ಬಂಗಾಳದಲ್ಲಿ ಕೇಂದ್ರೀಯ ಗೃಹರಾಜ್ಯಮಂತ್ರಿಗಳ ವಾಹನದ ಮೇಲೆ ದೇಸಿ ಬಾಂಬ್‌ ಹಾಗೂ ಕಲ್ಲುಗಳಿಂದ ಆಕ್ರಮಣ

ಭಾಜಪವು ತೃಣಮೂಲ ಕಾಂಗ್ರೆಸ ಆಕ್ರಮಣ ಮಾಡಿರುವುದಾಗಿ ಆರೋಪಿಸಿದೆ

ಕೂಚಬಿಹಾರ (ಬಂಗಾಳ) – ಕೇಂದ್ರೀಯ ಗೃಹರಾಜ್ಯಮಂತ್ರಿಗಳಾದ ನಿಸಿಥ ಪ್ರಮಾಣಿಕರವರ ವಾಹನದ ಮೇಲೆ ಇಲ್ಲಿನ ಗುಂಪಿನ ಕೆಲವರು ದೇಸಿ ಬಾಂಬ್‌ ಹಾಗೂ ಕಲ್ಲು ಹೊಡೆದು ಆಕ್ರಮಣ ಮಾಡಿದ್ದಾರೆ. ಈ ಘಟನೆಯು ಪ್ರಮಾಣಿಕರವರು ಸೀತಾಯಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲು ಹೋಗುತ್ತಿರುವಾಗ ಸಂಭವಿಸಿದೆ. ಅನಂತರ ಭಾಜಪದ ಕಾರ್ಯಕರ್ತರು ಆಕ್ರಮಣ ಮಾಡುವವರ ಮೇಲೆ ಕಲ್ಲುತೂರಾಟ ಮಾಡಿದರು. ಭಾಜಪವು ಪ್ರಮಾಣಿಕರವರ ಮೇಲಿನ ಆಕ್ರಮಣಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ದೋಷಿ ಎಂದು ಹೇಳಿದೆ.

೧. ಪೊಲೀಸ ಅಧೀಕ್ಷಕರಾದ ಸುಮಿತ ಕುಮಾರರವರು, ಮಂತ್ರಿಗಳ ವಾಹನವು ಇಲ್ಲಿಂದ ಹೊರಡುತ್ತಿರುವಾಗ ಕೆಲವು ಜನರು ಅವರಿಗೆ ಕಪ್ಪು ಧ್ವಜಗಳನ್ನು ತೋರಿಸಿದರು. ಆಗ ಅವರ ಕಾರ್ಯಕರ್ತರು ವಾದಕ್ಕಿಳಿದಾಗ ನೂಕುನುಗ್ಗಾಟ ನಡೆಯಿತು. ಅದರಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ, ಎಂದು ಹೇಳಿದರು.

೨. ಈ ಬಗ್ಗೆ ರಾಜ್ಯಮಂತ್ರಿಗಳಾದ ಪ್ರಮಾಣಿಕರವರು ಮಾತನಾಡುತ್ತ, ಪೊಲೀಸರ ಉಪಸ್ಥಿತಿಯಲ್ಲಿಯೇ ಗುಂಪೊಂದು ಲಾಠಿ, ಕೋಲು, ಕಲ್ಲು ಹಾಗೂ ಇತರ ಶಸ್ತ್ರಗಳನ್ನು ಹಿಡಿದು ಬಂದಿತ್ತು. ಪುನಃ ಆಕ್ರಮಣವಾದರೆ ಭಾಜಪದ ಕಾರ್ಯಕರ್ತರು ಶಾಂತವಾಗಿ ಕುಳಿತುಕೊಳ್ಳುವುದಿಲ್ಲ, ಎಂದು ಹೇಳಿದರು.

ಬಂಗಾಳದಲ್ಲಿ ಈ ಮೊದಲೇ ಭಾಜಪದ ನೇತಾರರ ಮೇಲೆ ನಡೆದ ಆಕ್ರಮಣಗಳು

೧. ಏಪ್ರಿಲ್‌ ೨೦೨೧ರಲ್ಲಿ ಕೇಂದ್ರೀಯ ಮಂತ್ರಿಗಳಾದ ಗಜೇಂದ್ರ ಸಿಂಹ ಶೇಖಾವತರವರ ವಾಹನದ ಮೇಲೆ ಆಕ್ರಮಣ ಮಾಡುತ್ತ ವಾಹನಗಳಿಗೆ ಹಾನಿ ಮಾಡಿ ವಾಹನದ ಒಳಗಿನ ವಸ್ತುಗಳನ್ನು ದೋಚಲಾಯಿತು.

೨. ಡಿಸೆಂಬರ್‌ ೨೦೨೦ರಲ್ಲಿ ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಜಗತ ಪ್ರಕಾಶ ನಡ್ಡಾರವರ ವಾಹನದ ಮೇಲೆ ಆಕ್ರಮಣ ಮಾಡಲಾಗಿತ್ತು. ಅವರ ವಾಹನವು ಬುಲೆಟ್‌ಪ್ರೂಫ್‌ ಆಗಿದ್ದರಿಂದ ಅವರು ಉಳಿದರು. ಈ ಹಿಂದೆ ಭಾಜಪದ ಸಮನ್ವಯಕರಾದ ಕೈಲಾಶ ವಿಜಯವರ್ಗೀಯರವರ ವಾಹನದ ಮೇಲೆ ಕಲ್ಲುತೂರಾಟ ಮಾಡಲಾಗಿತ್ತು. ಆಗಲೂ ವಾಹನದ ಗಾಜು ಒಡೆದಿತ್ತು.

೩. ಭಾಜಪದ ಮಾಜಿ ಪ್ರದೇಶಾಧ್ಯಕ್ಷರಾದ ದಿಲೀಪ ಘೋಷ ಹಾಗೂ ಸಂಸದರಾದ ಸುವೇಂದು ಅಧಿಕಾರಿಯವರ ವಾಹನದ ಮೇಲೂ ಆಕ್ರಮಣಗಳನ್ನು ಮಾಡಲಾಗಿತ್ತು.

 

ಸಂಪಾದಕೀಯ ನಿಲುವು

  • ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !
  • ಕೇಂದ್ರೀಯ ಮಂತ್ರಿಗಳೇ ಅಸುರಕ್ಷಿತರಾಗಿರುವ ರಾಜ್ಯದಲ್ಲಿ ಸಾಮಾನ್ಯ ಜನರು ಎಷ್ಟು ಸುರಕ್ಷಿತರಾಗಿರಬಹುದು, ಎಂಬುದರ ಬಗ್ಗೆ ವಿಚಾರ ಮಾಡದಿರುವುದೇ ಒಳ್ಳೆಯದು !