾಸಾಯನಿಕಗಳನ್ನು ಮಿಶ್ರಣ ಮಾಡಿದ ಭಂಡಾರವನ್ನು ವ್ಯಾಪಾರಿಗಳು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಕಲಬೆರಕೆ ಮಾಡುವವರ ಮತ್ತು ನಕಲಿ ಭಂಡಾರ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಾಗ ಆಡಳಿತ ವ್ಯವಸ್ಥೆಯು ತಾಂತ್ರಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ.

ಸಂಪಾದಕೀಯ ನಿಲುವು

ಇಂತಹ ಬೇಡಿಕೆಯನ್ನು ಏಕೆ ಇಡಬೇಕಾಗುತ್ತದೆ? ಅಲ್ಲದೆ, ಯಾವುದಾದರೂ ಅಪಘಾತ ನಡೆದ ನಂತರ ಎಚ್ಚರಗೊಳ್ಳುವ ಬದಲು, ಅನ್ನ ಮತ್ತು ಔಷಧ ಆಡಳಿತವು ಜೇಜೂರಿ, ತುಳಜಾಪುರ, ಕೊಲ್ಲಾಪುರದಂತಹ ರಾಜ್ಯದ ಎಲ್ಲಾ ಪ್ರಮುಖ ದೇವಸ್ಥಾನಗಳ ಪರಿಸರದಲ್ಲಿ ಭಂಡಾರ ಮತ್ತು ಮಹಾಪ್ರಸಾದಗಳ ನಿಯಮಿತ ಹಾಗೂ ಆಕಸ್ಮಿಕ ತಪಾಸಣೆಯನ್ನು ನಡೆಸಬೇಕು!