‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನದಿಂದ ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ: ೧೨ ನಾಗರಿಕರ ಸಾವು

ಗುರುದ್ವಾರದ ಮೇಲೆ ಶೆಲ್ ದಾಳಿ

ಜಮ್ಮು (ಜಮ್ಮು-ಕಾಶ್ಮೀರ) – ಭಾರತವು ‘ಆಪರೇಷನ್ ಸಿಂಧೂರ್’ ಮೂಲಕ ಪಾಕ್‌ನ ಭಯೋತ್ಪಾದಕ ನೆಲೆಗಳ ಮೇಲೆ ಕ್ರಮ ಕೈಗೊಂಡ ನಂತರ ಕೆರಳಿದ ಪಾಕಿಸ್ತಾನ ಸೈನ್ಯವು ಜಮ್ಮುವಿನ ಪೂಂಚ್‌ ನಿಯಂತ್ರಣ ರೇಖೆಯ ಮೇಲೆ ಗುಂಡಿನ ದಾಳಿ ನಡೆಸಿತು ಮತ್ತು ಶೆಲ್‌ಗಳನ್ನು ಹಾರಿಸಿತು. ಈ ಗಡಿ ಪ್ರದೇಶದ ವಸತಿ ಪ್ರದೇಶಗಳು, ಸರಕಾರಿ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ಪಾಕ್ ಶೆಲ್‌ಗಳನ್ನು ಹಾರಿಸಿತು. ಈ ದಾಳಿಯಲ್ಲಿ ೧೨ ಮಂದಿ ಸಾವನ್ನಪ್ಪಿದರು ಮತ್ತು ೪೦ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ದಾಳಿಯಲ್ಲಿ ಓರ್ವ ಭಾರತೀಯ ಸೈನಿಕ ಹುತಾತ್ಮನಾದರು. ಪಾಕಿಸ್ತಾನಿ ಸೈನ್ಯವು ಶ್ರೀ ಗುರು ಸಿಂಗ್ ಸಭಾ ಸಾಹಿಬ್ ಗುರುದ್ವಾರದ ಮೇಲೆ ಶೆಲ್ ದಾಳಿ ನಡೆಸಿದ ಪರಿಣಾಮ ೩ ಜನರು ಸಾವನ್ನಪ್ಪಿದರು. ಶಿರೋಮಣಿ ಅಕಾಲಿ ದಳವು ಪಾಕಿಸ್ತಾನಿ ಸೈನ್ಯದ ಈ ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ.

೧. ಕಾಶ್ಮೀರದಲ್ಲಿ ಉರಿ ಮತ್ತು ತಂಗ್ಧಾರ್ ವಲಯಗಳಲ್ಲೂ ಪಾಕಿಸ್ತಾನದಿಂದ ಗುಂಡಿನ ದಾಳಿಯೊಂದಿಗೆ ಶೆಲ್‌ಗಳನ್ನು ಹಾರಿಸಲಾಗಿದೆ. ಕಳೆದ ೧೩ ದಿನಗಳಿಂದ ಪಾಕ್‌ನಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿದೆ.

೨. ಜಮ್ಮು-ಕಾಶ್ಮೀರದ ಬಂಡಿಪೋರ, ಬಾರಾಮುಲ್ಲಾ, ಬಡ್ಗಾಮ್, ಜಮ್ಮು, ಕಥುವಾ, ಕುಪ್ವಾರ, ರಾಜೌರಿ, ಸಾಂಬಾ ಮತ್ತು ಪಂಜಾಬ್‌ನ ಅಮೃತಸರ, ಫಾಜ಼ಿಲ್ಕಾ, ಫಿರೋಜ್‌ಪುರ, ಗುರುದಾಸ್‌ಪುರ, ಪಠಾಣ್‌ಕೋಟ್, ತರನ್-ತಾರ್ನ್ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.

೩. ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ರಾಜಸ್ಥಾನ ಮತ್ತು ಗುಜರಾತ್‌ನ ಪಾಕಿಸ್ತಾನದ ಗಡಿಯಲ್ಲಿ ಕಟ್ಟೆಚ್ಚರದ ಎಚ್ಚರಿಕೆ ನೀಡಲಾಗಿದೆ.