ಪೃಥ್ವಿರಾಜ್ ಚವ್ಹಾಣ್‌ ಇವರಿಗೆ ಮಾನನಷ್ಟ ನೋಟಿಸ್ ಕಳಿಸಿದ ಸನಾತನ ಸಂಸ್ಥೆ ! – Sanatan Sanstha Slams Defamation Case

ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ್ ಇವರು ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ’ ಎಂದು ಹೇಳಿದ ಪ್ರಕರಣ

ಮುಂಬಯಿ – ಇತ್ತೀಚೆಗೆ 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಯಿತು. ಈ ತೀರ್ಪಿನಿಂದ ಕಾಂಗ್ರೆಸ್ ಪಕ್ಷದ ‘ಕೇಸರಿ ಭಯೋತ್ಪಾದನೆ’ಯ ಷಡ್ಯಂತ್ರದ ಮುಖವಾಡ ಬಯಲಾಯಿತು. ಈ ಕುರಿತು ವರದಿಗಳೂ ಪ್ರಕಟವಾಗಿದ್ದವು. ಇದರ ನಂತರ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರು “ಕೇಸರಿ ಭಯೋತ್ಪಾದನೆ” ಎಂದು ಹೇಳಬೇಡಿ, ಬದಲಾಗಿ “ಸನಾತನಿ ಭಯೋತ್ಪಾದನೆ” ಎಂದು ಹೇಳಿ, ಎಂದು ಹೇಳುವ ಮೂಲಕ ಸನಾತನ ಧರ್ಮವನ್ನು ಟೀಕಿಸಿದ್ದರು. ಈ ಹೇಳಿಕೆಗೆ ಹಿಂದುತ್ವನಿಷ್ಠ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾದಾಗ, ಅವರು ಸ್ಪಷ್ಟೀಕರಣ ನೀಡುತ್ತಾ, “ನಾನು ಧರ್ಮದ ಬಗ್ಗೆ ಮಾತನಾಡಿಲ್ಲ, ನಾನು ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಹೇಳಿದ್ದೇನೆ,” ಎಂದು ಹೇಳಿದರು. ಈ ಹೇಳಿಕೆ ಸುಳ್ಳು, ಆಧಾರರಹಿತ ಮತ್ತು ದಾರಿ ತಪ್ಪಿಸುವಂತಹದ್ದಾಗಿದೆ. ಈ ಕಾರಣದಿಂದ ಸನಾತನ ಸಂಸ್ಥೆಯ ಟ್ರಸ್ಟಿ ಶ್ರೀ. ವೀರೇಂದ್ರ ಮರಾಠೆ ಅವರ ಪರವಾಗಿ ವಕೀಲರ ಮೂಲಕ 10 ಕೋಟಿ ರೂಪಾಯಿಗಳ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ. ಇದೇ ವೇಳೆ, ಪೃಥ್ವಿರಾಜ್ ಚವ್ಹಾಣ್ ಅವರು ಸನಾತನ ಸಂಸ್ಥೆಯ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿರಬೇಕು, ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಎಚ್ಚರಿಕೆ ನೀಡಿದ್ದಾರೆ.

 

ಈ ನೋಟಿಸ್‌ನಲ್ಲಿ, ಪೃಥ್ವಿರಾಜ್ ಚವ್ಹಾಣ್ ಅವರು 15 ದಿನಗಳಲ್ಲಿ ಲಿಖಿತವಾಗಿ ಕ್ಷಮೆಯಾಚಿಸಬೇಕು, ಮೂಲ ಸಂದರ್ಶನದಷ್ಟೇ ದೊಡ್ಡದಾದ ಬರವಣಿಗೆಯೊಂದಿಗೆ ಕ್ಷಮೆಯನ್ನು ಪ್ರಕಟಿಸಬೇಕು, ಭವಿಷ್ಯದಲ್ಲಿ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡಬಾರದು ಮತ್ತು 10 ಸಾವಿರ ರೂಪಾಯಿ ಕಾನೂನು ವೆಚ್ಚವನ್ನು ಭರಿಸಬೇಕು ಎಂದು ಒತ್ತಾಯಿಸಲಾಗಿದೆ. ಸಂಸ್ಥೆಯ ಗೌರವ ಕಾನೂನು ಸಲಹೆಗಾರ ಹಾಗೂ ಮುಂಬಯಿ ಉಚ್ಚ ನ್ಯಾಯಾಲಯದ ವಕೀಲ ರಾಮದಾಸ ಕೇಸಕರ್ ಅವರು ನೋಟಿಸ್‌ನಲ್ಲಿ ತಿಳಿಸಿರುವ ಪ್ರಕಾರ, ಚವ್ಹಾಣ್ ಅವರ ಹೇಳಿಕೆಯಿಂದ ಸನಾತನ ಸಂಸ್ಥೆಯ ಘನತೆಗೆ ಹಾನಿಯಾಗಿದೆ ಮತ್ತು ಸಾವಿರಾರು ಸಾಧಕರ ಭಾವನೆಗಳಿಗೆ ನೋವುಂಟಾಗಿದೆ. ಈ ನೋಟಿಸ್‌ಗೆ ಉತ್ತರ ನೀಡದಿದ್ದರೆ, ಚವ್ಹಾಣ್ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳನ್ನು ಹೂಡಲಾಗುವುದು.

ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಶ್ರೀ. ಅಭಯ ವರ್ತಕ, “ಪೃಥ್ವಿರಾಜ್ ಚವ್ಹಾಣ್ ಇಂದು ಹೇಳುತ್ತಿದ್ದಾರೆ, ‘ಕೇಸರಿ’ ಮಹಾರಾಷ್ಟ್ರದ ಮರಾಠಿ ಸಂಸ್ಕೃತಿ, ಛತ್ರಪತಿ ಶಿವಾಜಿ, ಸಂತ ಜ್ಞಾನೇಶ್ವರರಿಂದ ಹಿಡಿದು ಎಲ್ಲ ಸಂತರು ಮತ್ತು ವಾರಕರಿಗಳ ‘ಪವಿತ್ರ ಕೇಸರಿ’ಯಾಗಿದೆ. ಆದ್ದರಿಂದ, ಯಾರೂ ‘ಕೇಸರಿ ಭಯೋತ್ಪಾದನೆ’ ಎಂದು ಹೇಳಬಾರದು.

ಅವರು ತಮ್ಮ ಕಾಂಗ್ರೆಸ್ ನಾಯಕರಿಗೂ ಈ ವಿಷಯ ತಿಳಿಸಿದ್ದಾರೆ; ಆದರೆ ಮಾಲೇಗಾಂವ್ ಪ್ರಕರಣ ನಡೆದಾಗ, ಕಾಂಗ್ರೆಸ್‌ನ ಪಿ. ಚಿದಂಬರಂ, ದಿಗ್ವಿಜಯ್ ಸಿಂಗ್, ಸುಶೀಲಕುಮಾರ್ ಶಿಂದೆ ಮುಂತಾದ ನಾಯಕರು ಮನಬಂದಂತೆ ‘ಕೇಸರಿ ಭಯೋತ್ಪಾದನೆ’ ಎಂದು ಹೇಳಿ ಹಿಂದೂಗಳನ್ನು ಗುರಿಯಾಗಿಸಿದಾಗ, ಚವ್ಹಾಣ್ ಅವರಿಗೆ ‘ಕೇಸರಿ’ ಛತ್ರಪತಿಯವರದ್ದು, ಸಂತರುಗಳದ್ದು, ಎಂದು ನೆನಪಾಗಲಿಲ್ಲವೇ? ಇಷ್ಟು ವರ್ಷ ಅವರು ನಿದ್ರೆ ಮಾಡುತ್ತಿದ್ದರೇ?” ಎಂದು ಪ್ರಶ್ನಿಸಿದ್ದಾರೆ.