ದೆಹಲಿ ವಕ್ಫ್ ಮಂಡಳಿಯ 123 ಆಸ್ತಿಗಳ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರಕಾರ !

ಹಿಂದಿನ ಕಾಂಗ್ರೆಸ್ ಸರಕಾರ ಬೋರ್ಡಗೆ ನೀಡಿತ್ತು !

ನವ ದೆಹಲಿ – ಕೇಂದ್ರ ಸರಕಾರ ದೆಹಲಿ ವಕ್ಫ್ ಬೋರ್ಡಗೆ ಸಂಬಂಧಿಸಿದ್ದ 123 ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಮಸೀದಿ, ಕಬ್ರ ಮತ್ತು ದರ್ಗಾ ಒಳಗೊಂಡಿದೆ. ಈ ಸಂಬಂಧ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರಿಗೆ ಕೇಂದ್ರ ಸರಕಾರ ನೋಟಿಸ್ ಕಳುಹಿಸಿದೆ. ಈ ಎಲ್ಲ ಆಸ್ತಿಗಳ ಹೊರಗೆ ನೋಟೀಸ್ ಅಂಟಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಸರಕಾರ ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಭೂಮಿ ಮತ್ತು ಅಭಿವೃದ್ಧಿ ಇಲಾಖೆ ಮಾಜಿ ನ್ಯಾಯಮೂರ್ತಿ ಎಸ್.ಪಿ. ಗಾರ್ಗ್ ಅವರ ಅಧ್ಯಕ್ಷತೆಯಲ್ಲಿ ದ್ವಿ ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಸಲ್ಲಿಸಿದ ವರದಿಯಲ್ಲಿ ದೆಹಲಿ ವಕ್ಫ್ ಬೋರ್ಡ್ ನ ನಿಯಂತ್ರಣದಲ್ಲಿರುವ 123 ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶಿಫಾರಸು ಮಾಡಿತ್ತು. ಈ ಆಸ್ತಿಗಳನ್ನು ಹಿಂದಿನ ಕಾಂಗ್ರೆಸ್ ಸರಕಾರ ಬೋರ್ಡ್ ಗೆ ಕೊಡುಗೆಯಾಗಿ ನೀಡಿತ್ತು. ವಿಶ್ವ ಹಿಂದೂ ಪರಿಷತ್ 2014ರಲ್ಲಿ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಅದನ್ನು ಆಧರಿಸಿ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು. ನಂತರ 2014 ರಲ್ಲಿ ನಿವೃತ್ತ ನ್ಯಾಯಮೂರ್ತಿ ಗರ್ಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನ ನಂತರ ಕೇಂದ್ರ ಸರಕಾರ ಈ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿತ್ತು. ದೆಹಲಿ ವಕ್ಫ್ ಬೋರ್ಡ್ ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಇದನ್ನು ವಿರೋಧಿಸಿತು; ಆದರೆ ನ್ಯಾಯಾಲಯವು ಈ ಅರ್ಜಿಯನ್ನು ಮೇ 2023 ರಲ್ಲಿ ತಿರಸ್ಕರಿಸಿತು.

  • ದೆಹಲಿಯ ಜಾಮಾ ಮಸೀದಿಗೆ ಕೇಂದ್ರ ಸರಕಾರದ ನೋಟಿಸ್

  • ಜಾಮಾ ಮಸೀದಿಯ ಮಾಲೀಕತ್ವದ ಪುರಾವೆಗಳನ್ನು ಹಾಜರು ಪಡಿಸಿ !

ಕೇಂದ್ರ ಸರಕಾರವು ದೆಹಲಿಯ ಜಾಮಾ ಮಸೀದಿಗೆ ನೋಟಿಸ್ ಕಳುಹಿಸಿದ್ದು, ಅದರ ಮಾಲೀಕತ್ವದ ಪುರಾವೆ ಸಲ್ಲಿಸುವಂತೆ ಹೇಳಿದೆ. ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯನ್ನು ಪರಿಶೀಲಿಸಲಾಗುವುದು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈ ನೊಟೀಸನ್ನು ಮಸೀದಿಯ ಗೋಡೆಯ ಮೇಲೆ ಅಂಟಿಸಲಾಗಿದೆ.

ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ! – ಜಾಮಾ ಮಸೀದಿಯ ಇಮಾಮ್ ಮುಹಿಬುಲ್ಲಾ ನದ್ವಿ

ಈ ಕುರಿತು ಜಮಾ ಮಸೀದಿಯ ಇಮಾಮ್ ಮುಹಿಬುಲ್ಲಾ ನದ್ವಿ ಇವರು, (ಮಸೀದಿಯಲ್ಲಿ ಪ್ರಾರ್ಥನೆ ನಡೆಸುವವರು) ಮಸೀದಿಗೆ ಯಾವುದೇ ಅಪಾಯವಿಲ್ಲ. ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಜಾಮಾ ಮಸೀದಿ ತಪಾಸಣೆ ವೇಳೆ ಮಾಧ್ಯಮದವರೂ ಹಾಜರಿದ್ದರೆ ಒಳ್ಳೆಯದು ಎಂದು ಹೇಳಿದರು.