ಪೂ. (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮನುಷ್ಯ ಮತ್ತು ಮನುಷ್ಯಜನ್ಮ ಇವುಗಳ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

ಪೂ. (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು

೧. ಸರ್ವಸಾಮಾನ್ಯ ಮನುಷ್ಯನ ವೃತ್ತಿ ಮತ್ತು ಕೃತಿ

೧ ಅ. ವೃತ್ತಿ

೧ ಅ ೧. ಮಾಯೆಯ ಸುಖ : ‘ಜಗತ್ತಿನಲ್ಲಿ ಅರ್ಧ ಆನಂದ ಹೆಣ್ಣಿನಿಂದ ಸಿಗುತ್ತದೆ ಮತ್ತು ಅರ್ಧ ಆನಂದ ತಿನ್ನುವುದು, ಕುಡಿಯುವುದು, ಬಟ್ಟೆ, ಅಲಂಕಾರ, ನಿವಾಸಸ್ಥಾನ ಇವುಗಳಿಂದ ಸಿಗುತ್ತದೆ. ಇವುಗಳನ್ನು ಪಡೆಯಲು ಜಗತ್ತಿನಲ್ಲಿ ಪುರುಷರು ಪರಿಶ್ರಮ ಪಡುತ್ತಿದ್ದಾರೆ.

೧ ಅ ೨. ಮನುಷ್ಯನು ತನ್ನ ಮಕ್ಕಳ ಮಾಯೆಯಲ್ಲಿ ಸಿಲುಕುವುದು : ‘ಏಡಿಗಳು ಸಾವಿರಾರು ಮರಿಗಳಿಗೆ ಜನ್ಮ ಕೊಡುತ್ತವೆ. ನದಿಗೆ ನೆರೆ ಬಂದ ನಂತರ ಎಲ್ಲ ಮರಿಗಳು ಹರಿದು ಹೋಗುತ್ತವೆ. ತಾಯಿ ಮತ್ತು ಮರಿಗಳು ಪುನಃ ಎಂದಿಗೂ ಭೇಟಿಯಾಗುವುದಿಲ್ಲ. ಎಲ್ಲ ಪ್ರಾಣಿಗಳು ತಮ್ಮ ಮರಿಗಳು ಸಬಲವಾದ ನಂತರ ಅವುಗಳನ್ನು ಬಿಟ್ಟುಬಿಡುತ್ತವೆ ಮತ್ತು ಮರೆಯುತ್ತವೆ. ಮನುಷ್ಯರು ಮಾತ್ರ ನಾಲ್ಕು ಮಕ್ಕಳ ತಂದೆಯಾದರೂ, ಅವರನ್ನು ಗಟ್ಟಿಯಾಗಿ ಹಿಡಿದು ಕೊಂಡಿರುತ್ತಾರೆ. ತಾಯಿಯು ‘ನನ್ನ ಮಗು, ನನ್ನ ಮಗು, ಅನ್ನುತ್ತಿರುತ್ತಾಳೆ. ಇದು ಮನುಷ್ಯನ ರೀತಿಯಾಗಿದೆ.

೧ ಅ ೩. ಒಂದೇ ರೀತಿಯ ವೃತ್ತಿಯಿರುವ ಮನುಷ್ಯರ ಜೋಡಿಯಿರುತ್ತದೆ ! : ‘ಸನ್ಯಾಸಿಯು ಸನ್ಯಾಸಿಯ ಬಳಿಗೆ ಹೋಗುತ್ತಾನೆ ಮತ್ತು ಅವನ ಜೊತೆಗಿರುತ್ತಾನೆ. ಕಳ್ಳನು ಕಳ್ಳನ ಜೊತೆಗೆ, ನೇತಾರನು ನೇತಾರನ ಜೊತೆಗೆ ಮತ್ತು ಮೋಸಗಾರನು ಮೋಸಗಾರನ ಜೊತೆಗಿರುತ್ತಾನೆ. ಒಂದೇ ಸ್ವಭಾವದ ಮನುಷ್ಯರ ಜೋಡಿಯಿರುತ್ತದೆ.

೧ ಅ ೪. ಮನುಷ್ಯನ ಹಸಿವು ಮತ್ತು ಕಾಮವಾಸನೆ ಶಾಂತವಾಗದಿದ್ದರೆ ಅನರ್ಥವಾಗುತ್ತದೆ ಮತ್ತು ಅವುಗಳನ್ನು ಶಾಂತಗೊಳಿಸಲು ಮನುಷ್ಯನು ಬೆಳಗಿನಿಂದ ರಾತ್ರಿಯ ವರೆಗೆ ಶ್ರಮಿಸುತ್ತಾನೆ : ದೇವರು ಮನುಷ್ಯನ ದೇಹದಲ್ಲಿ ಮತ್ತು ಕಾಡಿನಲ್ಲಿರುವ ಪಶುಪಕ್ಷಿಗಳ ದೇಹದಲ್ಲಿ ೨ ದೊಡ್ಡ ಭಯಂಕರ ಅಗ್ನಿಯನ್ನು ಹಚ್ಚಿಟ್ಟಿದ್ದಾನೆ. ಮೊದಲನೇಯ ಅಗ್ನಿ ಎಂದರೆ ಹಸಿವು ಮತ್ತು ಎರಡನೆಯ ಅಗ್ನಿ ಎಂದರೆ ಕಾಮವಾಸನೆ ! ಎಲ್ಲಿಯವರೆಗೆ ಈ ಎರಡು ಅಗ್ನಿಗಳು ದೇಹದಲ್ಲಿ ಉರಿಯುತ್ತಿರುತ್ತವೆಯೋ, ಅಲ್ಲಿಯವರೆಗೆ ಮನುಷ್ಯನು ಹುಚ್ಚನಾಗುತ್ತಾನೆ. ಈ ಎರಡು ಹಸಿವುಗಳು ಶಾಂತವಾಗದಿದ್ದರೆ, ಅನರ್ಥವಾಗಬಹುದು. ಈ ಎರಡು ಹಸಿವುಗಳನ್ನು ಶಾಂತಗೊಳಿಸಲು ಮನುಷ್ಯನು ಬೆಳಗಿನಿಂದ ರಾತ್ರಿಯವರೆಗೆ ಶ್ರಮಿಸುತ್ತಾನೆ.

೧ ಅ ೫. ಮನುಷ್ಯನ ಸಂಪೂರ್ಣ ದಿನವು ಹಣದ ಆಸೆ ಅಥವಾ ಕುಟುಂಬದ ಪಾಲನೆ-ಪೋಷಣೆಯಲ್ಲಿಯೇ ಕಳೆದು ಹೋಗುತ್ತದೆ ಮತ್ತು ರಾತ್ರಿಯು ಮಲಗುವುದರಲ್ಲಿ ಕಳೆದು ಹೋಗುತ್ತದೆ, ಮನುಷ್ಯನು ಸಂಸಾರದಲ್ಲಿ ಎಷ್ಟೊಂದು ತಲ್ಲೀನನಾಗುತ್ತಾನೆ ಎಂದರೆ ಒಂದು ದಿನ ಮರಣ ಅವನ ಮೇಲೆ ಆಕ್ರಮಣ ಮಾಡಲಿದೆ, ಎಂಬುದನ್ನೂ ಅವನು ಮರೆಯುತ್ತಾನೆ : ಪರಮಾರ್ಥದ ಕಡೆಗೆ ಹೋಗದಿರುವ, ಪುಣ್ಯವನ್ನು ಗಳಿಸದಿರುವ ಮನುಷ್ಯನ ಆಯುಷ್ಯವು ಹೇಗೆ ವ್ಯರ್ಥವಾಗುತ್ತದೆ, ಎಂಬುದನ್ನು ಮುಂದೆ ನೋಡಿರಿ !

ಭಾಗವತದಲ್ಲಿ ಶುಕಮುನಿಗಳು ಪರೀಕ್ಷಿತ ರಾಜನಿಗೆ ಮುಂದಿನಂತೆ ಹೇಳಿದ್ದಾರೆ, ‘ಮನುಷ್ಯನ ಆಯುಷ್ಯವು ರಾತ್ರಿ ಮಲಗುವುದರಲ್ಲಿ ಅಥವಾ ಸ್ತ್ರೀಯ ಸಹವಾಸದಲ್ಲಿ ಹೋಗುತ್ತದೆ. ದಿನವು ಹಣದ ಆಸೆ ಅಥವಾ ಕುಟುಂಬದ ಪಾಲನೆ-ಪೋಷಣೆಯಲ್ಲಿಯೇ ಮುಗಿದು ಹೋಗುತ್ತದೆ. ‘ಅವನು ಸಂಸಾರದಲ್ಲಿ ಎಷ್ಟೊಂದು ತಲ್ಲೀನನಾಗುತ್ತಾನೆಂದರೆ, ಮುಂದೆ ಮೃತ್ಯುವು ನಮ್ಮ ಮೇಲೆ ಆಕ್ರಮಣ ಮಾಡಲಿದೆ, ಎಂಬುದರ ನೆನಪೂ ಅವನಿಗೆ ಉಳಿಯುವುದಿಲ್ಲ. ‘ಯಾರು ನಮ್ಮ ಪಾಲನೆಪೋಷಣೆಯನ್ನು ಮಾಡುತ್ತಾರೆಯೋ ಅಥವಾ ನಮ್ಮನ್ನು ಕಾಪಾಡುತ್ತಾರೆಯೋ, ಅವರಲ್ಲಿನ ಯಾರೂ ನಮ್ಮ ಜೊತೆಗೆ ಬರುವುದಿಲ್ಲ ಮತ್ತು ನಂತರ ಅವರು ನಮ್ಮನ್ನು ನೆನಪಿಸಿಕೊಳ್ಳುವುದೂ ಇಲ್ಲ, ಎಂಬುದರ ಕಲ್ಪನೆಯೂ ಅವನಿಗೆ ಇರುವುದಿಲ್ಲ.

೧ ಅ ೬. ಸ್ವಾರ್ಥಕ್ಕಾಗಿ ಮನುಷ್ಯನು ಮನುಷ್ಯತ್ವವನ್ನು ಮರೆಯುತ್ತಿದ್ದಾನೆ, ಇದರಿಂದ ಎಲ್ಲ ಕಡೆಗೆ ಅನಾಚಾರ, ಭ್ರಷ್ಟಾಚಾರ ನಡೆಯುತ್ತಿದೆ, ಇದರಿಂದ ಸರ್ವಸಾಮಾನ್ಯ ಮನುಷ್ಯರ ಜೀವನವೇ ಹಾಳಾಗುತ್ತಿದೆ : ದೇವರು ಯಾರಿಗೂ ತೊಂದರೆಗಳನ್ನು ಕೊಡುವುದಿಲ್ಲ. ಜಗತ್ತಿನಲ್ಲಿ ಮನುಷ್ಯನೇ ಮನುಷ್ಯನನ್ನು ತಿನ್ನುತ್ತಾನೆ ಮತ್ತು ಮನುಷ್ಯನೇ ಮನುಷ್ಯನಿಗೆ ತೊಂದರೆಗಳನ್ನು ಕೊಡುತ್ತಾನೆ. ಕೆಲಸಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಮನುಷ್ಯನು ಮನುಷ್ಯತ್ವವನ್ನು ಮರೆಯುತ್ತಿದ್ದಾನೆ. ಇದರಿಂದ ಜಗತ್ತಿನಲ್ಲಿ ಪಾಪಿಗಳ ಸುಳಿದಾಟ ಹೆಚ್ಚಾಗಿದೆ. ಪಾಪಿಗಳು, ಧೂರ್ತರು ಮತ್ತು ಲಜ್ಜೆಗೇಡಿಗಳು (ನಿರ್ಲಜ್ಜರು) ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತಿದ್ದಾರೆ. ಆಡಳಿತವು ನಿತ್ಯ ಬೆಲೆಗಳನ್ನು ಹೆಚ್ಚಿಸಿ ಜನರ ಮೇಲೆ ತೆರಿಗೆಯನ್ನು ಹೇರುತ್ತಿದೆ. ಸರ್ವಸಾಮಾನ್ಯ ಮನುಷ್ಯರ ಜೀವನವೇ ಹಾಳಾಗುತ್ತಿದೆ. ರಾಜಕಾರಣಿಗಳಿಗೆ ಕೆಟ್ಟ ಕಾಲ ಬಂದಿದೆ. ನೀತಿ ಮತ್ತು ನ್ಯಾಯ ಉಳಿದಿಲ್ಲ. ಎಲ್ಲ ಕಡೆಗೆ ಅನಾಚಾರ ಮತ್ತು ಭ್ರಷ್ಟಾಚಾರ ನಡೆದಿದೆ. ‘ಹೇ ದೇವರೇ, ನೀನು ಈಗ ಅವತಾರ ತೆಗೆದುಕೋ ಮತ್ತು ಈ ಪಾಪಿಗಳಿಂದ ಭೂಮಾತೆಗೆ ಆಗುವ ಭಾರವನ್ನು ಕಡಿಮೆ ಮಾಡು.

೧ ಅ ೭. ‘ಸಂಸಾರದಲ್ಲಿ ಅಜ್ಞಾನದಿಂದ ತಪ್ಪು ನಿರ್ಣಯಗಳನ್ನು ತೆಗೆದುಕೊಂಡರೆ ಹಾನಿಯಾಗುತ್ತದೆ; ಆದುದರಿಂದ ತಪ್ಪುಗಳನ್ನು ಹೇಳುವವರು ನಮ್ಮ ಗುರುಗಳೇ ಆಗಿದ್ದಾರೆ, ಎಂದು ತಿಳಿದು ಪ್ರತಿದಿನ ನಾವು ಸುಧಾರಿಸುತ್ತಾ ಹೋಗಬೇಕು, ಇದುವೇ ಜಾಣತನವಾಗಿದೆ : ಮನುಷ್ಯರ ಸ್ವಭಾವ ಹೇಗಿದೆ, ನೋಡಿ ! ‘ತಮ್ಮ ತಪ್ಪುಗಳನ್ನು ಮುಚ್ಚಿಡುತ್ತಾರೆ ಮತ್ತು ಇತರರ ತಪ್ಪುಗಳನ್ನು ಹೇಳುತ್ತಾರೆ, ಇದು ಮನುಷ್ಯನ ವೃತ್ತಿಯೇ ಆಗಿದೆ. ‘ಯಾರು ನಮ್ಮ ತಪ್ಪುಗಳನ್ನು ಹೇಳುತ್ತಾರೆಯೋ, ಅವರನ್ನು ನಮ್ಮ ಗುರುಗಳೆಂದು ತಿಳಿದುಕೊಳ್ಳಬೇಕು; ಏಕೆಂದರೆ ಅವರು ನಾವು ಸುಧಾರಿಸಬೇಕೆಂದು ನಮಗೆ ಸಹಾಯ ಮಾಡುತ್ತಿರುತ್ತಾರೆ, ಆದರೆ ನಾವು ತಪ್ಪುಗಳನ್ನು ಹೇಳುವವರ ಮೇಲೆ ರೇಗಾಡುತ್ತೇವೆ. ಇಲ್ಲಿಯೇ ಮನುಷ್ಯನ ತಪ್ಪಾಗುತ್ತದೆ.

ಇದರಿಂದ ಮನುಷ್ಯನು ಜಾಣನಾಗದೇ ಹುಚ್ಚನಾಗಿಯೇ (ಅಜ್ಞಾನಿಯಾಗಿಯೇ) ಉಳಿಯುತ್ತಾನೆ. ಕೆಲವರಿಗೆ ಮುಂಗೋಪ ತುಂಬ ಇರುತ್ತದೆ; ಇದರಿಂದ ಅವರಿಗೆ ಆ ಪ್ರಸಂಗದಿಂದ ಕಲಿಯಲು ಸಿಗುವುದಿಲ್ಲ ಮತ್ತು ಜ್ಞಾನವೂ ಸಿಗುವುದಿಲ್ಲ. ತಪ್ಪುಗಳನ್ನು ಸುಧಾರಿಸದಿದ್ದರೆ, ನಾವು ಹೇಗೆ ಸುಧಾರಿಸುವುದು ?

ನಾವು ಅಜ್ಞಾನಿಗಳಾಗಿಯೇ ಉಳಿಯುವೆವು ಮತ್ತು ಅಜ್ಞಾನದಿಂದ ನಾವು ತಪ್ಪು ನಿರ್ಣಯಗಳನ್ನು ತೆಗೆದುಕೊಂಡು ಸಂಸಾರದಲ್ಲಿ ಹಾನಿಯನ್ನು ಮಾಡಿಕೊಳ್ಳುವೆವು. ಆದುದರಿಂದ ತಪ್ಪುಗಳನ್ನು ಹೇಳುವವರಿಗೆ ಗುರುಗಳ ಸ್ಥಾನವನ್ನು ನೀಡಿ ನಾವು ದಿನದಿಂದ ದಿನಕ್ಕೆ ಸುಧಾರಿಸುತ್ತಾ ಹೋಗಬೇಕು, ಇದೇ ಜಾಣತನವಾಗಿದೆ.

೧ ಅ ೮. ಜಗಳಗಳನ್ನು ಹಚ್ಚುವ ಮನುಷ್ಯನು ವಿಷ ನಿರ್ಮಾಣ ಮಾಡುತ್ತಾನೆ : ‘ನಾರದಮುನಿಗಳ ವೀಣೆ ಸಾಮಾನ್ಯ ವೀಣೆಯಾಗಿಲ್ಲ. ನಾರದಮುನಿಗಳು ಈ ವೀಣೆಯನ್ನು ಹಿಡಿದುಕೊಂಡು ದೇವರ ಭಜನೆಯನ್ನು ಮಾಡುತ್ತ ತ್ರೀಕಾಲ, ಸಪ್ತಪಾತಾಳ, ೧೪ ಭುವನಗಳು ಮತ್ತು ೨೧ ಸ್ವರ್ಗಗಳನ್ನು ಸುತ್ತಾಡುತ್ತಿದ್ದರು. ನಾರದರ ಬಗ್ಗೆ ದೇವರಿಗೆ ಮತ್ತು ದಾನವರಿಗೆ ಇಬ್ಬರಿಗೂ ಗೌರವವಿತ್ತು. ದೈತ್ಯರು ಮತ್ತು ದೇವರು ಇವರಿಬ್ಬರೂ ಅವರನ್ನು ಗೌರವಿಸುತ್ತಿದ್ದರು; ಆದರೆ ಅವರು ಇಬ್ಬರಲ್ಲಿ ಜಗಳಗಳನ್ನು ಹಚ್ಚುತ್ತಿದ್ದರು. ಆದರೆ ಅದರಿಂದ ಯಾವಾಗಲೂ ಒಳ್ಳೆಯದೇ ಆಗುತ್ತಿತ್ತು; ಆದರೆ ನಾವು ಯಾವ ಜಗಳಗಳನ್ನು ಹಚ್ಚುತ್ತೇವೆಯೋ, ಅದರಿಂದ ವಿಷ ನಿರ್ಮಾಣವಾಗುತ್ತದೆ. ನಾವು ಹಚ್ಚುತ್ತಿರುವ ಜಗಳಗಳು ನಮ್ಮ ಸ್ವಾರ್ಥವನ್ನು ಸಾಧಿಸಲು ಇರುತ್ತವೆ.

೧ ಅ ೯. ಸಂಸಾರರೂಪಿ ಅರಣ್ಯದ ಸ್ಪಷ್ಟೀಕರಣ

೧ ಅ ೯ ಅ. ಹಣದ ಮೇಲೆ ಸಂಬಂಧಗಳು ಅವಲಂಬಿಸಿರುತ್ತವೆ : ‘ಎಲ್ಲೆಡೆ ಮಾಯೆಯ ಸಂತೆ ಏರ್ಪಟ್ಟಿದೆ. ಯಾವ ಅಣ್ಣನ ವ್ಯಾಪಾರವು ಚೆನ್ನಾಗಿ ನಡೆಯುತ್ತದೆಯೋ, ಅವನ ತಂಗಿಯು ‘ಅಣ್ಣಾ, ಅಣ್ಣಾ ಎಂದು ಅವನ ಹಿಂದಿರುತ್ತಾಳೆ. ಯಾವ ಅಣ್ಣನು ಬಡವನಾಗಿರುತ್ತಾನೆಯೋ ಅವನ ಕಡೆಗೆ ಯಾರೂ, ನಾಯಿಯೂ ಬರುವುದಿಲ್ಲ.

೧ ಅ ೧೦. ಕೊಳೆತ ಈರುಳ್ಳಿ ಹೇಗೆ ಸಂಪೂರ್ಣ ಚೀಲವನ್ನೇ ನಾಶ ಮಾಡುತ್ತದೆಯೋ, ಹಾಗೆ ಸುಳ್ಳು ಮಾತನಾಡುವವರು ಮತ್ತು ಪಾಪಿ ಮನುಷ್ಯರು ಒಳ್ಳೆಯ ಮನುಷ್ಯರನ್ನೂ ಹಾಳು ಮಾಡುತ್ತಾರೆ ! : ‘ನನಗೆ ಪರೋಪಕಾರಿ ಮತ್ತು ಉದಾರ ಮನುಷ್ಯರು ಇಷ್ಟವಾಗುತ್ತಾರೆ. ಸತ್ಯ ಮತ್ತು ನೀತಿಯಿಂದ ನಡೆದುಕೊಳ್ಳುವವರು, ಧರ್ಮದಂತೆ ನಡೆದುಕೊಳ್ಳುವರು, ಪುಣ್ಯವಂತ ಭಕ್ತ ಮನುಷ್ಯರು ನನಗೆ ಬೇಕಾಗಿದ್ದಾರೆ. ಜ್ಞಾನವಂತರು ನನಗೆ ಬೇಕು. ನನಗೆ ಇಲ್ಲಿ ಕೆಟ್ಟ ಜನರು ಬೇಡ, ಲಫಂಗರು, ಮೋಸಗಾರರು, ವಂಚಕರು, ಸುಳ್ಳು ಮಾತನಾಡುವವರು, ಪಾಪಿ ಮನುಷ್ಯರು ಬೇಡ. ‘ಇಂತಹ ಸ್ವಭಾವವಿರುವ ಮನುಷ್ಯರು ನನ್ನ ಬಳಿ ಬರಬಾರದು, ಎಂದು ನನಗೆ ಅನಿಸುತ್ತದೆ. ‘ಕೆಟ್ಟ ಮತ್ತು ಸ್ವಭಾವದೋಷಗಳ ಆವರಣವಿರುವ ಮನುಷ್ಯರು ನನಗೆ ಬೇಡ; ಏಕೆಂದರೆ ಅವರು ಒಳ್ಳೆಯ ಜನರನ್ನು ಹಾಳು ಮಾಡುತ್ತಾರೆ. ಒಂದು ಕೊಳೆತ ಈರುಳ್ಳಿಯಿಂದ ಈರುಳ್ಳಿಯ ಚೀಲವೇ ಹಾಳಾಗುತ್ತದೆ. ಎಲ್ಲವೂ ಕೊಳೆಯುತ್ತವೆ. ಆದುದರಿಂದ ನೀವು ದೂರ ಇರಬೇಕು.

– ಪೂ. ಸಖಾರಾಮ ರಾಮಜಿ ಬಾಂದ್ರೆ (ವಯಸ್ಸು ೭೦ ವರ್ಷ), ಕಾತಳವಾಡಿ, ಚಿಪಳೂಣ ತಾ., ರತ್ನಾಗಿರಿ ಜಿಲ್ಲೆ.

(ಪೂ. ಸಖಾರಾಮ ಬಾಂದ್ರೆ ಮಹಾರಾಜರು ಈ ಲೇಖನಗಳನ್ನು  ೨೦೦೫ ರಿಂದ ೨೦೨೦ ರ ಕಾಲಾವಧಿಯಲ್ಲಿ ಬರೆದಿದ್ದಾರೆ.)