Himachal Heavy Rains : ಉತ್ತರ ಭಾರತದಲ್ಲಿ ಧಾರಾಕಾರ ಮಳೆಯಿಂದ ಹಾಹಾಕಾರ: ಹಿಮಾಚಲ ಪ್ರದೇಶದಲ್ಲಿ 106 ಜನರ ಸಾವು !

ಅಮರನಾಥ ಯಾತ್ರೆ ದಿನವಿಡಿ ಸ್ಥಗಿತ

ನವ ದೆಹಲಿ – ಕಳೆದ ಒಂದು ತಿಂಗಳಿನಿಂದ ದೇಶದ ವಿವಿಧೆಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕೇವಲ ಗುಡ್ಡಗಾಡು ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿಯೇ 106 ಜನರು ಸಾವನ್ನಪ್ಪಿದ್ದಾರೆ. ಇಲ್ಲಿ ಮೇಘಸ್ಫೋಟದಂತಹ ಘಟನೆಗಳಿಂದ 800 ಕೋಟಿಗೂ ಹೆಚ್ಚು ಮೌಲ್ಯದ ಸರಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಯ ಹಾನಿಯಾಗಿದೆ.

 ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ದುಃಸ್ಥಿತಿ

ಕಳೆದ ಒಂದು ವಾರದಿಂದ ದೆಹಲಿ, ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್.ಸಿ.ಆರ್., ಅಂದರೆ ನ್ಯಾಷನಲ್ ಕ್ಯಾಪಿಟಲ್ ರೀಜನ್) ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪ್ರತಿಕೂಲ ಹವಾಮಾನದಿಂದಾಗಿ ಜುಲೈ 16 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 6 ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕಾಯಿತು.

ಆಸಾಮಿನಲ್ಲಿ ಭೂಕುಸಿತ

ಆಸಾಮಿನ ದಿಮಾಹಾಸಾವೊದಲ್ಲಿ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ವೇಳೆ ಭೂಕುಸಿತ ಸಂಭವಿಸಿದೆ. ಇದರಲ್ಲಿ 2 ಜನರು ಮೃತಪಟ್ಟಿದ್ದು, 5 ಜನರು ಗಾಯಗೊಂಡಿದ್ದಾರೆ.

ಬಿಹಾರದಲ್ಲಿ ಸಿಡಿಲಾರ್ಭಟ

ರಾಜ್ಯದ ನಾಲಂದಾ ಜಿಲ್ಲೆಯ ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಇಲ್ಲಿನ ಫಾಲ್ಗು ನದಿಯ ನೀರಿನ ಮಟ್ಟವು ನಿರಂತರವಾಗಿ ಏರುತ್ತಿದೆ. ಕೇವಲ ಜುಲೈ 16 ರಂದು ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು 20 ಜನರು ಸಾವನ್ನಪ್ಪಿದ್ದಾರೆ.

ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆಗೂ ಅಡ್ಡಿ !

ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದರಿಂದ ಅಮರನಾಥ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ. ಇಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜುಲೈ 17 ರಂದು ಎರಡೂ ಮಾರ್ಗಗಳಲ್ಲಿ ಯಾವುದೇ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ. ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಜುಲೈ 18ರಿಂದ ಯಾತ್ರೆಯು ಪುನಃ ಪ್ರಾರಂಭವಾಗಲಿದೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ. ಇಲ್ಲಿಯವರೆಗೆ 2 ಲಕ್ಷ 47 ಸಾವಿರ ಯಾತ್ರಾರ್ಥಿಗಳು ಪವಿತ್ರ ಗುಹೆಗೆ ಭೇಟಿ ನೀಡಿದ್ದಾರೆ.