ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!

  • ಭಾಜಪ ಸರಕಾರವು ಮಧ್ಯಾಹ್ನದ ಬಿಸಿಯೂಟ ಪೂರೈಸುವ ಗುತ್ತಿಗೆಯನ್ನು ‘ಇಸ್ಕಾನ್’ಗೆ ನೀಡಿದೆ

  • ಬಂಗಾಳದ ಮೇಲೆ ಶಾಖಾಹಾರಿ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆ

ಕೊಲಕಾತಾ (ಬಂಗಾಳ) – ‘ಇಸ್ಕಾನ್’ ಈ ಆಧ್ಯಾತ್ಮಿಕ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿರುವುದರಿಂದ ಬಂಗಾಳದಲ್ಲಿ ವಿವಾದ ಸೃಷ್ಟಿಯಾಗಿದೆ. ವಿರೋಧ ಪಕ್ಷಗಳು ‘ಭಾಜಪ ಬಂಗಾಳದಲ್ಲಿ ಶಾಖಾಹಾರಿ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿವೆ. ಕೊಲಕಾತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸಿದ್ಧಪಡಿಸುವ ಗುತ್ತಿಗೆಯನ್ನು ‘ಇಸ್ಕಾನ್’ಗೆ ನೀಡಲು ರಾಜ್ಯದ ನೂತನ ಭಾಜಪ ಸರಕಾರವು ನಿರ್ಧರಿಸಿದೆ. ಈ ಕಾರಣದಿಂದ ಇನ್ನು ಮುಂದೆ ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗುವುದು. ಮೊಟ್ಟೆಯ ಬದಲಾಗಿ ಈಗ ಪನೀರ್, ರಾಜಮಾ, ಸೋಯಾಬೀನ್ ಮತ್ತು ಹಾಲಿನ ಉತ್ಪನ್ನಗಳಂತಹ ಶಾಖಾಹಾರಿ ಪರ್ಯಾಯಗಳನ್ನು ನೀಡಲಾಗುವುದು.

ವಿರೋಧ ಪಕ್ಷಗಳ ವಾದ!

ವಿರೋಧ ಪಕ್ಷದ ನಾಯಕ ಋತುಬ್ರತ್ ಬ್ಯಾನರ್ಜಿ ಅವರು ಮೊಟ್ಟೆ ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಬಂಗಾಳಿ ಮಕ್ಕಳು ತಲೆಮಾರುಗಳಿಂದ ಪ್ರಾಣಿಜನ್ಯ ಪ್ರೊಟೀನ್ ತಿಂದು ಬೆಳೆದಿದ್ದಾರೆ, ಆದ್ದರಿಂದ ಪೋಷಕಾಂಶದ ಯೋಜನೆಯು ಸ್ಥಳೀಯ ಆಹಾರ ಸಂಸ್ಕೃತಿಗೆ ಅನುಗುಣವಾಗಿಯೇ ಇರಬೇಕು” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ಸಿನ ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯಾನ್ ಅವರೂ ಸಹ ಸರಕಾರವು ಕಲ್ಯಾಣ ಯೋಜನೆಯ ಮಾಧ್ಯಮದಿಂದ ಶಾಖಾಹಾರವನ್ನು ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

ಸರಕಾರದ ಸಮರ್ಥನೆ

ಇನ್ನೊಂದೆಡೆ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ವಿಧಾನಸಭೆಯಲ್ಲಿ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ, “ಮಕ್ಕಳಿಗೆ ಗುಣಮಟ್ಟದ ಮತ್ತು ಸ್ವಚ್ಛವಾದ ಆಹಾರವನ್ನು ಖಚಿತಪಡಿಸುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಯಾರ ಮೇಲೂ ಧಾರ್ಮಿಕ ನಂಬಿಕೆಯನ್ನು ಹೇರುತ್ತಿಲ್ಲ” ಎಂದು ಹೇಳಿದ್ದಾರೆ. ಪೋಷಕಾಂಶಗಳನ್ನು ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಬೇಕೇ ಹೊರತು, ಆಹಾರದಲ್ಲಿ ಮೊಟ್ಟೆ ಇದೆಯೇ ಇಲ್ಲವೇ ಎಂಬುವುದರ ಮೇಲಲ್ಲ ಎಂದು ಶಾಲಾ ಶಿಕ್ಷಣ ಸಚಿವ ದೀಪಕ ಬರ್ಮನ್ ತಿಳಿಸಿದ್ದಾರೆ.

ಶಾಖಾಹಾರಿ ಆಹಾರ ಬಂಗಾಳಕ್ಕೆ ಹೊಸದೇನಲ್ಲ! – ಇಸ್ಕಾನ್ ಅಭಿಪ್ರಾಯ

ಇಸ್ಕಾನ್‌ನ ಕೊಲಕಾತಾ ಉಪಾಧ್ಯಕ್ಷ ರಾಧಾರಮಣ ದಾಸ್ ಅವರು, “ಸಂಸ್ಥೆಯು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ 12 ಲಕ್ಷ ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸುತ್ತಿದೆ. ಬಂಗಾಳದಲ್ಲಿ ಪಾಲಿಸಲಾಗುವ ‘ಗೌಡೀಯ ವೈಷ್ಣವ’ ಪರಂಪರೆಯೂ ಸಹ ಇದೇ ಮಣ್ಣಿನದ್ದಾಗಿರುವುದರಿಂದ ಶಾಖಾಹಾರಿ ಆಹಾರವು ಬಂಗಾಳಕ್ಕೆ ಹೊಸದೇನಲ್ಲ, ಹಾಗೆಯೇ ಬೇಳೆಕಾಳುಗಳು ಮತ್ತು ಸೋಯಾಬೀನ್‌ನಿಂದಲೂ ಅಗತ್ಯವಿರುವ ಪ್ರೊಟೀನ್ ದೊರೆಯುತ್ತದೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮೂಲತಃ ಶಾಲೆಗಳಲ್ಲಿ ಮಾಂಸಾಹಾರಿ ಪದಾರ್ಥಗಳನ್ನು ಏಕೆ ನೀಡಲಾಗುತ್ತಿತ್ತು? ಮಕ್ಕಳು ತಮ್ಮ ಸ್ವಂತ ಮನೆಯಲ್ಲಿ ಮಾಂಸಾಹಾರವನ್ನು ಸೇವಿಸಬಹುದು, ಅದರ ಮೇಲೆ ಯಾರೂ ನಿಷೇಧ ಹೇರಲು ಸಾಧ್ಯವಿಲ್ಲ. ಹೀಗಿರುವಾಗ, ಮೊಟ್ಟೆಯನ್ನು ಕೈಬಿಟ್ಟ ನಿರ್ಧಾರವನ್ನು ಉದ್ದೇಶಪೂರ್ವಕವಾಗಿಯೇ ವಿರೋಧಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ!