ಪಾಕಿಸ್ತಾನದ ವಿರುದ್ಧ ದುಸ್ಸಾಹಸಕ್ಕೆ ಕೈಹಾಕಿದರೆ ಭಯಂಕರ ಪರಿಣಾಮ ಎದುರಿಸಬೇಕಾದೀತು!

ಭಾರತಕ್ಕೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬೆದರಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – “ನಮ್ಮ ಶತ್ರುಗಳು ಇದನ್ನು ನೆನಪಿಟ್ಟುಕೊಳ್ಳಬೇಕು – ಭವಿಷ್ಯದಲ್ಲಿ ಪಾಕಿಸ್ತಾನದ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಪ್ರಯತ್ನಿಸಿದರೆ, ಯುದ್ಧದ ಪ್ರಭಾವವು ಸೀಮಿತವಾಗಿರುವುದಿಲ್ಲ, ಅತ್ಯಂತ ವ್ಯಾಪಕ, ಅಪಾಯಕಾರಿ, ದೀರ್ಘಕಾಲೀನ ಮತ್ತು ನೋವಿನಿಂದ ಕೂಡಿರುತ್ತದೆ,” ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಎಚ್ಚರಿಕೆ ನೀಡಿದ್ದಾರೆ. ರಾವಲ್ಪಿಂಡಿಯ ಸೇನಾ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹಮದ್ ಬಾಬರ್ ಸಿಧು ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನವೀದ್ ಅಶ್ರಫ್ ಉಪಸ್ಥಿತರಿದ್ದರು.

‘ಆಪರೇಷನ್ ಸಿಂದೂರ್’ನಲ್ಲಿ ಭಾರತಕ್ಕೆ ಸೋಲಾಗಿದೆ !

ಜನರಲ್ ಮುನೀರ್ ಅವರ ದಾವೆ ಏನೆಂದರೆ “ಕಳೆದ ವರ್ಷ ಮೇ 6, 7 ಮತ್ತು 10 ರ ಮಧ್ಯರಾತ್ರಿ ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಗಡಿಗಳನ್ನು ಉಲ್ಲಂಘಿಸಿ ಶತ್ರುಗಳು ನಮ್ಮ ಸಂಕಲ್ಪವನ್ನು ಪರೀಕ್ಷಿಸಲು ವಿಫಲ ಪ್ರಯತ್ನ ನಡೆಸಿದ್ದರು. ಇದಕ್ಕೆ ಸಂಪೂರ್ಣ ರಾಷ್ಟ್ರೀಯ ಏಕತೆ ಮತ್ತು ಮಿಲಿಟರಿ ಬಲದೊಂದಿಗೆ ಉತ್ತರಿಸಲಾಯಿತು. ಉಭಯ ದೇಶಗಳ ನಡುವಿನ ಈ ಸಂಘರ್ಷ ಕೇವಲ ಎರಡು ದೇಶಗಳು ಅಥವಾ ಸೈನ್ಯಗಳ ನಡುವಿನ ಸಾಂಪ್ರದಾಯಿಕ ಯುದ್ಧವಾಗಿರಲಿಲ್ಲ, ಅದು ಎರಡು ಸಿದ್ಧಾಂತಗಳ ನಡುವಿನ ನಿರ್ಣಾಯಕ ಯುದ್ಧವಾಗಿತ್ತು. ಅಲ್ಲಾನ ಕೃಪೆಯಿಂದ ಸತ್ಯಕ್ಕೆ ಜಯವಾಯಿತು ಮತ್ತು ಅಸತ್ಯಕ್ಕೆ ಸೋಲಾಯಿತು.” ಮುನೀರ್ ಮುಂದುವರಿದು, “2001, 2008, 2016 ಮತ್ತು 2019 ರ ‘ಫಾಲ್ಸ್ ಫ್ಲ್ಯಾಗ್ ಆಪರೇಷನ್‌ಗಳು’ ಇದಕ್ಕೆ ಸಾಕ್ಷಿಯಾಗಿದೆ. ಈ ಹಿಂದೆಯೂ ಭಾರತವು ಪಾಕಿಸ್ತಾನದ ಮೇಲೆ ಕಾನೂನುಬಾಹಿರ ಯುದ್ಧವನ್ನು ಹೇರಲು ಮತ್ತು ಆರೋಪಗಳು, ಉತ್ಪ್ರೇಕ್ಷೆಗಳು, ಯುದ್ಧೋನ್ಮಾದದ ಮೂಲಕ ತನ್ನ ಸಂಕುಚಿತ ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳನ್ನು ಸಾಧಿಸಲು ವಿಫಲ ಪ್ರಯತ್ನಗಳನ್ನು ಮಾಡಿದೆ. ಪಾಕಿಸ್ತಾನದ ಶತ್ರುಗಳು ಭವಿಷ್ಯದಲ್ಲಿ ಇಂತಹ ಯಾವುದೇ ಕ್ರಮ ಕೈಗೊಂಡರೆ, ಯುದ್ಧದ ಪರಿಣಾಮಗಳು ಸೀಮಿತವಾಗಿರುವುದಿಲ್ಲ,” ಎಂದು ಅವರು ಬೆದರಿಕೆ ಹಾಕಿದ್ದಾರೆ.

ಸಂಪಾದಕೀಯ ನಿಲುವು

'ಆಪರೇಷನ್ ಸಿಂದೂರ್' ಸಮಯದಲ್ಲಿ ಪಾಕಿಸ್ತಾನ ಅನುಭವಿಸಿದ ಸ್ಥಿತಿಯನ್ನು ನೋಡಿದರೆ, ಕೇವಲ ಪಾಕಿಸ್ತಾನದ ಜನತೆಯನ್ನು ದಿಕ್ಕು ತಪ್ಪಿಸಲು ಮತ್ತು ಅವರನ್ನು ಕತ್ತಲಲ್ಲಿಡಲು ಮುನೀರ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ.