‘ನೀವು ಮಾಡುತ್ತಿರುವ ಅಭಿಯಾನವು ಅತ್ಯಂತ ಯಶಸ್ವಿಯಾಗಲಿದೆ !’ – ದೇವಿಯ ಆಶೀರ್ವಾದ

ಭಾರತಾದ್ಯಂತ ಹಮ್ಮಿಕೊಳ್ಳಲಾಗಿರುವ ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಉಡುಪಿಯ ಶ್ರೀ ಮಹಾಕಾಲಿದೇವಿಯ ಆಶೀರ್ವಾದ !

ಉಡುಪಿ – ಭಾರತಾದ್ಯಂತ ಹಮ್ಮಿಕೊಳ್ಳಲಾಗಿರುವ ಸನಾತನದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ಕ್ಕೆ ಉಡುಪಿಯ ಶ್ರೀ ಮಹಾಕಾಳಿ ದೇವಿಯ ಆಶೀರ್ವಾದ ಲಭಿಸಿದೆ. ರಾಜ್ಯದಲ್ಲಿ ಸನಾತನದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ”ವು ಆರಂಭವಾಗುವ ಮುನ್ನ ಉಡುಪಿಯ ಧರ್ಮಪ್ರೇಮಿ ಶ್ರೀ. ಆನಂದ್ ಅಮೀನ್ ಅವರು ಶ್ರೀ. ಸುಧರ್ಮ ಅವರಲ್ಲಿ ದೇವಿಯ ಆಶೀರ್ವಾದ ಪಡೆಯಲು ಹೋಗಿದ್ದರು. ಆಗ ಶ್ರೀ. ಸುಧರ್ಮ ಇವರು ವೀಳ್ಯದೆಲೆಯನ್ನು ಮೇಲಕ್ಕೆ ಹಾರಿಸಿದಾಗ ಎಲೆಯು ಆಕಾಶದ ಕಡೆ ಮೇಲ್ಮುಖವಾಗಿ ಬಿದ್ದಿತ್ತು. ಆಗ ದೇವಿಯು ಶ್ರೀ. ಸುಧರ್ಮ ಅವರ ಮೂಲಕ, “ನೀವು ಮಾಡುತ್ತಿರುವ ಅಭಿಯಾನ ಅಪಾರ ಪ್ರಮಾಣದಲ್ಲಿ ಯಶಸ್ವಿಯಾಗಲಿದೆ. ಇಂತಹ ಅಮೂಲ್ಯ ಗ್ರಂಥಗಳು ಪ್ರತಿ ಮನೆಮನೆಗೆ ತಲುಪಬೇಕು. ಸನಾತನ ಧರ್ಮದ ಪ್ರಸಾರ ಎಲ್ಲೆಡೆ ಆಗಬೇಕು. ಈ ಕಾರ್ಯಕ್ಕೆ ನನ್ನ ಸಂಪೂರ್ಣ ಆಶೀರ್ವಾದವಿದೆ. ಇಲ್ಲಿಗೆ ಬರುವ ಜನರಿಗೆ ನಾನೂ ಕೂಡ ಗ್ರಂಥಗಳ ಮಹತ್ವವನ್ನು ಹೇಳುವೆ ಮತ್ತು ನೀವೂ ಸಹ ಹೇಳಿರಿ.” ಎಂದು ಹೇಳಿದಳು.

ಶ್ರೀ ಮಹಾಕಾಳಿದೇವಿ ದೇವಸ್ಥಾನದ ಬಗ್ಗೆ ಮಾಹಿತಿ

ಉಡುಪಿ ಜಿಲ್ಲೆಯ ಕಟಪಾಡಿಯ ಕುದೂರು ಗ್ರಾಮದಲ್ಲಿ ಶ್ರೀ ಮಹಾಕಾಳಿದೇವಿಯ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಕಳೆದ ೧೩ ವರ್ಷಗಳಿಂದ ಶ್ರೀ. ಸುಧರ್ಮ ಇವರಲ್ಲಿ ಶ್ರೀ ಮಹಾಕಾಳಿ ದೇವಿಯ ಸಂಚಾರವಾಗುತ್ತದೆ. ಸಂಚಾರವಾದ ನಂತರ ಅವರು ಭವಿಷ್ಯ ನುಡಿಯುತ್ತಾರೆ. ಇದರಿಂದ ಅವರ ಬಳಿ ಸಮಸ್ಯೆಗಳನ್ನು ಕೇಳಲು ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಈ ೨ ದಿನಗಳಲ್ಲಿ ಸರಿ ಸುಮಾರು ೫೦೦ ಕ್ಕೂ ಹೆಚ್ಚು ಜನರು ಬರುತ್ತಾರೆ. ನವರಾತ್ರಿಯ ಸಮಯದಲ್ಲಿ ಇಲ್ಲಿ ದೊಡ್ಡ ಉತ್ಸವವಿರುತ್ತದೆ. ದೇವಿಯ ಸಂಚಾರವಾದನಂತರ ಶ್ರೀ. ಸುಧರ್ಮ ಇವರು ವೀಳ್ಯದೆಲೆಯನ್ನು ಮೇಲಕ್ಕೆ ಹಾರಿಸುತ್ತಾರೆ. ಈ ಎಲೆ ಯಾವ ರೀತಿ ಕೆಳಗೆ ಬೀಳುತ್ತದೋ, ಆ ರೀತಿಯಲ್ಲಿ ಅವರು ಜನರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತಾರೆ. ಅವರಲ್ಲಿಗೆ ಹೋದ ಹಲವಾರು ಸಮಸ್ಯೆಗಳು ಬಗೆಹರಿದಿವೆ. ಅದಕ್ಕಾಗಿ ಅವರು ಯಾರಿಂದಲೂ ಹಣವನ್ನು ಸ್ವೀಕರಿಸುವುದಿಲ್ಲ. ಯಾರಾದರೂ ಸ್ವ ಇಚ್ಛೆಯಿಂದ ಅರ್ಪಣೆ ನೀಡಲು ಬಯಸಿದರೆ, ಅವರು ಹಣವನ್ನು ದೇವಾಲಯದ ದೇಣಿಗೆ ಪೆಟ್ಟಿಗೆಯಲ್ಲಿ ಹಾಕುತ್ತಾರೆ.

ಸನಾತನದ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ಕುರಿತು ಸಂಕ್ಷಿಪ್ತ ಮಾಹಿತಿ

ಸನಾತನದ ಗ್ರಂಥಗಳು ಎಂದರೆ ಈಶ್ವರನ ಚೈತನ್ಯ, ಜೊತೆಗೆ ಆನಂದ ಮತ್ತು ಶಾಂತಿಯ ಅನುಭೂತಿಯನ್ನು ನೀಡುವ ಸಾಹಿತ್ಯವಾಗಿದೆ. ಸನಾತನದ ಗ್ರಂಥಗಳಲ್ಲಿನ ದಿವ್ಯ ಜ್ಞಾನವನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಸನಾತನದ ವತಿಯಿಂದ ಭಾರತದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಸನಾತನದ ಗ್ರಂಥಗಳು ಸಮಾಜದ ಪ್ರತಿಯೊಬ್ಬ ಜಿಜ್ಞಾಸು, ಮುಮುಕ್ಷತ್ವಗಳವರೆಗೆ ತಲುಪಿಸಿ ಅವರಿಗೂ ಸಹ ಈ ಜ್ಞಾನಶಕ್ತಿಯ ಲಾಭ ಸಿಗಲಿ, ಎಂಬುದು ಈ ಅಭಿಯಾನದ ಉದ್ದೇಶವಾಗಿದೆ.