ಭಯೋತ್ಪಾದನೆಗೆ ಸಹಾಯ ಮಾಡಿದ್ದಕ್ಕಾಗಿ ಪಾಕಿಸ್ತಾನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ !

ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದಿಂದ ಎಚ್ಚರಿಕೆ !

ನ್ಯೂಯಾರ್ಕ್ (ಅಮೆರಿಕ) – ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಮುಂದುವರಿಸಿದರೆ ಅದರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತವು ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯಲ್ಲಿ ಎಚ್ಚರಿಕೆ ನೀಡಿದೆ. ಇದೇ ಸಮಯದಲ್ಲಿ, ಭಾರತವು ಭದ್ರತಾ ಮಂಡಳಿಯಲ್ಲಿ ವ್ಯಾಪಕ ಸುಧಾರಣೆಗಳನ್ನು ತರಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಬಲವಾಗಿ ಮಂಡಿಸಿದೆ. ಪ್ರಪಂಚ 2026ಕ್ಕೆ ತಲುಪಿದ್ದರೂ ಕೂಡ, ಭದ್ರತಾ ಮಂಡಳಿ ಇನ್ನು 1945ರ ಕಾಲದ ಚಿಂತನೆ ಮತ್ತು ಚೌಕಟ್ಟಿನಲ್ಲಿಯೇ ಸಿಲುಕಿಕೊಂಡಿದೆ ಎಂದು ಭಾರತ ಹೇಳಿದೆ.

ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪಿ. ಹರೀಶ್ ಅವರು ಈ ಬಗ್ಗೆ ಮಾತನಾಡಿ, ಗಡಿಯಾಚೆಗಿನ ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪೂರ್ಣ ಅಧಿಕಾರ ಭಾರತಕ್ಕಿದೆ ಎಂದು ಹೇಳಿದರು. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕು ಎಂದು ಹರೀಶ್ ಎಚ್ಚರಿಸಿದರು. ಪಾಕಿಸ್ತಾನದ ಖಾಯಂ ಪ್ರತಿನಿಧಿ ಆಸಿಮ್ ಇಫ್ತಿಕಾರ್ ಅಹ್ಮದ್ ಅವರು ತಮ್ಮ ಭಾಷಣದಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಟೀಕೆ ಮಾಡಿದ್ದಕ್ಕೆ ಪ್ರತ್ಯುತ್ತರವಾಗಿ ಭಾರತ ಈ ಹೇಳಿಕೆ ನೀಡಿದೆ. ‘ಭದ್ರತಾ ಮಂಡಳಿಯ ನಿರ್ಣಯಗಳ ಹೊರತಾಗಿಯೂ ಜಮ್ಮು-ಕಾಶ್ಮೀರದ ಸಮಸ್ಯೆ ಇನ್ನೂ ಬಗೆಹರಿದಿಲ್ಲ’ ಎಂದು ಪಾಕಿಸ್ತಾನ ವಾದಿಸಿತ್ತು.

ಪಾಕಿಸ್ತಾನವು ಸಂಯುಕ್ತ ರಾಷ್ಟ್ರ ಸಂಸ್ಥೆಯ ಷರತ್ತುಗಳನ್ನು ಎಂದಿಗೂ ಪಾಲಿಸಿಲ್ಲ !

1948 ರಲ್ಲಿ ಅಂಗೀಕರಿಸಲ್ಪಟ್ಟ ಭದ್ರತಾ ಮಂಡಳಿಯ 47ನೇ ನಿರ್ಣಯದ ಪ್ರಕಾರ, ಪಾಕಿಸ್ತಾನವು ತನ್ನ ಸೈನಿಕರನ್ನು ಮತ್ತು ಬುಡಕಟ್ಟು ಜನಾಂಗದ ಹೋರಾಟಗಾರರನ್ನು ಕಾಶ್ಮೀರದಿಂದ ಹಿಂತೆಗೆದುಕೊಳ್ಳಬೇಕಾಗಿತ್ತು; ಆದರೆ ಅವರು ಈ ಷರತ್ತನ್ನು ಎಂದಿಗೂ ಪಾಲಿಸಲಿಲ್ಲ ಎಂಬುದನ್ನು ಭಾರತವು ಪಾಕಿಸ್ತಾನಕ್ಕೆ ನೆನಪಿಸಿಕೊಟ್ಟಿದೆ. ಪಾಕಿಸ್ತಾನವು ನಿರಂತರವಾಗಿ ಭಯೋತ್ಪಾದನೆ, ಕಟ್ಟರವಾದ ಮತ್ತು ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಹಾಗೂ ಸಂಯುಕ್ತ ರಾಷ್ಟ್ರ ಸಂಸ್ಥೆಯನ್ನು ಗೌರವಿಸುವುದಾಗಿ ಅದು ಹೇಳಿಕೊಳ್ಳುವುದು ಕೇವಲ ಪೊಳ್ಳು ವಾದವಾಗಿದೆ. ಪಾಕಿಸ್ತಾನವು ಹಲವು ಬಾರಿ ಭಾರತದ ಮೇಲೆ ಯುದ್ಧ ಹೇರಿದೆ, ಅಪ್ರಚೋದಿತ ದಾಳಿಗಳನ್ನು ಮಾಡಿದೆ ಮತ್ತು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಾ ಬಂದಿದೆ ಎಂದು ಭಾರತ ಹೇಳಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನಕ್ಕೆ ಮಾತುಗಳ ಭಾಷೆ ಅರ್ಥವಾಗುವುದಿಲ್ಲ, ಶಸ್ತ್ರಗಳ ಭಾಷೆಯೇ ಅರ್ಥವಾಗುವುದರಿಂದ, ಭಾರತವು ಪಾಕ್ ಗೆ ಶಾಶ್ವತವಾಗಿ ಬುದ್ಧಿ ಕಲಿಸುವಂತಹ ಕ್ರಮ ಕೈಗೊಳ್ಳಬೇಕು. ಇದರಿಂದ ಪಾಕಿಸ್ತಾನ ಪದೇ-ಪದೇ ಕುಚೇಷ್ಟೆ ಮಾಡುವುದಿಲ್ಲ !