ಢಾಕಾದಲ್ಲಿ (ಬಾಂಗ್ಲಾದೇಶ) ಭಾರತೀಯ ರಾಯಭಾರ ಕಚೇರಿಯ ಮೇಲೆ ‘ಜಮಾತ್-ಎ-ಇಸ್ಲಾಮಿ’ಯಿಂದ ಮೆರವಣಿಗೆ ನಡೆಸಿ ದಾಳಿ ಮಾಡಲು ಯತ್ನ

ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹನ

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಮತಾಂಧ ರಾಜಕೀಯ ಪಕ್ಷವಾದ ‘ಜಮಾತ್-ಎ-ಇಸ್ಲಾಮಿ’ಯು ಭಾರತೀಯ ರಾಯಭಾರ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿ, ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಮತಾಂಧರ ಮೆರವಣಿಗೆಯನ್ನು ಢಾಕಾ ಪೊಲೀಸರು ಭಾರತೀಯ ಹೈಕಮಿಷನ್ ಕಡೆಗೆ ಹೋಗದಂತೆ ತಡೆದರು. ಬಾಂಗ್ಲಾದೇಶದ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧರಿ ಅವರು ಈ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ತಿಳಿಸುವಾಗ, ಜಮಾತ್-ಎ-ಇಸ್ಲಾಮಿಯ ಅನೇಕ ಪ್ರಮುಖ ನಾಯಕರು ಇತರ ಇಸ್ಲಾಮಿ ಪಕ್ಷಗಳೊಂದಿಗೆ ಸೇರಿ ಢಾಕಾದಲ್ಲಿನ ಭಾರತೀಯ ಹೈಕಮಿಷನ್ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು ಎಂದು ಹೇಳಿದರು. ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿದರು ಮತ್ತು ‘ಬಾಂಗ್ಲಾದೇಶ ಆಜಾದ್ ಪಾರ್ಟಿ’ ಹೆಸರಿನ ಹೊಸ ಮೈತ್ರಿಕೂಟದ ಸ್ಥಾಪನೆಯನ್ನು ಘೋಷಿಸಿದರು.

1. ಜಮಾತ್-ಎ-ಇಸ್ಲಾಮಿ ಮತ್ತು ಅದರ ನೇತೃತ್ವದ 11 ಪಕ್ಷಗಳ ಮತಾಂಧ ಮೈತ್ರಿಕೂಟವು ಭಾರತದ ವಿರುದ್ಧ ಹೊಸ ಮತ್ತು ದೊಡ್ಡ ಮೈತ್ರಿಕೂಟವನ್ನು ತೆರೆದಿದೆ. ಈ ಮೈತ್ರಿಕೂಟದ ಮುಖ್ಯ ಉದ್ದೇಶ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಥಿತ ‘ಪುಶ್-ಇನ್’ ಅಂದರೆ ಬಲವಂತವಾಗಿ ಗಡಿ ದಾಟಿಸುವುದು ಮತ್ತು ‘ಗಡಿಯಾಚೆಗಿನ ಗುಂಡಿನ ದಾಳಿ’ಯನ್ನು ವಿರೋಧಿಸುವುದು ಆಗಿದೆ. ಬಾಂಗ್ಲಾದೇಶದಲ್ಲಿ ಭಾರತದ ವಿರುದ್ಧ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರಾಜಧಾನಿಯಲ್ಲಿ ಚರ್ಚಾಗೋಷ್ಠಿಯ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ಮೈತ್ರಿಕೂಟ ಹೇಳಿದೆ.

2. ಜೂನ್ 10 ರಂದು ಮೋಗ್ ಬಜಾರ್‌ನಲ್ಲಿರುವ ಜಮಾತ್-ಎ-ಇಸ್ಲಾಮಿಯ ಕೇಂದ್ರ ಕಚೇರಿಯಲ್ಲಿ ಮೈತ್ರಿಕೂಟವು ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಇದರಲ್ಲಿ ಭಾರತದ ವಿರುದ್ಧ ದೇಶಾದ್ಯಂತ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ತಿಳಿಸಲಾಗಿತ್ತು. ಗಡಿ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮೈತ್ರಿಕೂಟದ ಸಂಪರ್ಕ ಸಮಿತಿಯ ಸಂಯೋಜಕ ಮತ್ತು ಜಮಾತ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿ ಎ.ಎಚ್.ಎಮ್. ಹಮೀದುರ್ ರೆಹಮಾನ್ ಆಜಾದ್ ಅವರು, ದೇಶವು ರಾಜಕೀಯ ಅಸ್ಥಿರತೆ, ಗಡಿಯಲ್ಲಿ ಹತ್ಯೆಗಳು ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ ಎಂದರು. ಕಳೆದ 100 ದಿನಗಳಲ್ಲಿ ಭಾರತದ ಗಡಿ ಭದ್ರತಾ ಪಡೆಯ ಗುಂಡಿನ ದಾಳಿಯಲ್ಲಿ 19 ಬಾಂಗ್ಲಾದೇಶಿಗಳು ಮೃತಪಟ್ಟಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಎಂದು ಜಮಾತ್ ನಾಯಕ ಆರೋಪಿಸಿದರು.

3. ಕಳೆದ 3 ತಿಂಗಳಲ್ಲಿ ಭಾರತವು 2 ಸಾವಿರದ 400 ಕ್ಕೂ ಹೆಚ್ಚು ಬಾಂಗ್ಲಾದೇಶಿ ನಾಗರಿಕರನ್ನು ಬಲವಂತವಾಗಿ ಗಡಿ ದಾಟಿಸಲು ಪ್ರಯತ್ನಿಸಿದೆ ಎಂದು ಜಮಾತ್ ಮೈತ್ರಿಕೂಟವು ದಾವೆ ಮಾಡಿದೆ. (ಇದೇ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ನೂರಾರು ಹಿಂದೂಗಳ ಮೇಲೆ ನಡೆದ ದಾಳಿಗಳ ಬಗ್ಗೆ ಜಮಾತ್ ಸುಮ್ಮನಿರುವುದು ಗಮನಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತ ಸರಕಾರ ಬಾಂಗ್ಲಾದೇಶದ ಈ ಘಟನೆಗಳನ್ನು ಇನ್ನೂ ಎಷ್ಟು ದಿನ ಕೇವಲ ನೋಡುತ್ತಾ ಇರುತ್ತದೆ?