ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸುಮಾರು 8.5 ಕೋಟಿಯ ಕಾಣಿಕೆ ಹುಂಡಿ ಹಗರಣ ಪ್ರಕರಣದಲ್ಲಿ ಸಮಿತಿಯ ಹೋರಾಟಕ್ಕೆ ಸಂದ ಜಯ !

16 ದೋಷಿಗಳ ವಿರುದ್ಧ ಅಪರಾಧ ದಾಖಲಿಸಿ ತನಿಖೆಗೆ ಆದೇಶಸಿದ ಮಹಾರಾಷ್ಟ್ರ ಉಚ್ಛ ನ್ಯಾಯಾಲಯ !

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ 8 ಕೋಟಿ 45 ಲಕ್ಷದ 97 ಸಾವಿರ ರೂಪಾಯಿಗಳ ಕಾಣಿಕೆ ಹುಂಡಿ ಹಗರಣ ನಡೆದಿದೆ. ಈ ಭ್ರಷ್ಟಾಚಾರದಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಅವರನ್ನು ರಕ್ಷಿಸಲು ಆಡಳಿತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಮುಂಬೈ ಉಚ್ಚ ನ್ಯಾಯಾಲಯದ ಸಂಭಾಜಿನಗರ ವಿಭಾಗೀಯ ಪೀಠವು ಹಗರಣದ ತನಿಖೆಯನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದೆ. ಅಲ್ಲದೆ, ಈ ಮೊದಲಿನ ತನಿಖಾ ಸಮಿತಿಯು ದೋಷಿಯೆಂದು ನಿರ್ಧರಿಸಿದ ಹರಾಜುದಾರರು, ದೇವಸ್ಥಾನದ ನೌಕರರು, ಟ್ರಸ್ಟಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 16 ಅಪರಾಧಿಗಳ ವಿರುದ್ಧ ತುಳಜಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಆದೇಶಿಸಿದೆ. ಜೊತೆಗೆ ಅಪರಾಧ ತನಿಖಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಹಿರಿಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸಹ ಆದೇಶಿಸಲಾಗಿದೆ. ತುಳಜಾಭವಾನಿ ಮಾತೆಯ ಕೃಪೆಯಿಂದ ಕಳೆದ 9 ವರ್ಷಗಳಿಂದ ನ್ಯಾಯಾಂಗ ಹೋರಾಟ ನಡೆಸಿದ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ವಿಧಿಜ್ಞ ಪರಿಷತ್ತು ಇವುಗಳ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು, ಈ ನಿರ್ಧಾರವು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಗೋವಾ ಸೇರಿದಂತೆ ದೇಶದ ಕೋಟ್ಯಂತರ ಭಕ್ತರಿಗೆ ಸಂತಸ ಮತ್ತು ಸಮಾಧಾನ ತಂದಿದೆ. ದೇವನಿಧಿ ಲೂಟಿ ಮಾಡುವ ಭ್ರಷ್ಟರಿಗೆ ಶಿಕ್ಷೆಯಾಗುವವರೆಗೂ ನಾವು ಈ ಪ್ರಕರಣವನ್ನು ಬೆಂಬತ್ತುತ್ತೇವೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಹೇಳಿದೆ.

1991 ರಿಂದ 2009 ರ ಅವಧಿಯಲ್ಲಿ ಕಾಣಿಕೆ ಹುಂಡಿಯ ಹರಾಜಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯಾಗಿತ್ತು. 2011 ರಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್ ಚವಾಣ್ ನೀಡಿದ ಸೂಚನೆಯಂತೆ ರಾಜ್ಯ ಅಪರಾಧ ತನಿಖಾ ಇಲಾಖೆಯಿಂದ ಈ ಹಗರಣದ ತನಿಖೆಯನ್ನು ಪ್ರಾರಂಭಿಸಲಾಯಿತು; ಆದರೆ ಆಡಳಿತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿರುವುದರಿಂದ 5 ವರ್ಷ ಕಳೆದರೂ ತನಿಖೆ ಪ್ರಗತಿ ಕಾಣಿಸಲಿಲ್ಲ. ಆದ್ದರಿಂದ ಹಿಂದೂ ಜನಜಾಗೃತಿ ಸಮಿತಿಯು 2015 ರಲ್ಲಿ ಹಿಂದೂ ವಿಧಿಜ್ಞ ಪರಿಷದ್ ಸಹಾಯದಿಂದ ಹೈಕೋರ್ಟ್‌ನ ಸಂಭಾಜಿನಗರ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿತು. ಅಂತಿಮವಾಗಿ, ನ್ಯಾಯಾಲಯದ ಆದೇಶದಂತೆ, 2017 ರಲ್ಲಿ ಗೃಹ ಇಲಾಖೆಗೆ ತನಿಖಾ ವರದಿಯನ್ನು ಸಲ್ಲಿಸಲಾಯಿತು; ಆದರೆ, ಐದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಿತಿ 2022ರಲ್ಲಿ ಮತ್ತೆ ಮನವಿ ಸಲ್ಲಿಸಿತ್ತು.

‘ಐದು ವರ್ಷ ಕಳೆದರೂ ತಪ್ಪಿತಸ್ಥರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ?’ ಎಂದು ಉಚ್ಚ ನ್ಯಾಯಾಲಯ ಸರಕಾರಕ್ಕೆ ಪ್ರಶ್ನಿಸಿತು. ಆಗ ಈ ಪ್ರಕರಣ ಹಳೆಯದೆಂದು ಹೇಳಿ ಸರ್ಕಾರವು ತನಿಖೆಯನ್ನು ಮುಚ್ಚಿರುವುದು ಬೆಳಕಿಗೆ ಬಂದಿದೆ. ಸರ್ವೋಚ್ಚ ನ್ಯಾಯಾಲಯದ ‘ಲಲಿತಾಕುಮಾರಿ ವಿರುದ್ಧ ಉತ್ತರ ಪ್ರದೇಶ ಸರ್ಕಾರ, 2014 (2) ಎಸ್.ಸಿ.ಸಿ ನಂ.1’ ಪ್ರಕರಣದಲ್ಲಿ, ‘ದಾಖಲಾರ್ಹ ಅಪರಾಧ ಘಟಿಸಿದಾಗ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು’ ಆದೇಶಿಸಿದೆ. ಸಾರ್ವಜನಿಕ ಹೊಣೆಗಾರಿಕೆ, ಜಾಗರೂಕತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವಿಕೆಯ ವಿಷಯದಲ್ಲಿ ಇದರ ಉದ್ದೇಶವು ಅಗತ್ಯವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಇಲ್ಲಿ 8.45 ಕೋಟಿ ರೂಪಾಯಿಗಳ ಲೂಟಿ ನಡೆದಿರುವುದರಿಂದ ಶಂಕರ್ ಕೆಂಗಾರ್ ಸಮಿತಿ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಯೋಗ್ಯವಾಗಿದೆ ಎಂದು ಹೇಳಿ ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಮೂರ್ತಿ ಮಂಗೇಶ ಪಾಟೀಲ್ ಮತ್ತು ನ್ಯಾಯಮೂರ್ತಿ ಶೈಲೇಶ ಬ್ರಹ್ಮೆ ಅವರ ವಿಭಾಗೀಯ ಪೀಠದ ಮುಂದೆ ಸಮಿತಿಯ ಪರವಾಗಿ ಹಿರಿಯ ನ್ಯಾಯವಾದಿ ಸಂಜೀವ ದೇಶಪಾಂಡೆ, ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯರಾದ ನ್ಯಾಯವಾದಿ (ಪೂಜ್ಯ) ಸುರೇಶ ಕುಲಕರ್ಣಿ ಮತ್ತು ನ್ಯಾಯವಾದಿ ಉಮೇಶ ಭಡಗಾವಂಕರ ಅವರು ಕಾರ್ಯನಿರ್ವಹಿಸಿದರು.