ಈದ್ ಸಮಯದಲ್ಲಿ ಮುಸ್ಲಿಂ ಬಾಹುಳ್ಯವಿರುವ ಮಂಗಲೌರ (ಹರಿದ್ವಾರ) ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ನ್ಯಾಯಾಲಯ ಹಿಂತೆಗೆದುಕೊಂಡಿದೆ

ಡೆಹ್ರಾಡೂನ್ : ಜುಲೈ ೧೦ ರಂದು ಈದ್-ಉಲ್-ಫಿತರ್ ಪ್ರಯುಕ್ತ ಮುಸ್ಲಿಂ ಬಾಹುಳ್ಯವಿರುವ ಮಂಗಲೌರಿನಲ್ಲಿ (ಹರಿದ್ವಾರ) ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ಉತ್ತರಾಖಂಡ ಉಚ್ಚನ್ಯಾಯಾಲಯ ಹಿಂಪಡೆದಿದೆ. ಮಾರ್ಚ್ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ, ಉತ್ತರಾಖಂಡದ ಭಾಜಪ ಸರಕಾರವು ಹರಿದ್ವಾರ ಜಿಲ್ಲೆಯ ಎಲ್ಲಾ ಕಸಾಯಿಖಾನೆಗಳನ್ನು ನಿಷೇಧಿಸಿ ಅವುಗಳ ಪರವಾನಗಿಯನ್ನು ರದ್ದುಗೊಳಿಸಿತ್ತು. ಈ ಆದೇಶವು ೨ ಮಹಾನಗರ ಪಾಲಿಕೆಗಳು, ೨ ಪುರಸಭೆಗಳು ಮತ್ತು ೫ ನಗರ ಪಂಚಾಯತ್‌ಗಳ ಪ್ರದೇಶಗಳಿಗೆ ಅನ್ವಯಿಸಿತ್ತು. ಸರಕಾರದ ನಿರ್ಧಾರವನ್ನು ಫೈಸಲ್ ಹುಸೇನ್ ಎಂಬವನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.

ಈ ಅರ್ಜಿಯಲ್ಲಿ ಮಂಗಲೌರ ಮಹಾನಗರ ಪಾಲಿಕೆಯ ಕ್ಷೇತ್ರದಲ್ಲಿ ಶೇ. ೯೦ರಷ್ಟು ಮುಸ್ಲಿಮರು ವಾಸಿಸುತ್ತಿದ್ದು, ಕಸಾಯಿಖಾನೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಕೋರಿದ್ದ. ಇದಕ್ಕೆ ಜುಲೈ ೭ ರಂದು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು, ‘ಬಕ್ರೀದ್ ದಿನದಂದು ಜಿಲ್ಲೆಯ ಮಂಗಲೌರನ ಪಟ್ಟಣದಲ್ಲಿನ ಕಸಾಯಿಖಾನೆಗಳ ಮೇಲಿನ ನಿಷೇಧ ತೆರವಿಗೆ ಅವಕಾಶ ನೀಡುತ್ತಿದ್ದೇವೆ’ ಎಂದು ಹೇಳಿದೆ. ‘ಪ್ರಾಣಿಗಳ ಹತ್ಯೆಯನ್ನು ಕಸಾಯಿಖಾನೆಯಲ್ಲಿ ಮಾತ್ರ ಮಾಡಬಹುದಾಗಿದೆ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.