“ಭಾರತೀಯ ಮುಸಲ್ಮಾನರು ಪಾಕಿಸ್ತಾನಕ್ಕಿಂತ ಹೆಚ್ಚು ಪ್ರಾಮಾಣಿಕರು!” – ಸಂಸದ ಅಸಾದುದ್ದೀನ್ ಓವೈಸಿ ಪಾಕ್ ಗೆ ತಿರುಗೇಟು

ಕುವೈತ್ ಸಿಟಿ (ಕುವೈತ್) – “ಪಾಕಿಸ್ತಾನವು ಧಾರ್ಮಿಕತೆಯನ್ನು ಆಧರಿಸಿ ‘ಅವರು ಮುಸಲ್ಮಾನರು’ ಎಂದು ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದೆ. ನಾವು ಭಾರತೀಯ ಮುಸಲ್ಮಾನರು ಪಾಕಿಸ್ತಾನಕ್ಕಿಂತ ಹೆಚ್ಚು ಪ್ರಾಮಾಣಿಕರು” ಎಂದು ಎಐಎಂಐಎಂ (ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಕುರಿತು ಮಾಹಿತಿ ನೀಡಲು ಭಾರತವು ವಿವಿಧ ದೇಶಗಳಿಗೆ ಕೆಲವು ನಿಯೋಗಗಳನ್ನು ಕಳುಹಿಸಿತ್ತು. ಇವುಗಳಲ್ಲಿ ಒಂದು ನಿಯೋಗವು ಕುವೈತ್ ಗೆ ತೆರಳಿದ್ದು, ಓವೈಸಿ ಅವರು ಈ ನಿಯೋಗದಲ್ಲಿದ್ದಾರೆ. ಕುವೈತ್ ನಲ್ಲಿ ಅವರು ಮಾತನಾಡುತ್ತಿದ್ದಾಗ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.

‘ಮೂರ್ಖ ವಿದೂಷಕರಿಗೆ’ ನಕಲು ಮಾಡಲು ಸಹ ಬುದ್ಧಿ ಇಲ್ಲ!

ಪಾಕಿಸ್ತಾನದ ಸೇನಾ ಮುಖ್ಯಸ್ಥರು, ಪ್ರಧಾನಿ ಶಾಹಬಾಜ ಷರೀಫ್ ಅವರಿಗೆ ಒಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ಇದು ‘ಆಪರೇಷನ್ ಸಿಂದೂರ’ಗೆ ಪಾಕಿಸ್ತಾನದ ಸೇನೆ ನೀಡಿದ ‘ಪ್ರತಿದಾಳಿ’ಯ ಛಾಯಾಚಿತ್ರ ಎಂದು ಹೇಳಲಾಗಿತ್ತು; ಆದರೆ ವಾಸ್ತವವಾಗಿ ಇದು ಚೀನಾದ ಸೇನೆಯ ಅಭ್ಯಾಸದ ಛಾಯಾಚಿತ್ರ ಎಂಬುದು ಬಹಿರಂಗವಾಗಿದೆ. ಈ ಬಗ್ಗೆ ಓವೈಸಿ ಅವರು ಪಾಕಿಸ್ತಾನವನ್ನು ಗೇಲಿ ಮಾಡಿದರು. “ಈ ಮೂರ್ಖ ವಿದೂಷಕರು (ಜೋಕರ್ ಗಳು) ಭಾರತವನ್ನು ಎದುರಿಸಲು ಹೊರಟಿದ್ದಾರೆ. 2019 ರ ಚೀನೀ ಸೇನೆಯೊಂದಿಗೆ ನಡೆಸಿದ ಅಭ್ಯಾಸದ ಒಂದು ಛಾಯಾಚಿತ್ರವನ್ನು ಅವರು ಶಾಹಬಾಜ ಷರೀಫ್ ಅವರಿಗೆ ‘ಭಾರತದ ಮೇಲಿನ ವಿಜಯ’ ಎಂದು ಉಡುಗೊರೆಯಾಗಿ ನೀಡಿದ್ದಾರೆ. ಪಾಕಿಸ್ತಾನ ಯಾವಾಗಲೂ ಇದನ್ನೇ ಮಾಡುತ್ತದೆ. ನಕಲು ಮಾಡಲು ಸಹ ಬುದ್ಧಿ ಬೇಕು. ಪಾಕಿಸ್ತಾನಕ್ಕೆ ಬುದ್ಧಿ ಇಲ್ಲ” ಎಂದವರು ಟೀಕಿಸಿದರು.

ಪಾಕಿಸ್ತಾನವನ್ನು ಎಫ್.ಎ.ಟಿ.ಎ.ಯ ‘ಗ್ರೇ ಲಿಸ್ಟ್’ಗೆ ಸೇರಿಸಬೇಕು!

ಅಸಾದುದ್ದೀನ್ ಓವೈಸಿ ಮುಂದೆ ಮಾತನಾಡಿ, ಎಫ್.ಎ.ಟಿ.ಎ. (‘ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ ಅಥವಾ ‘ಆರ್ಥಿಕ ಕಾರ್ಯಪಡೆ’) ಯ ಗ್ರೇ ಲಿಸ್ಟ್ ನ ಮಹತ್ವವೇನೆಂದರೆ, ನೀವು ಹಣದ ವ್ಯವಹಾರ ಮಾಡಿದಾಗ, ಆ ದೇಶದ ಪ್ರತಿಯೊಂದು ವ್ಯವಹಾರದ ಮೇಲೆ ಸೂಕ್ಷ್ಮವಾಗಿ ನಿಗಾ ಇಡಲಾಗುತ್ತದೆ. ಪಾಕಿಸ್ತಾನವು ಭಾರತದ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರಿಗೆ ಹಣ ಪೂರೈಸಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತದೆ. ಆದ್ದರಿಂದ ಪಾಕಿಸ್ತಾನವನ್ನು ಮತ್ತೆ ಎಫ್.ಎ.ಟಿ.ಎ. ಗ್ರೇ ಲಿಸ್ಟ್ ನಲ್ಲಿ ಸೇರಿಸಬೇಕು; ಏಕೆಂದರೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ನೀಡಲಾಗುವ 2 ಶತಕೋಟಿ ಡಾಲರ್ ಸಾಲವನ್ನು ಪಾಕಿಸ್ತಾನಿ ಸೇನೆಯು ಬಳಸಿಕೊಳ್ಳಲಿದೆ ಎಂದು ಓವೈಸಿ ತಿಳಿಸಿದರು.