ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ

ಬಾಂಗ್ಲಾದೇಶದ ಗಾಯಬಾಂಧಾದಲ್ಲಿ ‘ಸನಾತನ ಧರ್ಮ ಸಂಕೀರ್ಣ’ದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿರುವುದರ ಕುರಿತು ಬಾಂಗ್ಲಾದೇಶದ ಹಿರಿಯ ಸಂಪಾದಕ ಸಲಾಹ್ ಉದ್ದೀನ್ ಚೌಧರಿ ಅವರ ಹೇಳಿಕೆ

ಢಾಕಾ (ಬಾಂಗ್ಲಾದೇಶ) – ಗಾಯಬಾಂಧಾದಲ್ಲಿ ಏನು ನಡೆಯುತ್ತಿದೆ? ಇಸ್ಲಾಮಿಕ್ ಕಟ್ಟರವಾದಿಗಳು ಮತ್ತು ಜಿಹಾದಿಗಳು ಈ ಯೋಜನೆಯನ್ನು ಗುರಿಯಾಗಿಸಿಕೊಂಡು ತಮ್ಮ ದುಷ್ಕೃತ್ಯಗಳನ್ನು ಹೆಚ್ಚಿಸುತ್ತಿದ್ದಾರೆ. ಅವರು ಭಗವಾನ್ ಶಿವ, ಭಗವಾನ್ ಶ್ರೀಕೃಷ್ಣ ಮತ್ತು ಭಗವಾನ್ ಶ್ರೀರಾಮರ ಮೂರ್ತಿಗಳನ್ನು ಧ್ವಂಸಗೊಳಿಸಲು ಬಹಿರಂಗವಾಗಿ ಕರೆ ನೀಡುತ್ತಿದ್ದಾರೆ ಮತ್ತು ಸರಕಾರಿ ವ್ಯವಸ್ಥೆಯು ಸಂಪೂರ್ಣವಾಗಿ ಮೌನವಾಗಿದೆ. ಈ ದೇಶದಲ್ಲಿ ಹಿಂದೂಗಳಿಗೆ ಬದುಕುವ ಹಕ್ಕಿಲ್ಲವೇ? ಬಾಂಗ್ಲಾದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವ ಅಪರಾಧಿಗಳಿಗೆ ಸರಕಾರ ಸಹಾಯ ಮಾಡುತ್ತಿದೆಯೇ?, ಎಂದು ಇಲ್ಲಿನ ‘ವೀಕ್ಲಿ ಬ್ಲಿಟ್ಜ್’ನ ಹಿರಿಯ ಸಂಪಾದಕ ಮತ್ತು ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರು ಆಕ್ರೋಶಭರಿತ ಪ್ರಶ್ನೆಯನ್ನು ಎತ್ತಿದ್ದಾರೆ. ಅವರು ‘ಎಕ್ಸ್’ (ಟ್ವಿಟರ್) ಮೂಲಕ ತಮ್ಮದೇ ಆದ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.

ಚೌಧರಿ ಅವರು ಪ್ರಸ್ತಾಪಿಸಿದ ಪ್ರಮುಖ ಅಂಶಗಳು!

1. ನೂರಾರು ಮಸೀದಿಗಳ ನಿರ್ಮಾಣಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ ಈ ದೇಶಕ್ಕೆ ಶತಕೋಟಿ ಡಾಲರ್‌ಗಳು ಬರುತ್ತಿವೆ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ಕ್ರಿಶ್ಚಿಯನ್ ರಾಷ್ಟ್ರಗಳು ಚರ್ಚ್‌ಗಳನ್ನು ನಿರ್ಮಿಸಲು ಹಣವನ್ನು ಕಳುಹಿಸುತ್ತಿವೆ. ಜಪಾನ್ ಪಗೋಡಾ (ಬೌದ್ಧ ದೇವಾಲಯ) ನಿರ್ಮಿಸಲು ಹಣವನ್ನು ಕಳುಹಿಸುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ.

2. ಆದರೆ, ಯಾವಾಗ ಹಿಂದೂಗಳು ದೇವಾಲಯಗಳನ್ನು ನಿರ್ಮಿಸಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೋ, ಆಗಲೇ ಸಮಸ್ಯೆ ಸೃಷ್ಟಿಯಾಗುತ್ತದೆ. ಏಕೆ? ಏಕೆಂದರೆ ಪಾಕಿಸ್ತಾನದ ‘ಐ.ಎಸ್.ಐ.’ ಬಾಂಗ್ಲಾದೇಶದ ಜನರ ಮನಸ್ಸಿನಲ್ಲಿ ಹಿಂದೂ ದ್ವೇಷವನ್ನು ಬಿತ್ತುತ್ತಿದೆ. ಒಬ್ಬ ಬಾಂಗ್ಲಾದೇಶಿ ನಾಗರಿಕನಾಗಿ ನಾವು ಇಂತಹ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಇದನ್ನು ನಡೆಯಲು ಬಿಡುವುದಿಲ್ಲ.

3. ಮಾನವ ಹಕ್ಕುಗಳ ಗುಂಪುಗಳು, ಅಂತರರಾಷ್ಟ್ರೀಯ ಮಾಧ್ಯಮಗಳು, ವಿವೇಕಿ ನಾಗರಿಕರು ಮತ್ತು ಪ್ರಪಂಚದಾದ್ಯಂತದ ವಿವಿಧ ದೇಶಗಳ ನೀತಿ ನಿರೂಪಕರು ಇದರ ವಿರುದ್ಧ ಧ್ವನಿ ಎತ್ತಬೇಕು ಮತ್ತು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ತರಬೇಕು ಎಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ.

4. ಗಾಯಬಾಂಧಾದಲ್ಲಿನ ಯೋಜನೆ ಮುಂದುವರಿಯಲೇಬೇಕು. ಈ ಯೋಜನೆಗೆ ಅಪಾಯವನ್ನು ಉಂಟುಮಾಡುವ ಇತರ ಹಲವು ಪಿತೂರಿಗಳ ಬಗ್ಗೆಯೂ ನನಗೆ ತಿಳಿದಿದೆ. ಚಿನ್ಮಯ್ ಕೃಷ್ಣ ದಾಸ್ ಅವರ ವಿಷಯದಲ್ಲಿ ಮಾಡಿದಂತೆಯೇ, ಈ ಯೋಜನೆಯ ಆಯೋಜಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವುದು ಇಸ್ಲಾಮಿಕ್ ಕಟ್ಟರವಾದಿಗಳ ಸಂಚಾಗಿದೆ. ಇದನ್ನು ನಡೆಯಲು ಬಿಡುವುದಿಲ್ಲ. ಚಿನ್ಮಯ್ ಕೃಷ್ಣ ದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಗಾಯಬಾಂಧಾದ ಯೋಜನೆಯನ್ನು ರಕ್ಷಿಸಿ ಅದನ್ನು ಮುಂದುವರಿಸಬೇಕು.

5. ಬಾಂಗ್ಲಾದೇಶ ಸರಕಾರವು ಪಾಕಿಸ್ತಾನಿ ‘ಐ.ಎಸ್.ಐ.’ ನ ದುಷ್ಟ ಉದ್ದೇಶಗಳ ಮುಂದೆ ತಲೆಬಾಗಬಾರದು. ಇದು ಕೇವಲ ಹಿಂದೂಗಳ ಹಕ್ಕುಗಳ ಪ್ರಶ್ನೆಯಲ್ಲ; ಬದಲಿಗೆ ‘ಬಾಂಗ್ಲಾದೇಶವು ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವ ರಾಷ್ಟ್ರವಾಗಿದೆ’ ಎಂಬುದನ್ನು ಸಾಬೀತುಪಡಿಸುವ ಪ್ರಶ್ನೆಯಾಗಿದೆ. ನಮಗೆ ಮತ್ತೊಂದು ಪಾಕಿಸ್ತಾನವಾಗುವುದು ಇಷ್ಟವಿಲ್ಲ.