ಬಾಂಗ್ಲಾದೇಶದ ಘಟನೆಗಳ ಹಿಂದೆ ಪಾಕಿಸ್ತಾನ ಮತ್ತು ಅಮೇರಿಕದ ಕೈವಾಡ !

  • ಅಮೇರಿಕಾದಲ್ಲಿರುವ ಶೇಖ್ ಹಸೀನಾ ಪುತ್ರ ಸಾಜಿಬ್ ವಾಜೇದ್ ಜಾಯ್ ಗಂಭೀರ ಆರೋಪ !

  • ಚೀನಾ ಕೈವಾಡವಿಲ್ಲ !

  • ಬಾಂಗ್ಲಾದೇಶ ಈಗ ಪಾಕಿಸ್ತಾನವಾಗಲಿದೆ ಎಂದು ದಾವೆ !

  • ಮತ್ತೆ ಬಾಂಗ್ಲಾದೇಶಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಶೇಕ್ ಹಸೀನಾ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಾಜಿಬ್ ವಾಜೆದ್ ಜಾಯ್ ಅವರು ಭಾರತದ ಕೆಲವು ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಗಳ ಹಿಂದೆ ಪಾಕಿಸ್ತಾನ ಮತ್ತು ಅಮೇರಿಕದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಅವರು, ‘ಚೀನಾ ಯಾವತ್ತೂ ನಮ್ಮ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇದರಲ್ಲಿ ಅವರ ಕೈವಾಡವಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ. ‘ಬಾಂಗ್ಲಾದೇಶ ಈಗ ಪಾಕಿಸ್ತಾನವಾಗಲಿದೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ, ಶೇಖ್ ಹಸೀನಾ ಅವರು ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಅವರು ಅಮೆರಿಕದಲ್ಲಿಯೇ ಇರುತ್ತಾರೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಹಸೀನಾ ಅವರು ಬ್ರಿಟನ್‌ನಲ್ಲಿ ರಾಜತಾಂತ್ರಿಕ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಜಾಯ್ ಅವರು ತಿರಸ್ಕರಿಸಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್‌.ಐ ಶೇಖ್ ಹಸೀನಾ ಅವರ ವಿರುದ್ಧ ಬಾಂಗ್ಲಾದೇಶದ ವಿದ್ಯಾರ್ಥಿ ಸಂಘಟನೆಗಳನ್ನು ಪ್ರಚೋದಿಸಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ‘ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನವು ಈ ಸಂಚು ರೂಪಿಸಿತ್ತು. ಅಮೇರಿಕ ಕೂಡ ಬಾಂಗ್ಲಾದೇಶದಲ್ಲಿ ಅಸ್ಥಿರ ಸರಕಾರವನ್ನು ಬಯಸಿತ್ತು’, ಎಂದು ಜಾಯ್ ಆರೋಪಿಸಿದ್ದಾರೆ.

ಸಜೀವ್ ಜಾಯ್ ತಮ್ಮ ಮಾತನ್ನು ಮುಂದುವರೆಸುತ್ತಾ;

ಹತಾಶೆ ಮತ್ತು ನಿರಾಶೆಯಲ್ಲಿರುವ ಶೇಖ್ ಹಸೀನಾ

ನನ್ನ ತಾಯಿ ಎಂದಿಗೂ ಬಾಂಗ್ಲಾದೇಶವನ್ನು ತೊರೆಯಲು ಬಯಸಲಿಲ್ಲ; ಆದರೆ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಅವರನ್ನು ಒಪ್ಪಿಸಿದೆವು. ಅವರು ಬಾಂಗ್ಲಾದೇಶಕ್ಕೆ ಸ್ಥಿರ ಮತ್ತು ಉತ್ತಮ ಸರಕಾರವನ್ನು ನೀಡಿದ್ದರು. ಬಾಂಗ್ಲಾದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗಿತ್ತು. ಭಯೋತ್ಪಾದನೆಯನ್ನು ಎದುರಿಸಿದರು. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯಿಂದ ಅವರು ಹತಾಶರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ ಎಂದು ಹೇಳಿದರು.

‘ಜಮಾತ್-ಎ-ಇಸ್ಲಾಮಿ’ ಸಂಘಟನೆಯದ್ದೇ ಪ್ರಮುಖ ಪಾತ್ರ

ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮಿಲಿಟರಿ ಬಲವನ್ನು ಬಳಸುವುದು ಅನಿವಾರ್ಯವಾಗಿತ್ತು; ಆದರೆ ಹಸೀನಾ ಅವರು ವಿದ್ಯಾರ್ಥಿಗಳ ಮೇಲೆ ಸೈನ್ಯದ ಬಲಪ್ರಯೋಗ ಮಾಡುವುದನ್ನು ವಿರೋಧಿಸಿದರು. ಹೀಗಾಗಿ ಅವರು ರಾಜೀನಾಮೆ ನೀಡುವುದೇ ಸರಿ ಎಂದು ನಿರ್ಧರಿಸಿದರು. ಈ ಎಲ್ಲಾ ಬೆಳವಣಿಗೆಗಳಲ್ಲಿ ‘ಜಮಾತ್-ಎ-ಸ್ಲಾಮಿ’ಯ ಪಾತ್ರವಿದೆ. ಸಾಮಾನ್ಯ ಬಾಂಗ್ಲಾದೇಶಿಗಳು ಇದರಲ್ಲಿ ಭಾಗಿಯಾಗಿಲ್ಲ.

ಬಾಂಗ್ಲಾದೇಶದ ಭವಿಷ್ಯ ಇನ್ನು ಮುಂದೆ ನಮ್ಮ ಜವಾಬ್ದಾರಿಯಲ್ಲ

ನಾವು ಖಂಡಿತವಾಗಿಯೂ ನಮ್ಮ ನಾಯಕರನ್ನು ರಕ್ಷಿಸುತ್ತೇವೆ. 1975ರಲ್ಲೂ ನಮ್ಮ ಪಕ್ಷದ ನಾಯಕರನ್ನು ಹತ್ಯೆ ಮಾಡಲಾಗಿತ್ತು. ನಮಗೆ ಮತ್ತೆ ಅದೇ ಪರಿಸ್ಥಿತಿ ಬೇಕಾಗಿಲ್ಲ; ಆದರೆ ಈಗ ಬಾಂಗ್ಲಾದೇಶದ ಭವಿಷ್ಯದ ಜವಾಬ್ದಾರಿ ನಮ್ಮದಲ್ಲ. ಬಾಂಗ್ಲಾದೇಶವನ್ನು ಉಳಿಸಲು ನಾವು ಸಾಕಷ್ಟು ಪ್ರಯತ್ನ ಮಾಡಿದೆವು; ಆದರೆ ಈಗ ಹಸೀನಾ ಅವರು ಅಲ್ಲಿನ ಜನರನ್ನು ಉಳಿಸಲು ಹಿಂತಿರುಗುವುದಿಲ್ಲ. ಅವರಿಗೆ 77 ವರ್ಷ ವಯಸ್ಸಾಗಿದೆ. ಇದು ಅವರ ರಾಜಕೀಯ ಜೀವನದ ಕೊನೆಯ ಹಂತವಾಗಿತ್ತು. ಅವರು ನಿವೃತ್ತಿಯಾಗುವವರಿದ್ದರು. ನಾವು ಸೇನೆಯನ್ನು ಟೀಕಿಸುವುದಿಲ್ಲ. ಇದೇ ಅವರ ಹಣೆಬರಹ ಆಗಿದೆ. ನಮ್ಮ ಪಕ್ಷದ ನಾಯಕರ ಮೇಲೆ ಹಲ್ಲೆ ನಡೆಯುತ್ತಿದೆ. ಇನ್ನು ಮುಂದೆ ನ್ಯಾಯಸಮ್ಮತ ಚುನಾವಣೆ ಅಲ್ಲಿ ನಡೆಯಲಿದೆ ಎಂದು ನನಗೆ ಅನಿಸುವುದಿಲ್ಲ. ನಮ್ಮ ಕುಟುಂಬ ಬಾಂಗ್ಲಾದೇಶದಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ತೋರಿಸಿದೆ. ಬಾಂಗ್ಲಾದೇಶದ ಜನರು ಈಗ ನಮ್ಮ ಜೊತೆ ನಿಲ್ಲಲು ಸಿದ್ಧರಿಲ್ಲದಿದ್ದರೆ, ಅವರು ತಮಗೆ ಅರ್ಹವಾದ ನಾಯಕತ್ವವನ್ನೇ ಪಡೆಯುತ್ತಾರೆ ಎಂದು ಜಾಯ್ ಹೇಳಿದರು.

ಶೇಖ್ ಹಸೀನಾ ಇನ್ನೂ ಭಾರತದಲ್ಲಿದ್ದಾರೆ !

ಗಾಜಿಯಾಬಾದ್ (ಉತ್ತರ ಪ್ರದೇಶ) – ಬಾಂಗ್ಲಾದೇಶವನ್ನು ತೊರೆದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಆಗಸ್ಟ್ 5 ರ ರಾತ್ರಿ ದೆಹಲಿ ಬಳಿಯ ಗಾಜಿಯಾಬಾದ್‌ನಲ್ಲಿರುವ ಭಾರತೀಯ ವಾಯುಪಡೆಯ ಹಿಂಡನ್ ವಿಮಾನ ನಿಲ್ದಾಣದಲ್ಲಿ ತಂಗಿದ್ದರು. ಆಗಸ್ಟ್ 6ರ ರಾತ್ರಿಯವರೆಗೂ ಅಲ್ಲಿಯೇ ಇದ್ದರು. ಅವರನ್ನು ಇಲ್ಲಿ ವಾಯುಪಡೆಯ ರಕ್ಷಣೆಯಲ್ಲಿ ಇರಿಸಲಾಗಿದೆ. ಅವರು ಯಾವ ದೇಶದಲ್ಲಿ ಆಶ್ರಯ ಪಡೆಯಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಇನ್ನೂ ಎಷ್ಟು ದಿನ ಭಾರತದಲ್ಲಿ ಇರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಅವರ ಮಗಳು ದೆಹಲಿಯಲ್ಲಿದ್ದಾಳೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ಮಧ್ಯಂತರ ಸರಕಾರವನ್ನು ಮುನ್ನಡೆಸುವ ಸಾಧ್ಯತೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಸೇನೆಯ ನೇತೃತ್ವದ ಮಧ್ಯಂತರ ಸರಕಾರದ ಸ್ಥಾಪನೆಯ ಸಿದ್ಧತೆ ನಡೆಯುತ್ತಿದೆ ಮತ್ತು ಮಾಧ್ಯಮ ವರದಿಗಳ ಪ್ರಕಾರ, ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರವನ್ನು ಮುನ್ನಡೆಸಬಹುದು. ಮುಹಮ್ಮದ್ ಯೂನಸ್ ಸಹ ಮಧ್ಯಂತರ ಸರಕಾರವನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ.