‘ಕಾಕ್ರೋಚ್ ಜನತಾ ಪಕ್ಷ’ದ ಎಕ್ಸ್ ಖಾತೆಗೆ ಭಾರತದಲ್ಲಿ ನಿಷೇಧ!

ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆ ವಿರೋಧಿಸಲು ಅಭಿಯಾನ ಆರಂಭ

ನವದೆಹಲಿ – ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ಕೆಲವು ದಿನಗಳ ಹಿಂದೆ ನಿರುದ್ಯೋಗಿ ಯುವಕರನ್ನು ‘ಕಾಕ್ರೋಚ್’ (ಜಿರಳೆ) ಎಂದು ಕರೆದಿದ್ದಾರೆಂಬುದನ್ನು ಕೆಲವರು ಬಂಡವಾಳ ಮಾಡಿಕೊಂಡು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಹೆಚ್ಚುತ್ತಿರುವ ವಿರೋಧವನ್ನು ನೋಡಿ, ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟೀಕರಣ ನೀಡಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು. ಆದಾಗ್ಯೂ ಅವರ ಹೇಳಿಕೆಯನ್ನು ಖಂಡಿಸಲು ವಿದೇಶದಲ್ಲಿ ವಾಸಿಸುವ ಅಭಿಜೀತ್ ದೀಪಕ್ ಎಂಬ ವ್ಯಕ್ತಿ ಎಕ್ಸ್ ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನ ಖಾತೆಯನ್ನು ತೆರೆದಿದ್ದನು. ಈ ಮೂಲಕ ಭಾಜಪ ಸರಕಾರ, ಭಾರತೀಯ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಮುಂತಾದವುಗಳ ಮೇಲೆ ವ್ಯಂಗ್ಯಭರಿತ ಟೀಕೆ ಮಾಡಿದ್ದನು. ಕೇವಲ ೬ ದಿನಗಳಲ್ಲಿ ಈ ಖಾತೆಗೆ ೧ ಲಕ್ಷದ ೯೩ ಸಾವಿರ ಅನುಯಾಯಿಗಳು ಸಿಕ್ಕಿದ್ದರು. ಈಗ ಈ ಖಾತೆಯನ್ನು ನಿಷೇಧಿಸಲಾಗಿದೆ.

‘ಎಕ್ಸ್’ ಸಂಸ್ಥೆಯು ಈ ಕ್ರಮದ ಕುರಿತು ಪ್ರತಿಕ್ರಿಯಿಸಿ, ಭಾರತದ ಸ್ಥಳೀಯ ನಿಯಮಗಳು, ನ್ಯಾಯಾಲಯದ ಆದೇಶ ಮತ್ತು ಕಾನೂನುಬದ್ಧ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ‘ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ, ಆಲಸಿ’ ಎಂಬುದು ‘ಕಾಕ್ರೋಚ್ ಜನತಾ ಪಕ್ಷ’ದ ಧ್ಯೇಯ ವಾಕ್ಯವಾಗಿತ್ತು ಮತ್ತು ಹೊಸ ಲಾಂಛನವನ್ನು (ಲೋಗೋ) ಸಹ ಸಿದ್ಧಪಡಿಸಲಾಗಿತ್ತು.

ಸಂಪಾದಕೀಯ ನಿಲುವು

ಭಾರತೀಯ ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಇಂತಹ ಖಾತೆಗಳನ್ನು ಕೇವಲ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ನಿಷೇಧಿಸಬೇಕು. ಇದಕ್ಕಾಗಿ ಭಾರತದ ವಿದೇಶಾಂಗ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು 'ಎಕ್ಸ್' ಮೇಲೆ ಒತ್ತಡ ಹೇರಬೇಕು!