ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದಿದೆ ! – ಜಾಗತಿಕ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನರ ಅಭಿಪ್ರಾಯ

ನವದೆಹಲಿ – ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ಹಂತದಲ್ಲಿ ಮಂದ ಅಥವಾ ಮಧ್ಯಮ ಸ್ತರದಲ್ಲಿ ರೋಗದ ಹರಡುವಿಕೆ ಇರುತ್ತದೆ. ಜನರು ವಿಷಾಣುಗಳೊಂದಿಗೆ ಹೊಂದಿಕೊಂಡಾಗ ಈ ಹಂತ ಬರುತ್ತದೆ. ಹಿಂದಿನ ಹಂತಕ್ಕಿಂತಲೂ ಈ ಹಂತವು ವಿಭಿನ್ನವಾಗಿರುತ್ತದೆ. ಹಿಂದಿನ ಹಂತದಲ್ಲಿ ವಿಷಾಣುವು ಜನಸಂಖ್ಯೆಯನ್ನು ಬಾಧಿಸುತ್ತದೆ ಎಂದು ಜಾಗತಿಕ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿಯಾದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡುತ್ತಿದ್ದರು.

1. ಸ್ವಾಮಿನಾಥನ್ ಅವರು ತಮ್ಮ ಮಾತನ್ನು ಮುಂದುವರಿಸಿ ಹೀಗೆಂದರು, ಭಾರತದ ಆಕಾರ ಮತ್ತು ಜನಸಂಖ್ಯೆಯಲ್ಲಿನ ವೈವಿಧ್ಯತೆ ಮತ್ತು ವಿವಿಧ ಭಾಗಗಳಲ್ಲಿರುವ ರೋಗ ಪ್ರತಿಕಾರಕ್ಷಮತೆ ಇವುಗಳಿಂದಾಗಿ ದೇಶದಲ್ಲಿನ ಕೊರೊನಾದ ಸ್ಥಿತಿಯು ಇದೇ ರೀತಿ ಮೇಲೆ-ಕೆಳಗೆ ಆಗಲಿರುವ ಸಾಧ್ಯತೆ ಹೆಚ್ಚಿದೆ. ಕಡಿಮೆ ಮತ್ತು ಮಧ್ಯಮ ಸ್ತರದಲ್ಲಿ ಸೋಂಕು ಹರಡುವ ಹಂತವನ್ನು ನಾವೀಗ ಪ್ರವೇಶಿಸುತ್ತಿದ್ದೇವೆ ಎಂದು ಅನಿಸುತ್ತಿದೆ. ಈ ಸ್ಥಿತಿಯಲ್ಲಿ ರೋಗ ಹೆಚ್ಚಾಗುವ ವೇಗ ಮತ್ತು ಅತ್ಯಧಿಕ ಸೋಂಕು ತಗಲುವ ಅಂಶವು ಕಂಡುಬರುತ್ತಿಲ್ಲ. ಯಾವ ಭಾಗಗಳಲ್ಲಿ ಅಥವಾ ಗುಂಪುಗಳಲ್ಲಿ ಹಿಂದೆ ಮೊದಲ ಮತ್ತು ಎರಡನೇ ಅಲೆಗಳಿಂದ ಸೊಂಕು ತಗಲಲಿಲ್ಲ ಮತ್ತು ಯಾವ ಪ್ರದೇಶಗಳಲ್ಲಿ ಉತ್ತಮ ಪ್ರಮಾಣದಲ್ಲಿ ಲಸಿಕೀಕರಣ ಆಗಲಿಲ್ಲವೋ, ಅಲ್ಲಿ ರೋಗವು ಉಲ್ಬಣಗೊಳ್ಳಬಹುದು ಮತ್ತು ಈ ಸ್ಥಿತಿಯು ಮುಂದಿನ ಅನೇಕ ತಿಂಗಳುಗಳವರೆಗೆ ಇರಬಹುದು.

2. ಮಕ್ಕಳಿಗೆ ಕೊರೊನಾದ ಬಾಧೆ ಉಂಟಾಗುವ ಸಾಧ್ಯತೆ ಬಗ್ಗೆ ಸ್ವಾಮಿನಾಥನರು ‘ಇತರ ದೇಶಗಳಲ್ಲಿ ಆದ ಸಮೀಕ್ಷೆಗಳಿಂದ ಮಕ್ಕಳಿಗೆ ಸೋಂಕು ತಗುಲುವ ಮತ್ತು ಹರಡುವ ಸಾಧ್ಯತೆ ಇದೆ ಎಂದು ಕಂಡುಬಂದಿದೆ. ಆದರೆ ಅದರ ಸ್ವರೂಪವು ಸೌಮ್ಯವಾಗಿರುವುದು ಹಾಗೂ ನಗಣ್ಯ ಪ್ರಮಾಣದಲ್ಲಿ ಮಕ್ಕಳು ಅನಾರೋಗ್ಯಕ್ಕೊಳಗಾಗುವರು. ಪ್ರೌಢರ ತುಲನೆಯಲ್ಲಿ ಈ ಪ್ರಮಾಣವು ಅತ್ಯಂತ ಕಡಿಮೆ ಇರುವುದು; ಆದರೂ ಸಮಸ್ಯೆಯೊಂದಿಗೆ ಹೋರಾಡುವ ಪೂರ್ವ ಸಿದ್ಧತೆಯನ್ನು ಮಾಡುವುದು ಉತ್ತಮ. ಮಕ್ಕಳಿಗಾಗಿ ಆಸ್ಪತ್ರೆಗಳನ್ನು ಸಿದ್ಧಪಡಿಸುವುದು, ತೀವ್ರ ನಿಗಾ ಘಟಕ ಗಳನ್ನು ನಿರ್ಮಿಸುವುದು ಮಹತ್ವದ್ದಾಗಿದೆ. ಇದರಿಂದ ತೀವ್ರ ನಿಗಾ ಘಟಕದಲ್ಲಿ ಸಾವಿರಾರು ಮಕ್ಕಳು ತುಂಬಿದರೂ ಗಲಿಬಿಲಿಯಾಗುವ ಅವಶ್ಯಕತೆಯಿಲ್ಲ’ ಎಂದು ಹೇಳಿದ್ದಾರೆ.