ಪೋಲೀಸರ ತನಿಖೆಯಲ್ಲಿ ಇಷ್ಟು ನಿರ್ಲಕ್ಷತನ 30 ವರ್ಷಗಳಲ್ಲಿ ಎಂದೂ ನೋಡಿಲ್ಲ ! – ಸರ್ವೋಚ್ಚ ನ್ಯಾಯಾಲಯ

  • ಕೋಲಕಾತಾದ ಮಹಿಳಾ ವೈದ್ಯೆಯ ಬಲಾತ್ಕಾರ ಮತ್ತು ಹತ್ಯೆಯ ಪ್ರಕರಣ

  • ಸಿಬಿಐ ಸಲ್ಲಿಸಿದ ವರದಿಯಲ್ಲಿ ಪೊಲೀಸರು ಪುರಾವೆಗಳಲ್ಲಿ ಹಸ್ತಕ್ಷೇಪ ಮಾಡಿರುವ ಉಲ್ಲೇಖ

ನವ ದೆಹಲಿ – ಕೋಲಕಾತಾದ ರಾಧಾ ಗೋಬಿಂದ ಕರ್ (ಆರ್.ಜಿ. ಕರ್) ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ನಾತಕೋತ್ತರ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಕೋಲಕಾತಾ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಪಾರದಿವಾಲಾ ಇವರು ಮಾತನಾಡಿ, ಕೋಲಕಾತಾ ಪೊಲೀಸರ ನಿಲುವಿನ ಬಗ್ಗೆ ಸಂಶಯವಿದೆ. ನನ್ನ 30 ವರ್ಷದ ಕಾಲಾವಧಿಯ ತನಿಖೆಯಲ್ಲಿ ಇಷ್ಟು ನಿರ್ಲಕ್ಷತನ ವಹಿಸಿರುವುದನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಿದರು.
ಅದಕ್ಕಿಂತ ಮೊದಲು ಸಿಬಿಐ ಇಲ್ಲಿಯವರೆಗೆ ನ್ಯಾಯಾಲಯದಲ್ಲಿ ಸಲ್ಲಿಸರುವ ತನಿಖೆಯ ವರದಿಯಲ್ಲಿ ‘ಪೊಲೀಸರು ಅಪರಾಧ ನಡೆದ ಸ್ಥಳದಲ್ಲಿನ ಸಾಕ್ಷಿಗಳಲ್ಲಿ ಹಸ್ತಕ್ಷೇಪ ಮಾಡಿದೆ’, ಎಂದು ಹೇಳಿದೆ.

ವೈದ್ಯರು ಕೆಲಸಕ್ಕೆ ಮರಳಬೇಕು ! – ಮುಖ್ಯ ನ್ಯಾಯಮೂರ್ತಿಗಳ ಕರೆ

ದೇಶಾದ್ಯಂತ ಡಾಕ್ಟರರು ಈ ಪ್ರಕರಣವನ್ನು ಪ್ರತಿಭಟಿಸಿ ಆಂದೋಲನವನ್ನು ಮಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ವಿಚಾರಣೆಯ ಸಮಯದಲ್ಲಿ ಮುಖ್ಯನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಮಾತನಾಡಿ, ಆಸ್ಪತ್ರೆಯ ಸ್ಥಿತಿ ನನಗೆ ತಿಳಿದಿದೆ. ನನ್ನ ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯದಿಂದ ಬಳಲುತ್ತಿರುವಾಗ ನಾನು ಸ್ವತಃ ಸರಕಾರಿ ಆಸ್ಪತ್ರೆಯ ನೆಲದ ಮೇಲೆ ಮಲಗಿದ್ದೇನೆ. ನಮಗೆ ಅನೇಕ ಇಮೇಲ್ ಸಿಕ್ಕಿದೆ, ಅದರಲ್ಲಿ ವೈದ್ಯರು ನಮ್ಮ ಮೇಲೆ ಬಹಳಷ್ಟು ಒತ್ತಡವಿದೆಯೆಂದು ಹೇಳಿದ್ದಾರೆ. ವೈದ್ಯರು 48 ಅಥವಾ 36 ಗಂಟೆ ಕೆಲಸ ಮಾಡುವುದು ಒಳ್ಳೆಯದಲ್ಲ. ಇಂದು ನಾವು ಅದನ್ನು ನಮ್ಮ ಆದೇಶದಲ್ಲಿ ಪರಿಗಣಿಸುತ್ತೇವೆ. ರೋಗಿಗಳು ನಿಮ್ಮ ದಾರಿ ಕಾಯುತ್ತಿದ್ದಾರೆ. ಆದುದರಿಂದ ಕೆಲಸಕ್ಕೆ ಮರಳಿರಿ. `ಕೆಲಸಕ್ಕೆ ಮರಳಿದ ಬಳಿಕ ನಿಮ್ಮ ಮೇಲೆ ಯಾವುದೇ ಕ್ರಮ ಕೈಕೊಳ್ಳಲಾಗುವುದಿಲ್ಲ’, ಎಂದು ಮುಖ್ಯನ್ಯಾಯಮೂರ್ತಿಗಳು ಭರವಸೆಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಇದು ನಿರ್ಲಕ್ಷತೆಯೋ ಅಥವಾ ಉದ್ದೇಶಪೂರ್ವಕ ಮಾಡಿರುವ ಕೃತ್ಯವಾಗಿದೆಯೋ? ಎನ್ನುವುದನ್ನು ತನಿಖೆ ನಡೆಸುವಂತೆ ನ್ಯಾಯಾಲಯವು ಸಿಬಿಐಗೆ ಆದೇಶಿಸಬೇಕು ಎಂದೇ ಜನತೆಗೆ ಅನಿಸುತ್ತದೆ !