ಎಚ್ಚರಿಕೆ: ‘ರಾಖಿ’ ಹೆಸರಿನಲ್ಲಿ ಹೊಸ ಆರ್ಥಿಕ ವಂಚನೆ ಬಯಲು!

ಮೋಸದ ಲಿಂಕ್‌ಗಳ ಮೂಲಕ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಕದಿಯುವ ತಂತ್ರ!

ನವದೆಹಲಿ – ರಕ್ಷಾಬಂಧನ ಹಬ್ಬಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗ, ವಂಚನೆಯ ಹೊಸ ರೂಪವೊಂದು ಬೆಳಕಿಗೆ ಬಂದಿದೆ. ಸೈಬರ್ ಅಪರಾಧಿಗಳು ‘ಇಂಡಿಯಾ ಪೋಸ್ಟ್’ ಅಥವಾ ಕೊರಿಯರ್ ಕಂಪನಿಗಳ ಹೆಸರಿನಲ್ಲಿ ನಕಲಿ ಕಿರು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. “ನಿಮ್ಮ ಸಹೋದರ ನಿಮಗೆ ಉಡುಗೊರೆಯನ್ನು ಕಳುಹಿಸಿದ್ದಾರೆ; ಆದರೆ ವಿಳಾಸ ಅಪೂರ್ಣವಾಗಿರುವುದರಿಂದ ನಿಮಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ದಯವಿಟ್ಟು ಕೆಳಗಿನ ಲಿಂಕ್‌ಗೆ ಹೋಗಿ 24 ಗಂಟೆಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಇಲ್ಲದಿದ್ದರೆ ಉಡುಗೊರೆಯನ್ನು ಹಿಂದಿರುಗಿಸಲಾಗುತ್ತದೆ” ಎಂದು ಸಂದೇಶ ಬರೆದಿರುತ್ತದೆ. ಆದರೆ, ಸಂಬಂಧಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಮೊಬೈಲ್ ಫೋನ್ ಹ್ಯಾಕಿಂಗ್ (ನಿಯಂತ್ರಣ ಇನ್ನೊಬ್ಬರ ಕೈಗೆ ಹೋಗುವುದು) ಅಥವಾ ಸಿಮ್ ಕಾರ್ಡ್ ಬ್ಲಾಕ್ ಆಗುವ ಅಪಾಯ ಹೆಚ್ಚಿದೆ.

ಹೀಗೆ ವಂಚನೆ ನಡೆಯುವುದು !

ಕೆಲವರಿಗೆ ಈ ಸಂಬಂಧ ಮೊಬೈಲ್ ಕರೆಗಳೂ ಬರುತ್ತವೆ. ಮಾತನಾಡುವ ವ್ಯಕ್ತಿ ‘ಇಂಡಿಯಾ ಪೋಸ್ಟ್’ ಅಥವಾ ಕೊರಿಯರ್ ಸಂಸ್ಥೆಯ ಸಿಬ್ಬಂದಿ ಎಂದು ಹೇಳುತ್ತಾರೆ. ಆಗ ಅವರ ಮಾತನ್ನು ನಂಬಿ ಜನರು ತಮ್ಮ ವಿಳಾಸವನ್ನು ಅಪ್‌ ಡೇಟ್ ಮಾಡುತ್ತಾರೆ. ನಂತರ ಇನ್ನೊಂದು ಲಿಂಕ್‌ ಗೆ ಕರೆದೊಯ್ಯಲಾಗುತ್ತದೆ ಮತ್ತು ಅಲ್ಲಿ 50 ಅಥವಾ 100 ರೂಪಾಯಿ ‘ರೀ-ಡೆಲಿವರಿ ಚಾರ್ಜ್’ ಪಾವತಿಸಲು ಕೇಳಲಾಗುತ್ತದೆ. ಮೊತ್ತ ಕಡಿಮೆ ಇರುವುದರಿಂದ ಜನರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹಣ ಪಾವತಿಸುತ್ತಾರೆ, ಮತ್ತು ಅವರ ಕಾರ್ಡ್‌ನ ಎಲ್ಲಾ ಮಾಹಿತಿಗಳು ಸೈಬರ್ ಅಪರಾಧಿಗಳ ಕೈ ಸೇರುತ್ತವೆ.

ವಂಚನೆಯಿಂದ ಪಾರಾಗಲು ಇವುಗಳನ್ನು ಮಾಡಿ!

1. ಅಪರಿಚಿತ ಕಿರುಸಂದೇಶಗಳು ಅಥವಾ ಇ-ಮೇಲ್‌ಗಳಿಂದ ಎಚ್ಚರಿಕೆಯಿಂದ ಇರಿ.

2. ಅಜ್ಞಾತ ಲಿಂಕ್‌ ಗಳನ್ನು ತೆರೆಯಬೇಡಿ.

3. ಮೊಬೈಲ್‌ನಲ್ಲಿ ಮಾತನಾಡುವಾಗ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಪಾವತಿಸಬೇಡಿ.

4. ‘ಒಟಿಪಿ’, ‘ಪಿನ್’ ನಂತಹ ಸೂಕ್ಷ್ಮ ಮಾಹಿತಿಯನ್ನು ಯಾರಿಗೂ ನೀಡಬೇಡಿ.

5. ಸೈಬರ್ ವಂಚನೆ ನಡೆದರೆ ತಕ್ಷಣ 1930 ಕ್ಕೆ ಸಂಪರ್ಕಿಸಿ, ಹಾಗೂ cybercrime.gov.in ಈ ಸೈಬರ್ ಅಪರಾಧ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿರಿ.

ನಾವು ಇಂತಹ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ! – ಅಂಚೆ ಇಲಾಖೆ

ಅಂಚೆ ಇಲಾಖೆಯು ನಾವು ಇಂತಹ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ, ಹಾಗೂ ಸೈಬರ್ ವಿಭಾಗವು ಸಹ ಸಾರ್ವಜನಿಕರಿಗೆ ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.