ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ : ಕನಿಷ್ಠ 30 ಜನ ಸಾವು

200 ಕ್ಕೂ ಹೆಚ್ಚು ಜನರಿಗೆ ಗಾಯ

ಮುಝಫರಾಬಾದ (ಜಮ್ಮು-ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳ ನಡುವಿನ ಸಂಘರ್ಷದಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ. ಈ ಭಾಗದ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ವಿರುದ್ಧದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (ಜೆ.ಎ.ಎ.ಸಿ) ಎಂಬ ಸಾಮಾಜಿಕ ಸಂಘಟನೆಯನ್ನು ನಿಷೇಧಿಸಲಾಗಿದೆ. ಇದರ ಹಿಂದೆಯೇ ಈ ಸಂಘರ್ಷವು ಭುಗಿಲೆದ್ದಿದೆ. ಜೂನ್ 5 ರ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಚಕಮಕಿಯಲ್ಲಿ ವ್ಯಾಪಾರಿಯೊಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದರು. ತದನಂತರ ಉಂಟಾದ ಉದ್ವಿಗ್ನತೆಯಿಂದಾಗಿ ಜೂನ್ 7 ರಂದು ರಾವಲಕೋಟ್ ನಗರದಲ್ಲಿ ಸಂಘರ್ಷ ಆರಂಭವಾಯಿತು.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೊಲೀಸರ ಗುಂಡಿನ ದಾಳಿಯಿಂದ ಮೃತಪಟ್ಟ ವ್ಯಾಪಾರಿಯ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಾಗ, ಅವರ ಬೆಂಬಲಕ್ಕಾಗಿ ಸಾಮಾಜಿಕ ಸಂಘಟನೆಯ ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು. ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದಾಗ ಕಾರ್ಯಕರ್ತರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಸ್ವಯಂಚಾಲಿತ ರೈಫಲ್‌ಗಳು, ಪೆಟ್ರೋಲ್ ಬಾಂಬ್‌ಗಳು ಮತ್ತು ಇತರ ಆಯುಧಗಳನ್ನು ಬಳಸಿದರು. ಇದರಲ್ಲಿ 6 ಪ್ರತಿಭಟನಾಕಾರರು ಹತರಾಗಿದ್ದಾರೆ.

ಆದಾಗ್ಯೂ, ಸ್ಥಳೀಯ ನಿವಾಸಿಗಳು ಮತ್ತು ‘ಜೆಎಎಸಿ’ ನ ಬೆಂಬಲಿಗರು ಅಧಿಕೃತ ಮಾಹಿತಿಯನ್ನು ಆಕ್ಷೇಪಿಸಿದ್ದು, ಇದರಲ್ಲಿ ಬಲಿಯಾದ ನಾಗರಿಕರ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ದಾವೆ ಮಾಡಿದೆ. ‘ಜೆಎಎಸಿ’ ಅನ್ನು ಭಯೋತ್ಪಾದಕ ಸಂಘಟನೆ ಎಂದು ಬಿಂಬಿಸುವುದು ದಬ್ಬಾಳಿಕೆಯ ಪರಮಾವಧಿ ಎಂದು ಅದರ ಸದಸ್ಯರು ಹೇಳುತ್ತಿದ್ದಾರೆ.

ಮತ್ತೊಂದೆಡೆ, ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು ಭಯೋತ್ಪಾದನಾ ನಿರೋಧಕ ಕಾಯ್ದೆಯಡಿ ‘ಜೆಎಎಸಿ’ ಅನ್ನು ನಿಷೇಧಿಸಿದ ಪ್ರಾದೇಶಿಕ ಸರಕಾರದ ನಿರ್ಧಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಿಂಸಾಚಾರದ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವಂತೆ ಬ್ರಿಟನ್ ಸರಕಾರಕ್ಕೆ 30 ಬ್ರಿಟಿಷ್ ಸಂಸದರ ಆಗ್ರಹ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯನ್ನು ವಿರೋಧಿಸಿ ಜೂನ್ 9 ರಂದು ಬ್ರಿಟನ್‌ ನ ಬ್ರಾಡ್‌ ಫೋರ್ಡ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯ ಹೊರಗೆ ಕಾಶ್ಮೀರಿ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ‘ಪಾಕಿಸ್ತಾನದಿಂದ ಆಗುತ್ತಿರುವ ಮಾನವ ಹಕ್ಕುಗಳ ಕ್ರೂರ ಉಲ್ಲಂಘನೆಯಲ್ಲಿ ಹಸ್ತಕ್ಷೇಪ ಮಾಡಬೇಕು’ ಎಂದು ಆಗ್ರಹಿಸಿ ಕನಿಷ್ಠ 30 ಬ್ರಿಟಿಷ್ ಸಂಸದರು ಬ್ರಿಟನ್ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿನ ಮುಸ್ಲಿಂ ಜನತೆಯ ಮೇಲೆ ಭಾರತೀಯ ಸೈನ್ಯ ಮತ್ತು ಸರಕಾರವು ಅನ್ಯಾಯ ಮಾಡುತ್ತದೆ ಎಂದು ಕೂಗಾಡುವ ಭಾರತದಲ್ಲಿನ ಕೆಲವು ದೇಶದ್ರೋಹಿಗಳಿಗೆ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಈ ಹಿಂಸಾಚಾರದ ಕುರಿತು ಉತ್ತರ ಕೇಳಿ! ಅವರು ಇದಕ್ಕೆ ಉತ್ತರಿಸದಿದ್ದರೆ, ಅವರನ್ನು ದೇಶದ್ರೋಹಿಗಳೆಂದು ಘೋಷಿಸಿ ಕಾರಾಗೃಹಕ್ಕೆ ತಳ್ಳಿರಿ!