ಹಿಂದೂಗಳೇ, ಹೋಳಿ ಹಬ್ಬವನ್ನು ಧರ್ಮಶಾಸ್ತ್ರಕ್ಕನುಸಾರ ಆಚರಿಸಿ !

ಮಾರ್ಚ್ ೧೭ ರಂದು ಹೋಳಿ ಇದೆ. ದುಷ್ಟ ಪ್ರವೃತ್ತಿ ಮತ್ತು ಅಮಂಗಲ ವಿಚಾರವನ್ನು ನಾಶ ಮಾಡಿ ಸತ್‌ ಪ್ರವೃತ್ತಿಯ ಮಾರ್ಗ ತೋರಿಸುವ ಉತ್ಸವವೆಂದರೆ ಹೋಳಿ. ವೃಕ್ಷರೂಪಿ ಸಮಿಧೆಯನ್ನು ಅರ್ಪಿಸಿ ಆ ಮೂಲಕ ವಾತಾವರಣದ ಶುದ್ಧಿ ಮಾಡುವುದು, ಎಂಬ ಉದಾತ್ತ ಭಾವವು ಈ ಹೋಳಿ ಉತ್ಸವ ಆಚರಿಸುವ ಹಿಂದಿದೆ. ದುರ್ದೈವದಿಂದ ಇದರಲ್ಲಿ ಅನೇಕ ಅನಾಚಾರಗಳು ಸೇರಿಕೊಂಡಿವೆ. ಹಾಗಾಗಿ ಹಿಂದೂಗಳೇ ಧರ್ಮಶಿಕ್ಷಣ ಪಡೆದು ಈ ಅನಾಚಾರಗಳನ್ನು ತಡೆದು ಧರ್ಮಕರ್ತವ್ಯ ನಿಭಾಯಿಸಿ !

ಹೋಳಿ (೧೭.೩.೨೦೨೨)

೧. ತಿಥಿ : ‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿ’ಯವರೆಗಿನ ೫-೬ ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.

೨. ಉತ್ಸವವನ್ನು ಆಚರಿಸುವ ಪದ್ಧತಿ

ಅ. ಸ್ಥಾನ ಮತ್ತು ಸಮಯ : ದೇವಸ್ಥಾನದ ಮುಂದೆ ಅಥವಾ ಅನುಕೂಲತೆಯಿರುವಲ್ಲಿ ಹುಣ್ಣಿಮೆಯಂದು ಸಾಯಂಕಾಲ ಹೋಳಿಯನ್ನು ಹೊತ್ತಿಸುವುದಿರುತ್ತದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ರಚಿಸಲಾಗುತ್ತದೆ.

ಆ. ಕೃತಿ : ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡ, ಅಡಿಕೆಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ರಚಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಕಥನ ಮಾಡಿ ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ |’ ಎಂದು ಸಂಕಲ್ಪ ಮಾಡಬೇಕು. ನಂತರ ಪೂಜೆ ಮಾಡಿ ನೈವೇದ್ಯ ತೋರಿಸಬೇಕು. ನಂತರ ‘ಹೋಲಿಕಾಯೈ ನಮಃ |’ ಹೇಳಿ ಹೋಳಿ ಹೊತ್ತಿಸಬೇಕು.

ಹೋಳಿಯು ಹೊತ್ತಿದ ನಂತರ ‘ಹೋಳಿ’ಗೆ ಪ್ರದಕ್ಷಿಣೆ ಹಾಕಬೇಕು ಮತ್ತು ಬೋರಲು ಕೈಯಿಂದ ಬೊಬ್ಬೆ ಹೊಡೆಯಬೇಕು. ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಬೇಕು. ಆ ರಾತ್ರಿಯನ್ನು ನೃತ್ಯಗಾಯನಗಳಲ್ಲಿ ಕಳೆಯಬೇಕು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸಬೇಕು. ಆ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು. ಬೆಳಗ್ಗೆ ಅಶ್ಲೀಲ ಮಾತುಗಳನ್ನಾಡಿ ಹೋಳಿಯ ರಕ್ಷೆಯನ್ನು ವಿಸರ್ಜಿಸಬೇಕು. ಅನಂತರ ಹೋಳಿಯ ಪ್ರಾರ್ಥನೆ ಮಾಡಬೇಕು.

ಧೂಳಿವಂದನ (೧೮.೩.೨೦೨೨)

ತಿಥಿ : ಫಾಲ್ಗುಣ ಕೃಷ್ಣ ಪಾಡ್ಯ

ಪೂಜೆ : ಈ ದಿನ ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುವುದಿರುತ್ತದೆ. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಕರೇಣ ಚ

ಅತಸ್ತ್ವಂಪಾಹಿನೋದೇ ವಿಭೂತೇಭೂತಿಪ್ರದಾ ಭವ

ಅರ್ಥ : ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ; ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯ ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು.

ರಂಗಪಂಚಮಿ (೨೨.೩.೨೦೨೨)

೧. ತಿಥಿ : ಫಾಲ್ಗುಣ ಕೃಷ್ಣ ಪಂಚಮಿ (ಇತ್ತೀಚೆಗೆ ಹಲವೆಡೆ ಹೋಳಿಯ ಮರುದಿನ ರಂಗಪಂಚಮಿಯನ್ನು ಆಚರಿಸಲಾಗುತ್ತದೆ.)

೨. ಉತ್ಸವ : ಈ ದಿನ ಇತರರ ಮೇಲೆ ಗುಲಾಲು, ಬಣ್ಣದ ನೀರು ಮುಂತಾದವುಗಳನ್ನು ಎರಚುತ್ತಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥಗಳು ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’ ಮತ್ತು ‘ಹಬ್ಬಗಳ ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)