Modi Trump Meeting : ಪ್ರಧಾನಿ ಮೋದಿಯೇ ಬಾಂಗ್ಲಾದೇಶ ಸಮಸ್ಯೆಯನ್ನು ಪರಿಹರಿಸುವರು ! – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರಿಂದ ಸ್ಪಷ್ಟತೆ !

ವಾಷಿಂಗ್ಟನ್ (ಅಮೇರಿಕಾ) – ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಓವಲ್ ಕಚೇರಿಯಲ್ಲಿ ಭೇಟಿಯಾದರು. ಅಧ್ಯಕ್ಷರಾಗಿ ಎರಡನೇ ಬಾರಿ ಪುನರಾಯ್ಕೆಯಾದ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಈ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಇದರಲ್ಲಿ ವ್ಯಾಪಾರ, ರಷ್ಯಾ-ಉಕ್ರೇನ್ ಯುದ್ಧ ಇತ್ಯಾದಿಗಳು ಸೇರಿದ್ದವು. ಇದಾದ ನಂತರ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಈ ಬಾರಿ ಬಾಂಗ್ಲಾದೇಶದ ಬಗ್ಗೆ ಮಾತನಾಡಿದ ಟ್ರಂಪ್ ಇವರು, “ಬಾಂಗ್ಲಾದೇಶದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಅಮೆರಿಕ ಹೊಣೆಯಲ್ಲ” ಎಂದು ಹೇಳಿದರು. ಬಾಂಗ್ಲಾದೇಶ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ನಿರ್ಧರಿಸುವ ಜವಾಬ್ದಾರಿಯನ್ನು ನಾನು ಪ್ರಧಾನಿ ಮೋದಿಯವರಿಗೆ ಬಿಡುತ್ತೇನೆ.’ ‘ಈ ಬಗ್ಗೆ ಪ್ರಧಾನಿ ಮೋದಿ ಯಾವುದೇ ಹೇಳಿಕೆ ನೀಡಿಲ್ಲ.

ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ನಾವು ತಟಸ್ಥರಲ್ಲ! – ಪ್ರಧಾನಿ ಮೋದಿ

ನಾನು ಯಾವಾಗಲೂ ರಷ್ಯಾ ಮತ್ತು ಉಕ್ರೇನ್ ಜೊತೆ ಸಂಪರ್ಕದಲ್ಲಿದ್ದೂ ಎರಡೂ ದೇಶಗಳ ನಾಯಕರನ್ನು ಭೇಟಿ ಮಾಡಿದ್ದೇನೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥವಾಗಿದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ; ಆದರೆ ಭಾರತ ತಟಸ್ಥವಾಗಿಲ್ಲ, ನಾವು ಶಾಂತಿಯ ಪರವಾಗಿ ನಿಲ್ಲುತ್ತೇವೆ ಎಂದು ಪ್ರಧಾನಿ ಮೋದಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಅವರು ಮಾತು ಮುಂದುವರೆಸಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಮ್ಮುಖದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಇದು ಯುದ್ಧದ ಸಮಯವಲ್ಲ, ಸಮಸ್ಯೆಗಳು ಯುದ್ಧಭೂಮಿಯಲ್ಲಿ ಪರಿಹಾರವಾಗುವುದಿಲ್ಲ, ಬದಲಾಗಿ ಮಾತುಕತೆಯ ಮೂಲಕ ಪರಿಹಾರವಾಗುತ್ತವೆ. ರಷ್ಯಾ ಮತ್ತು ಉಕ್ರೇನ್ ಎರಡೂ ಮಾತುಕತೆಗೆ ಬಂದಾಗ ಮಾತ್ರ ಯುದ್ಧಕ್ಕೆ ಪರಿಹಾರವನ್ನು ಕಂಡುಹಿಡಿಯಬಹುದು’, ಎಂದು ನಾನು ಹೇಳಿದ್ದೆ. ಟ್ರಂಪ್ ತೆಗೆದುಕೊಂಡ ಕ್ರಮಗಳು ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವಲ್ಲಿ ಶೀಘ್ರದಲ್ಲೇ ಯಶಸ್ವಿಯಾಗುತ್ತವೆ’, ಎಂದು ಮೋದಿ ಆಶಿಸಿದರು.

ಈ ಸಂದರ್ಭದಲ್ಲಿ ಟ್ರಂಪ್‌ ಇವರು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ಚೀನಾದ ಪಾತ್ರವೂ ಮುಖ್ಯವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಬರುವ ಮುನ್ನ ಚೀನಾದೊಂದಿಗಿನ ನನ್ನ ಸಂಬಂಧ ಚೆನ್ನಾಗಿತ್ತು. ಚೀನಾ ಜಗತ್ತಿನ ಒಂದು ಪ್ರಮುಖ ರಾಷ್ಟ್ರವಾಗಿದೆ. ಚೀನಾ, ಭಾರತ, ರಷ್ಯಾ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಬಹುದು.

ಭಯೋತ್ಪಾದಕ ತಹಾವೂರ್ ರಾಣಾನ ಹಸ್ತಾಂತರಕ್ಕೆ ಟ್ರಂಪ್ ಅನುಮೋದನೆ

ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಒತ್ತಿ ಹೇಳಿದರು. ಈ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಅಮೆರಿಕ ಭರವಸೆ ನೀಡಿದೆ. ನವೆಂಬರ್ 26, 2008 ರ ಮುಂಬಯಿ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಹಸ್ತಾಂತರಿಸಲು ಟ್ರಂಪ್ ಅನುಮೋದನೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಈ ನಿರ್ಧಾರವನ್ನು ಘೋಷಿಸಿದರು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಹಸ್ತಾಂತರದ ಬಗ್ಗೆ ಸುಳಿವು ನೀಡಿದರು. ನಾವು ಒಬ್ಬ ಅತ್ಯಂತ ಹಿಂಸಾತ್ಮಕ ವ್ಯಕ್ತಿಯನ್ನು (ತಹವ್ವೂರ್ ರಾಣಾ) ತಕ್ಷಣ ಭಾರತಕ್ಕೆ ಕಳುಹಿಸುತ್ತಿದ್ದೇವೆ. ಈ ಕುರಿತು ನಮಗೆ ಹಲವು ವಿನಂತಿಗಳು ಬಂದಿವೆ. ನಾವು ಅಪರಾಧದ ವಿರುದ್ಧ ಭಾರತದೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಭಾರತದಲ್ಲಿನ ಪರಿಸ್ಥಿತಿಯನ್ನು ಸುಧಾರಿಸಲು ಬಯಸುತ್ತೇವೆ’, ಎಂದು ಹೇಳಿದರು.

ಜನವರಿ 21 ರಂದು, ಅಮೇರಿಕಾದ ಸುಪ್ರೀಂ ಕೋರ್ಟ್ ಹಸ್ತಾಂತರವನ್ನು ವಿರೋಧಿಸುವ ಅರ್ಜಿಯನ್ನು ತಿರಸ್ಕರಿಸಿತು. ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಜೈಲಿನಲ್ಲಿದ್ದಾನೆ.

ಭಾರತ ಅಕ್ರಮ ವಲಸಿಗರನ್ನು ವಾಪಸ್ ತೆಗೆದುಕೊಳ್ಳಲಿದೆ !

ಅಕ್ರಮ ವಲಸೆಯ ವಿಷಯದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇವರು, ಇತರ ದೇಶಗಳಲ್ಲಿ ಅಕ್ರಮವಾಗಿ ವಾಸಿಸುವ ಜನರಿಗೆ ಅಲ್ಲಿ ಉಳಿಯಲು ಕಾನೂನುಬದ್ಧ ಹಕ್ಕಿಲ್ಲ, ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ, ಯಾವುದೇ ಭಾರತೀಯ ನಾಗರಿಕರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದರೆ, ಅವರನ್ನು ವಾಪಸ್ ಕರೆದುಕೊಂಡು ಹೋಗಲು ಭಾರತ ಸಿದ್ಧವಾಗಿದೆ, ಎಂದು ನಾವು ಯಾವಾಗಲೂ ಹೇಳಿದ್ದೇವೆ, ಎಂದು ಹೇಳಿದರು.
ಮೋದಿ ಮಾತು ಮುಂದುವರೆಸುತ್ತಾ, ಈ ಜನರು ಸಾಮಾನ್ಯ ಕುಟುಂಬಗಳಿಂದ ಬಂದವರಾಗಿರುತ್ತಾರೆ. ಅವರಿಗೆ ದೊಡ್ಡ ಕನಸುಗಳನ್ನು ತೋರಿಸಲಾಗುತ್ತದೆ. ಹೆಚ್ಚಿನ ಜನರು ದಾರಿ ತಪ್ಪುತ್ತಾರೆ. ಆದ್ದರಿಂದ, ಮಾನವ ಕಳ್ಳಸಾಗಣೆಯಲ್ಲಿ ಒಳಗೊಂಡಿರುವ ಈ ಸಂಪೂರ್ಣ ಪ್ರಕ್ರಿಯೆಯನ್ನು ಹತ್ತಿಕ್ಕುವ ಅವಶ್ಯಕತೆಯಿದೆ. ಮಾನವ ಕಳ್ಳಸಾಗಣೆ ನಿಲ್ಲಿಸಲು ಈ ರೀತಿಯ ಪ್ರಕ್ರಿಯೆಯನ್ನು ಕೊನೆಗೊಳಿಸಲು ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡುತ್ತಿವೆ’, ಎಂದು ಹೇಳಿದರು.

ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಪತ್ರಿಕಾಗೋಷ್ಠಿಯ ಅಂಶಗಳು

1. ಗೌತಮ್ ಅದಾನಿ ಬಗ್ಗೆ ಚರ್ಚೆಯಾಗಿಲ್ಲ !

“ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣದ ಬಗ್ಗೆ ಟ್ರಂಪ್ ಅವರೊಂದಿಗೆ ಚರ್ಚಿಸಿದ್ದೀರಾ?” ಎಂದು ಪ್ರಧಾನಿ ಮೋದಿ ಅವರನ್ನು ಕೇಳಿದಾಗ, ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಭಾರತದ ಸಂಸ್ಕೃತಿ ‘ವಸುಧೈವ ಕುಟುಂಬಕಂ’ ಆಗಿದೆ. ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತೇವೆ. ಪ್ರತಿಯೊಬ್ಬ ಭಾರತೀಯನೂ ನನ್ನವನು ಎಂದು ನಾನು ಭಾವಿಸುತ್ತೇನೆ. ಎರಡು ದೇಶಗಳ ಇಬ್ಬರು ಉನ್ನತ ನಾಯಕರು ಅಂತಹ ವೈಯಕ್ತಿಕ ಸೂತ್ರವನ್ನು ಎಂದಿಗೂ ಚರ್ಚಿಸುವುದಿಲ್ಲ’, ಎಂದು ಹೇಳಿದರು.

ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಲು ಭಾರತೀಯ ಅಧಿಕಾರಿಗಳಿಗೆ ಸುಮಾರು 2 ಸಾವಿರದ 100 ಕೋಟಿ ರೂಪಾಯಿ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಅದಾನಿ ವಿರುದ್ಧ ಅಮೆರಿಕದಲ್ಲಿ ಆರೋಪ ಹೊರಿಸಲಾಗಿತ್ತು. ಟ್ರಂಪ್ ಅಧ್ಯಕ್ಷರಾದ ನಂತರ, ಅದಾನಿ ಗ್ರೂಪ್ ಅನ್ನು ತನಿಖೆ ಮಾಡಲು ಬಳಸಲಾಗುತ್ತಿದ್ದ ಹಳೆಯ ಕಾನೂನನ್ನು ಜಾರಿಗೊಳಿಸುವುದನ್ನು ನಿಲ್ಲಿಸುವಂತೆ ಕಾರ್ಯಕಾರಿ ಆದೇಶವು ನ್ಯಾಯಾಂಗ ಇಲಾಖೆಗೆ ನಿರ್ದೇಶನ ನೀಡಿತ್ತು.

2. ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಚೀನಾದ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ

ಈ ಭೇಟಿಯ ವೇಳೆ ಪ್ರಧಾನಿ ಮೋದಿ ಮತ್ತು ಟ್ರಂಪ್ ಭಾರತ-ಚೀನಾ ಗಡಿ ವಿವಾದದ ಬಗ್ಗೆಯೂ ಚರ್ಚಿಸಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್, ಭಾರತ-ಚೀನಾ ಗಡಿಯಲ್ಲಿ ನಾವು ಭೀಕರ ಘರ್ಷಣೆಗಳನ್ನು ನೋಡುತ್ತಿದ್ದೇವೆ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದನ್ನೆಲ್ಲಾ ನಿಲ್ಲಿಸಲು ನಾನು ಏನಾದರೂ ಸಹಾಯ ಮಾಡಲು ಸಾಧ್ಯವಾದರೆ, ನನಗೆ ತುಂಬಾ ಸಂತೋಷವಾಗುತ್ತದೆ. ಇದು ಬಹಳ ಸಮಯದಿಂದ ನಡೆಯುತ್ತಿದೆ, ಇದು ತುಂಬಾ ಹಿಂಸಾತ್ಮಕವಾಗಿದೆ’, ಎಂದು ಹೇಳಿದರು.

ಇದರ ಬಗ್ಗೆ ಮಾತನಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಯಾವುದೇ ನೆರೆಯ ರಾಷ್ಟ್ರದೊಂದಿಗಿನ ನಮ್ಮ ಸಂಬಂಧಗಳು ನಾವು ಅದನ್ನು ದ್ವಿಪಕ್ಷೀಯ ಚರ್ಚೆಗಳ ಮೂಲಕ ಪರಿಹರಿಸುತ್ತೇವೆ’, ಎಂದು ಹೇಳಿದರು.

3. ತೆರಿಗೆ ವಿಷಯಗಳ ಕುರಿತು ಮಾತುಕತೆಗೆ ಭಾರತ ಸಿದ್ಧ ! – ಟ್ರಂಪ್

ಅಮೆರಿಕದಿಂದ ಭಾರತಕ್ಕೆ ಬರುವ ಸರಕುಗಳ ಮೇಲಿನ ಸುಂಕದ ಕುರಿತು ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ಉತ್ತಮ ಶ್ರದ್ಧೆಯಿಂದ ಭಾರತದ ಅನ್ಯಾಯ ಮತ್ತು ಅತಿಯಾದ ಸುಂಕಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ. ಇದು ಒಂದು ದೊಡ್ಡ ಸಮಸ್ಯೆ ಅಂತ ನಾನು ಹೇಳಲೇಬೇಕು. ಭಾರತವು ಅನೇಕ ಸರಕುಗಳ ಮೇಲೆ 30, 40, 60 ಮತ್ತು 70 ಪ್ರತಿಶತದಷ್ಟು ತೆರಿಗೆಗಳನ್ನು ವಿಧಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇನ್ನೂ ಹೆಚ್ಚು. ಉದಾಹರಣೆಗೆ, ಭಾರತಕ್ಕೆ ಆಮದು ಮಾಡಿಕೊಳ್ಳುವ ಅಮೇರಿಕನ್ ನಾಲ್ಕು ಚಕ್ರಗಳ ಮೇಲಿನ ಶೇಕಡಾ 70 ರಷ್ಟು ತೆರಿಗೆಯು ಅವುಗಳನ್ನು ಮಾರಾಟ ಮಾಡಲು ಅಸಾಧ್ಯವಾಗಿಸಿತು. ಇಂದು, ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಕೊರತೆ ಸುಮಾರು $100 ಅಬ್ಜ ಆಗಿದೆ ಮತ್ತು ಈ ದೀರ್ಘಕಾಲದ ಅಸಮತೋಲನವನ್ನು ಪರಿಹರಿಸಲು ನಾವು ಮಾತುಕತೆ ನಡೆಸುತ್ತೇವೆ ಎಂದು ಪ್ರಧಾನಿ ಮೋದಿ ಮತ್ತು ನಾನು ಒಪ್ಪಿಕೊಂಡಿದ್ದೇವೆ. ತೈಲ ಮತ್ತು ಅನಿಲ, ಎಲ್‌ಎನ್‌ಜಿ ಮಾರಾಟದ ಮೂಲಕ ನಾವು ಕೊರತೆಯನ್ನು ಸುಲಭವಾಗಿ ತುಂಬಬಹುದು. ಏಕೆಂದರೆ ಜಗತ್ತಿನ ಇತರ ದೇಶಗಳಿಗಿಂತ, ನಮ್ಮಲ್ಲಿ ಅತಿ ಹೆಚ್ಚು ಎಲ್‌ಎನ್‌ಜಿ ಇದೆ. ಉತ್ಪನ್ನಗಳು ಅತಿ ಹೆಚ್ಚು. ಭಾರತ ಮತ್ತು ಅಮೆರಿಕಗಳು ಒಂದು ಮಹತ್ವದ ಇಂಧನ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಅಮೆರಿಕವನ್ನು ಭಾರತಕ್ಕೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿ ಪುನಃಸ್ಥಾಪಿಸುತ್ತದೆ. ಅತ್ಯುನ್ನತ ಮಟ್ಟದ ಪರಮಾಣು ತಂತ್ರಜ್ಞಾನಕ್ಕಾಗಿ ಅಮೆರಿಕವನ್ನು ಭಾರತೀಯ ಮಾರುಕಟ್ಟೆಗೆ ಸ್ವಾಗತಿಸಲು ಭಾರತವು ತನ್ನ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದೆ. ಇದು ಲಕ್ಷಾಂತರ ಭಾರತೀಯರಿಗೆ ಸುರಕ್ಷಿತ, ಸ್ವಚ್ಛ ಮತ್ತು ಕೈಗೆಟುಕುವ ವಿದ್ಯುತ್ ಅನ್ನು ಒದಗಿಸುತ್ತದೆ ಮತ್ತು ಭಾರತದಲ್ಲಿನ ಅಮೆರಿಕದ ನಾಗರಿಕ ಪರಮಾಣು ಉದ್ಯಮಕ್ಕೆ ಶತಕೋಟಿ ಡಾಲರ್‌ಗಳು ಸಿಗುತ್ತದೆ.

4. ಪ್ರಧಾನಿ ಮೋದಿ ಮೇಲೆ ಒತ್ತಡ ಹೇರುವ ಪ್ರಯತ್ನ

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಮೊದಲು ಅಧ್ಯಕ್ಷ ಟ್ರಂಪ್ ಆಮದು ಸುಂಕ ನೀತಿಗೆ ಸಹಿ ಹಾಕಿದರು. ಈ ನೀತಿಯ ಪ್ರಕಾರ, ಅಮೆರಿಕವು ಈಗ ಅಮೆರಿಕದ ಮೇಲೆ ವಿಧಿಸುವ ದರದಲ್ಲಿಯೇ ಇತರ ದೇಶಗಳ ಮೇಲೂ ಸುಂಕವನ್ನು ವಿಧಿಸುತ್ತದೆ.

5. ಪ್ರಧಾನಿ ಮೋದಿ ಅವರನ್ನು ಹೊಗಳಿದ ಟ್ರಂಪ್

“ನೀವು ಯಾವಾಗಲೂ ಪ್ರಧಾನಿ ಮೋದಿಯವರನ್ನು ‘ಶ್ರೇಷ್ಠ ಸಂಧಾನಕಾರ’ ಎಂದು ಕರೆಯುತ್ತೀರಿ; ಆದರೆ ಇಂದಿನ ಮಾತುಕತೆಯಲ್ಲಿ ಯಾರು ಯಾರನ್ನು ಮೀರಿಸಿದರು ?’ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಟ್ರಂಪ್, ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿಯಲು ಯಾರಿಗೂ ಸಾಧ್ಯವಿಲ್ಲ, ಇದರಲ್ಲಿ ಅವರು ನನಗಿಂತ ಹಲವು ಪಟ್ಟು ಉತ್ತಮರು ಎಂದು ನಗುತ್ತಾ ಹೇಳಿದರು.

ಸಂಪಾದಕೀಯ ನಿಲುವು

ಪ್ರಧಾನಿ ಮೋದಿ ಈಗ ಬಾಂಗ್ಲಾದೇಶ ಸಮಸ್ಯೆಯನ್ನು ಕೂಡಲೇ ಪರಿಹರಿಸುತ್ತಾರೆ, ಎಂದು ಭಾರತೀಯರು ಆಶಿಸುತ್ತಾರೆ. ಇದು ಅಲ್ಲಿನ ಹಿಂದೂಗಳನ್ನು ಮಾತ್ರವಲ್ಲದೆ, ಈಶಾನ್ಯ ಭಾರತದ ಕೂಡ ರಕ್ಷಣೆಯಾಗುತ್ತದೆ. ಇದಕ್ಕಾಗಿ, ಎಲ್ಲಾ ಭಾರತೀಯರು ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ !