ಛತ್ತರಪುರ (ಮಧ್ಯಪ್ರದೇಶ) – ಇಲ್ಲಿ 77 ವರ್ಷದ ವೃದ್ಧನ ಮೇಲೆ ಹಲ್ಲೆ ಮಾಡಿದ ಡಾ. ರಾಜೇಶ ಮಿಶ್ರಾ ಅವರಿಗೆ ‘ಕಾರಣ ಕೇಳಿ’ ನೋಟಿಸ್ ಜಾರಿ ಮಾಡಲಾಗಿದ್ದು, ಅವರ ಇಲಾಖಾ ವಿಚಾರಣೆಗೆ ಛತ್ತರಪುರ ವೈದ್ಯಕೀಯ ಪ್ರಾಧಿಕಾರ ಆದೇಶಿಸಿದೆ. ವೃದ್ಧನ ಹೆಸರು ಉಧವಲಾಲ ಜೋಶಿ ಆಗಿದ್ದು, ಏಪ್ರಿಲ್ 17 ರಂದು ಈ ಘಟನೆ ನಡೆದಿದೆ. ಡಾ. ಮಿಶ್ರಾ ಅವರು ಜೋಶಿಯವರನ್ನು ಎಳೆದುಕೊಂಡು ಹೋಗುತ್ತಿರುವ ಮತ್ತು ಆಸ್ಪತ್ರೆಯ ಸಮೀಪದ ಪೊಲೀಸ ಠಾಣೆಯಲ್ಲಿ ಕೂಡಿ ಹಾಕುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ನಂತರ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಡಾ. ಮಿಶ್ರಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಉಧವಲಾಲ ಜೋಶಿ ಅವರು ತಮ್ಮ ಅನಾರೋಗ್ಯ ಪತ್ನಿಯನ್ನು ಹೊಟ್ಟೆನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಜೋಶಿ ಅವರು ಸರದಿಯಲ್ಲಿ ನಿಂತಿದ್ದಾಗ, ಕೆಲವು ಕಾರಣಗಳಿಗಾಗಿ ಡಾ. ಮಿಶ್ರಾ ಅವರೊಂದಿಗೆ ವಾಗ್ವಾದ ನಡೆಯಿತು. ಇದರಿಂದ ಕೋಪಗೊಂಡ ಡಾ. ಮಿಶ್ರಾ ಅವರು ಜೋಶಿಯವರಿಗೆ ಕಪಾಳಕ್ಕೆ ಹೊಡೆದರು, ಕಾಲಿನಿಂದ ಒದ್ದರು ಮತ್ತು ಎಳೆದುಕೊಂಡು ಹೋಗುತ್ತಾ ಅವರ ಕನ್ನಡಕವನ್ನು ಮುರಿದರು. ಇದಕ್ಕೆ ಡಾ. ಮಿಶ್ರಾ ಅವರು, ‘ಜೋಶಿಯವರೇ ನನಗೆ ಕಪಾಳಕ್ಕೆ ಹೊಡೆದರು’ ಎಂದು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವು
|