Students Pursuing Career In Priesthood! : ಉಡುಪಿ ವಿದ್ಯಾರ್ಥಿಗಳು ಪೌರೋಹಿತ್ಯದಲ್ಲಿ ‘ಕೆರಿಯರ್’ ಮಾಡುತ್ತಿದ್ದಾರೆ!

  • ವಿದೇಶದಲ್ಲಿ ಪೌರೋಹಿತ್ಯ ವೃತ್ತಿ!

  • ಸಂಸ್ಕೃತ ಸೇರಿದಂತೆ ಮೂರು ಭಾಷೆಗಳಲ್ಲಿ ತರಬೇತಿ!

  • ವೇದ-ಶಾಸ್ತ್ರಗಳೊಂದಿಗೆ ಗಣಕಯಂತ್ರ, ವಿಜ್ಞಾನದ ಶಿಕ್ಷಣ!

ಶ್ರೀಪುತ್ತಿಗೆ ಮಠದ ವ್ಯವಸ್ಥಾಪಕ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಉಡುಪಿ – ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಆಧುನಿಕ ವೈದ್ಯ (ಡಾಕ್ಟರ್), ಇಂಜಿನಿಯರ ಮುಂತಾದ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಿರುವಾಗ, ಉಡುಪಿಯ ಶ್ರೀಪುತ್ತಿಗೆ ಮಠದ ಆಡಳಿತದಲ್ಲಿ ನಡೆಯುತ್ತಿರುವ ಸುಗುಣ ಶಾಲೆಯ ವಿದ್ಯಾರ್ಥಿಗಳು ಮಾತ್ರ ಪೌರೋಹಿತ್ಯದಲ್ಲಿ ‘ಕೆರಿಯರ್’ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಈ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಇಂಗ್ಲಿಷ್, ಸಂಸ್ಕೃತ ಮತ್ತು ಕನ್ನಡ ಭಾಷೆಗಳನ್ನು ಮಾತನಾಡಬಲ್ಲರು, ಬರೆಯಬಲ್ಲರು ಮತ್ತು ಓದಬಲ್ಲರು. ಈ ಶಾಲೆಯನ್ನು 9 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ.

1. ಪುರೋಹಿತರಾಗಲು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಷ್ಠಾನ, ಕರ್ಮಕಾಂಡ ಸಹಿತ ಕರ್ತವ್ಯ ಮತ್ತು ನೀತಿಗಳ ಜ್ಞಾನವನ್ನು ನೀಡಲಾಗುತ್ತದೆ. ಪ್ರಾಣಿಗಳ ಬಗ್ಗೆ ದಯೆ ಮತ್ತು ಹಿರಿಯರನ್ನು ಗೌರವಿಸಲು ಸಹ ಅವರಿಗೆ ಕಲಿಸಲಾಗುತ್ತದೆ.

2. ಮಾನವ ಮತ್ತು ಪ್ರಕೃತಿಯ ಪರಸ್ಪರ ಅವಲಂಬನೆ, ಶಿಸ್ತು, ಚಿಂತನಶೀಲ ಜೀವನಶೈಲಿಯ ಹಿಂದಿನ ವೈದಿಕ ದೃಷ್ಟಿಕೋನ ಮುಂತಾದವುಗಳ ಪರಿಚಯವನ್ನೂ ಮಾಡಿಕೊಡಲಾಗುತ್ತದೆ. ಶ್ರೀಪುತ್ತಿಗೆ ಮಠದ ಸ್ವಾಮಿ ಪ್ರಸನ್ನಾಚಾರ್ಯರು ಹೇಳುವಂತೆ, ಸದ್ಯ ಎಲ್ಲಾ ವಿದ್ಯಾರ್ಥಿಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ; ಆದರೆ ಭವಿಷ್ಯದಲ್ಲಿ ದೇಶದ ಎಲ್ಲಾ ಭಾಗಗಳ, ಎಲ್ಲಾ ಜಾತಿಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಜ್ಞಾನ-ವಿಜ್ಞಾನಗಳೊಂದಿಗೆ ಪೌರೋಹಿತ್ಯದ ತರಬೇತಿಯನ್ನು ಪಡೆಯುತ್ತಾರೆ ಎಂಬ ಆಶಯ ನಮಗಿದೆ.’, ಎಂದು ಹೇಳಿದರು.

೩. ಈ ಶಾಲೆಯನ್ನು ‘ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ’ಯ (‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್’) ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಶ್ರೀಪುತ್ತಿಗೆ ಮಠವು ಬೆಂಗಳೂರು, ಚೆನ್ನೈ, ಕೋಲಕಾತಾ ಮತ್ತು ಹಿರಿಯಡ್ಕದಲ್ಲೂ ಶಾಲೆಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಒಟ್ಟು ೨೫೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ವಸತಿ, ಊಟ ಹಾಗೂ ಶಿಕ್ಷಣ ಶುಲ್ಕವೆಂದು ವರ್ಷಕ್ಕೆ ೧೬ ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳಲಾಗುತ್ತದೆ.

ವಿದೇಶಗಳಲ್ಲಿ ಪುರೋಹಿತರ ಕೊರತೆ ನೀಗಿಸಲಾಗುವುದು! – ಮಠದ ವ್ಯವಸ್ಥಾಪಕರು

ಈ ಕುರಿತು ಮಾಹಿತಿ ನೀಡುತ್ತಾ ಶ್ರೀಪುತ್ತಿಗೆ ಮಠದ ವ್ಯವಸ್ಥಾಪಕರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು, ‘‘ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಹೆಚ್ಚುತ್ತಿದೆ. ದೇವಾಲಯಗಳ ಸಂಖ್ಯೆಯೂ ಹೆಚ್ಚುತ್ತಿದೆ; ಆದರೆ ಅಲ್ಲಿ ಪುರೋಹಿತರು ಮತ್ತು ಆಚಾರ್ಯರ ಕೊರತೆ ಕಂಡುಬರುತ್ತಿದೆ. ಈ ದೇಶಗಳಲ್ಲಿ ನೆಲೆಸಿರುವವರ ಭಾರತೀಯ ಸಂಸ್ಕೃತಿಯೊಂದಿಗಿನ ನಂಟು ಶಾಶ್ವತವಾಗಿರಲಿ ಎನ್ನುವ ಕಾರಣಕ್ಕೆ ನಾವು ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದೇವೆ. ಇಲ್ಲಿನ ವಿದ್ಯಾರ್ಥಿಗಳು ಈ ಶಿಕ್ಷಣದಿಂದ ಬಹಳ ಸಂತೋಷವಾಗಿದ್ದಾರೆ,’’ ಎಂದು ಹೇಳಿದರು.