Minorities Benefits : ಕೇಂದ್ರ ಸರಕಾರದಿಂದ ಹಿಂದೂಗಳಿಗಿಂತ ಅಲ್ಪಸಂಖ್ಯಾತರಿಗೆ ಹೆಚ್ಚಿನ ನೆರವು!

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇವರಿಂದ ಮಾಹಿತಿ

ನವದೆಹಲಿ – ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದಿಂದ ಬಹುಸಂಖ್ಯಾತ ಸಮುದಾಯಕ್ಕಿಂತ, ಅಂದರೆ ಹಿಂದೂಗಳಿಗಿಂತ, ಹೆಚ್ಚಿನ ನಿಧಿಯನ್ನು ನೀಡಲಾಗುತ್ತಿದೆ. ಹಿಂದೂಗಳಿಗೆ ಸಿಗುವ ಪ್ರತಿಯೊಂದು ಸೌಲಭ್ಯವೂ ಅಲ್ಪಸಂಖ್ಯಾತರಿಗೂ ಸಿಗುತ್ತದೆ; ಆದರೆ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳು ಹಿಂದೂಗಳಿಗೆ ಸಿಗುವುದಿಲ್ಲ. ಅಲ್ಪಸಂಖ್ಯಾತರಿಗೆ ಹಿಂದೂಗಳಿಗಿಂತ ಹೆಚ್ಚು ಸರಕಾರಿ ನೆರವು ಸಿಗುತ್ತದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಂಗ್ಲ ದೈನಿಕ ‘ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ನಿಧಿಯಲ್ಲಿ ಯಾವುದೇ ಕಡಿತವಿಲ್ಲ!

‘ಸರಕಾರ ಅಲ್ಪಸಂಖ್ಯಾತರಿಗಾಗಿ ಇರುವ ನಿಧಿಯಲ್ಲಿ ಏಕೆ ಕಡಿತ ಮಾಡಿದೆ?’ ಎಂಬ ಪ್ರಶ್ನೆಗೆ ರಿಜಿಜು ಅವರು, ಅಲ್ಪಸಂಖ್ಯಾತರ ನಿಧಿಯಲ್ಲಿ ಯಾವುದೇ ರೀತಿಯ ಕಡಿತ ಮಾಡಿಲ್ಲ, ಅಲ್ಪಸಂಖ್ಯಾತರಿಗಾಗಿ ಕೇಂದ್ರ ಸರಕಾರ  ಶೇ 60 ಮತ್ತು ರಾಜ್ಯ ಸರಕಾರ ಶೇ. 40 ನಿಧಿಯನ್ನು ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇದು 90:10 ಅನುಪಾತದಲ್ಲಿದೆ. ಕೇಂದ್ರ ಸರಕಾರದಿಂದ ನೀಡಲಾಗುವ ನೆರವಿನಲ್ಲಿ ತಾರ್ಕಿಕತೆ ತರಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಸಹಾಯ ಮಾಡಲಾಗುತ್ತಿದೆ. ನಿಧಿಯಲ್ಲಿ ಯಾವುದೇ ಕಡಿತ ಮಾಡಿಲ್ಲ. ಕಳೆದ 10 ವರ್ಷಗಳಲ್ಲಿ ಅಲ್ಪಸಂಖ್ಯಾತರಿಗಾಗಿ ಇರುವ ಶಿಷ್ಯವೇತನದಲ್ಲಿ ಶೇ.172 ರಷ್ಟು  ಹೆಚ್ಚಳ ಮಾಡಲಾಗಿದೆ. ಈ ಶಿಷ್ಯವೇತನದ ಲಾಭ ಪಡೆಯುವ ಹೆಣ್ಣುಮಕ್ಕಳ ಪ್ರಮಾಣ ಶೇ. 182 ರಷ್ಟು ಹೆಚ್ಚಾಗಿದೆ, ಎಂದು ಹೇಳಿದರು.

ಅಲ್ಪಸಂಖ್ಯಾತರಿಗಾಗಿ ಇರುವ ಶಿಷ್ಯವೇತನದ ಹೆಸರಿನಲ್ಲಿ ಸರಕಾರಕ್ಕೆ ವಂಚನೆ

‘ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್’ಗೆ ಸಂಬಂಧಿಸಿದ ದೂರುಗಳ ಬಗ್ಗೆ ರಿಜಿಜು ಮಾತನಾಡುತ್ತಾ, ದೇಶದಲ್ಲಿ ಅಲ್ಪಸಂಖ್ಯಾತರಿಗಾಗಿ ಶಿಷ್ಯವೇತನಗಳಿವೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೂ ಶಿಷ್ಯವೇತನಗಳಿವೆ. 3-4 ವರ್ಷಗಳ ಹಿಂದೆ ನಿಧಿಯ ದುರುಪಯೋಗವಾಗಿರುವುದು ಬೆಳಕಿಗೆ ಬಂದಿತ್ತು. ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಸಾವಿರಾರು ನಕಲಿ ಹೆಸರುಗಳನ್ನು ನೋಂದಾಯಿಸಲಾಗಿತ್ತು. ಶಿಷ್ಯವೇತನದ ಹೆಸರಿನಲ್ಲಿ ಸರಕಾರದ ಹಣವನ್ನು ಪಡೆಯಲಾಗಿತ್ತು. ಸರಕಾರವನ್ನು ವಂಚಿಸಿದ ಬೆಳಕಿಗೆ ಬಂದಿತ್ತು. ಇಂತಹ ಅನೇಕ ಪ್ರಕರಣಗಳು ಹೊರಬಂದ ನಂತರ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಯಿತು. ಈ ಕುರಿತ ಮೊಕದ್ದಮೆ ಅಂತಿಮ ಹಂತದಲ್ಲಿದೆ.