‘ನಾವು ಮುಳುಗಿದರೆ, ಅರ್ಧ ಜಗತ್ತನ್ನೂ ನಮ್ಮೊಂದಿಗೆ ಮುಳುಗಿಸುತ್ತೇವೆ!’

ಅಮೇರಿಕಾ: ಅಸೀಮ್ ಮುನೀರ್ ಅವರಿಂದ ಭಾರತಕ್ಕೆ ಅಣು ಯುದ್ಧದ ಬೆದರಿಕೆ

ವಾಷಿಂಗ್ಟನ್ (ಅಮೇರಿಕಾ) – ನಾವು ಅಣ್ವಸ್ತ್ರ ಹೊಂದಿರುವ ದೇಶ, ಮತ್ತು ಒಂದು ವೇಳೆ ನಾವು ಮುಳುಗುತ್ತಿದ್ದೇವೆ ಎಂದು ನಮಗೆ ಅನಿಸಿದರೆ, ಅರ್ಧ ಜಗತ್ತನ್ನು ನಮ್ಮೊಂದಿಗೆ ಮುಳುಗಿಸುತ್ತೇವೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಅಮೇರಿಕಾದ ಫ್ಲೋರಿಡಾದ ಟ್ಯಾಂಪಾ ನಗರದಲ್ಲಿರುವ ಗ್ರ್ಯಾಂಡ್ ಹಯಾಟ್ ಹೋಟೆಲ್‌ನಲ್ಲಿ ಪಾಕಿಸ್ತಾನ ಮೂಲದ ಉದ್ಯಮಿ ಅದ್ನಾನ್ ಅಸದ್ ಎಂಬವರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಈ ರೀತಿ ಬೆದರಿಕೆ ಹಾಕಿದ್ದಾರೆ. ‘ದಿ ಪ್ರಿಂಟ್’ ಈ ಸುದ್ದಿಯನ್ನು ಪ್ರಕಟಿಸಿದೆ. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಮೂಲದ ಸುಮಾರು 120 ಜನರು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ಥಳದಲ್ಲಿ ಮೊಬೈಲ್ ಫೋನ್ ತರಲು ಮತ್ತು ಅಸೀಮ್ ಮುನೀರ್ ಅವರ ಹೇಳಿಕೆಗಳ ವೀಡಿಯೊ ಮಾಡಲು ನಿರ್ಬಂಧ ಹೇರಲಾಗಿತ್ತು. ಅಸೀಮ್ ಮುನೀರ್ ಅವರು ಅಮೇರಿಕಾದ ನಿವೃತ್ತ ಕಮಾಂಡರ್ ಜನರಲ್ ಮೈಕೆಲ್ ಕುರಿಲ್ಲಾ ಅವರ ಬೀಳ್ಕೊಡುಗೆ ಸಮಾರಂಭಕ್ಕಾಗಿ ಫ್ಲೋರಿಡಾಗೆ ಬಂದಿದ್ದರು.

‘ಭಾರತ ಸಿಂಧೂ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದರೆ ನಾವು ಕ್ಷಿಪಣಿಗಳನ್ನು ಹಾರಿಸಿ ಅದನ್ನು ನಾಶ ಮಾಡುತ್ತೇವೆ!’

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹೇಳಿದಂತೆ, ಅಣು ಬೆದರಿಕೆಯ ನಂತರ ಅಸೀಮ್ ಮುನೀರ್ ಅವರು ಸಿಂಧೂ ನದಿ ನೀರಿನ ಒಪ್ಪಂದದ ಬಗ್ಗೆಯೂ ಮಾತನಾಡಿದರು. ಭಾರತ ಈ ಒಪ್ಪಂದವನ್ನು ಸ್ಥಗಿತಗೊಳಿಸಿದರೆ 25 ಕೋಟಿ ಜನರು ಹಸಿವಿನ ಅಪಾಯ ಎದುರಿಸಬಹುದು ಎಂದು ಅವರು ಹೇಳಿದರು. ಭಾರತ ಈ ನದಿಯ ಮೇಲೆ ಅಣೆಕಟ್ಟು ಕಟ್ಟುವುದನ್ನು ನಾವು ಕಾಯುತ್ತೇವೆ, ಮತ್ತು ಕಟ್ಟಿದ ತಕ್ಷಣ ನಾವು 10 ಕ್ಷಿಪಣಿಗಳನ್ನು ಹಾರಿಸಿ ಅದನ್ನು ನಾಶ ಮಾಡುತ್ತೇವೆ. ಸಿಂಧೂ ನದಿ ಭಾರತೀಯರ ವೈಯಕ್ತಿಕ ಆಸ್ತಿಯಲ್ಲ. ನಮ್ಮಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ.

ಭಾರತ ಮರ್ಸಿಡಿಸ್ ಕಾರು, ನಾವು ಟ್ರಕ್: ಡಿಕ್ಕಿ ಹೊಡೆದರೆ ಅದು ನಾಶವಾಗುತ್ತದೆ!

ನಾವು ಭಾರತದ ಪೂರ್ವದಿಂದ ದಾಳಿಯನ್ನು ಆರಂಭಿಸುತ್ತೇವೆ, ಅಲ್ಲಿ ಅವರ ಅತ್ಯಂತ ಮೌಲ್ಯಯುತ ಸಂಪನ್ಮೂಲಗಳಿವೆ, ಮತ್ತು ನಂತರ ಪಶ್ಚಿಮಕ್ಕೆ ಹೋಗುತ್ತೇವೆ. ಭಾರತವು ಹೆದ್ದಾರಿಯಲ್ಲಿ ಓಡುವ ಹೊಳೆಯುವ ಮರ್ಸಿಡಿಸ್ ಕಾರು ಇದ್ದಂತೆ, ಆದರೆ ನಾವು ಮಣ್ಣು ತುಂಬಿದ ಟ್ರಕ್. ಒಂದು ವೇಳೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ, ಹಾನಿಯಾಗುವುದು ಯಾರಿಗೆ?

ಸಂಪಾದಕೀಯ ನಿಲುವು

  • ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಇದನ್ನು ಸಮ್ಮತಿಸುತ್ತಾರೆಯೇ?
  • ‘ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನದ ಪರಿಸ್ಥಿತಿಯನ್ನು ನೋಡಿದರೆ, ಅವರ ಈ ಬೆದರಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ!