‘ನ್ಯೂಸ್‌ ಕ್ಲಿಕ್’ ಮೇಲಿನ ಕ್ರಮ ರದ್ದುಗೊಳಿಸಿದ ದೆಹಲಿ ಉಚ್ಚ ನ್ಯಾಯಾಲಯ!

ನವ ದೆಹಲಿ – ಅಮೆರಿಕ ಮೂಲದ ಸಂಸ್ಥೆಯೊಂದರಿಂದ ಪಡೆದ ವಿದೇಶಿ ಹೂಡಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣದಲ್ಲಿ ‘ನ್ಯೂಸ್‌ ಕ್ಲಿಕ್’ ಸುದ್ದಿ ಜಾಲತಾಣ ಮತ್ತು ಅದರ ಸಂಸ್ಥಾಪಕ-ಸಂಪಾದಕ ಪ್ರಬೀರ ಪುರಕಾಯಸ್ಥ ಅವರ ವಿರುದ್ಧದ ಕ್ರಮವನ್ನು ದೆಹಲಿ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ​ಈ ಕುರಿತು ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು ಮಾತನಾಡಿ, ಪುರಕಾಯಸ್ಥ ಅವರ ಮೇಲೆ ಕೈಗೊಂಡ ಕ್ರಮ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೇಲೆ ಮಾಡಿದ ಅಧಿಕಾರದ ದುರುಪಯೋಗವಾಗಿದೆ. ಸರಕಾರದ ತನಿಖಾ ಸಂಸ್ಥೆಗಳು ಯಾವುದೇ ಗಟ್ಟಿ ಪುರಾವೆಗಳಿಲ್ಲದೆ ವ್ಯಾಪಕ ತನಿಖೆ ನಡೆಸುತ್ತಲೇ ಹೋದವು. ಪ್ರಥಮ ಮಾಹಿತಿ ವರದಿಯಲ್ಲಿರುವ (ಎಫ್‌ಐಆರ್) ಆರೋಪಗಳನ್ನು ನಿಜ ಎಂದು ಒಪ್ಪಿಕೊಂಡರೂ, ವಂಚನೆ ಮತ್ತು ನಂಬಿಕೆ ದ್ರೋಹದ ಅಪರಾಧವು ಕ್ರಿಮಿನಲ್ ಅಪರಾಧವಾಗುವುದಿಲ್ಲ. ಆದ್ದರಿಂದ ಪ್ರಥಮ ಮಾಹಿತಿ ವರದಿಯನ್ನು ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಿದೆ. ಯಾರೂ ವಂಚನೆಯ ಬಗ್ಗೆ ದೂರು ನೀಡದಿದ್ದರೂ ತನಿಖಾ ಸಂಸ್ಥೆಗಳು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದವು ಎಂದು ಹೇಳಿದರು.

ಏನಿದು ಪ್ರಕರಣ?

ವಿದೇಶಿ ಹೂಡಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ದೆಹಲಿ ಪೊಲೀಸರು ‘ನ್ಯೂಸ್‌ಕ್ಲಿಕ್’ ಸುದ್ದಿ ಜಾಲತಾಣದ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು. ​ತದನಂತರ ಜಾರಿ ನಿರ್ದೇಶನಾಲಯವು (‘ಇಡಿ’) ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ಯಡಿ ತನಿಖೆ ನಡೆಸಿ ವಿವಿಧೆಡೆ ದಾಳಿ ನಡೆಸಿತ್ತು. ‘ನ್ಯೂಸ್‌ ಕ್ಲಿಕ್’ ಸಂಸ್ಥೆಗೆ ಕೆಲವು ವರ್ಷಗಳಲ್ಲಿ ಭಾರಿ ಪ್ರಮಾಣದ ವಿದೇಶಿ ಹಣ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ​ಈ ಪ್ರಕರಣದಲ್ಲಿ ಸುದ್ದಿ ಜಾಲತಾಣದ ಮೇಲಿನ ವಿದೇಶಿ ಹೂಡಿಕೆ, ತಥಾಕಥಿತ ಆರ್ಥಿಕ ಅಕ್ರಮಗಳು ಹಾಗೂ ಚೀನಾ ಪರ ಪ್ರಚಾರದ ಆರೋಪಗಳಿಂದಾಗಿ ವಿವಾದ ಸೃಷ್ಟಿಯಾಗಿತ್ತು. ಈ ಸಂಬಂಧ 2023 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.