‘ಲಿಪುಲೇಖ್ ನಮ್ಮ ಪ್ರದೇಶ!’ – Nepal’s Claim

ಲಿಪುಲೇಖ್ ಮೂಲಕ ಕೈಲಾಸ ಮಾನಸಸರೋವರ ಯಾತ್ರೆ ನಡೆಸಲು ನೇಪಾಳದ ಆಕ್ಷೇಪ

ಕಾಠ್ಮಂಡು (ನೇಪಾಳ) – ಭಾರತ ಸರಕಾರವು ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಲಿಪುಲೇಖ್ ಪಾಸ್ (ಖಿಂಡ್) ಮೂಲಕ ಕೈಲಾಸ ಮಾನಸಸರೋವರ ಯಾತ್ರೆಯನ್ನು ಘೋಷಿಸಿದ ನಂತರ ನೇಪಾಳ ಸರ್ಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಲಿಪುಲೇಖ್ ನೇಪಾಳದ ಭಾಗವೆಂದು ನೇಪಾಳ ಮತ್ತೊಮ್ಮೆ ಹೇಳಿದೆ. ಈ ಯಾತ್ರೆಗಾಗಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಸಹಕಾರದ ಬಗ್ಗೆಯೂ ನೇಪಾಳವು ಎರಡೂ ದೇಶಗಳಿಗೆ ತನ್ನ ವಿರೋಧವನ್ನು ದಾಖಲಿಸಿದೆ. ಈ ಯಾತ್ರೆಯು ಈ ವರ್ಷದ ಜೂನ್‌ನಿಂದ ಆಗಸ್ಟ್ ಅವಧಿಯಲ್ಲಿ ನಡೆಯಲಿದೆ. ಭಾರತವು ಈ ಮಾರ್ಗದ ಮೂಲಕ ಚೀನಾದೊಂದಿಗೆ ವ್ಯಾಪಾರ ಆರಂಭಿಸುವ ನಿರ್ಧಾರಕ್ಕೂ ನೇಪಾಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಯಾವುದೇ ವಿದೇಶಿ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ! ’

ನೇಪಾಳದ ವಿದೇಶಾಂಗ ಸಚಿವಾಲಯವು, 1816ರ ಸುಗೌಲಿ ಒಪ್ಪಂದದ ಪ್ರಕಾರ ಮಹಾಕಾಳಿ ನದಿಯ ಪೂರ್ವದಲ್ಲಿರುವ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳು ನೇಪಾಳದ ಅವಿಭಾಜ್ಯ ಅಂಗಗಳಾಗಿವೆ ಎಂದು ಹೇಳಿದೆ. “ಈ ಪ್ರದೇಶಗಳು ನಮ್ಮದಾಗಿರುವುದರಿಂದ ಯಾವುದೇ ವಿದೇಶಿ ರಾಷ್ಟ್ರದ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ. ಐತಿಹಾಸಿಕ ದಾಖಲೆಗಳು, ನಕ್ಷೆಗಳು ಮತ್ತು ಪುರಾವೆಗಳ ಆಧಾರದ ಮೇಲೆ ಭಾರತದೊಂದಿಗಿನ ಸ್ನೇಹ ಸಂಬಂಧವನ್ನು ಹಾಳುಮಾಡದೆ, ಈ ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಲು ನೇಪಾಳ ಬದ್ಧವಾಗಿದೆ” ಎಂದು ತಿಳಿಸಿದೆ.
ನೇಪಾಳ ಸರಕಾರವು ಈ ಹಿಂದೆಯೂ ಕೂಡ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಅಥವಾ ತೀರ್ಥಯಾತ್ರೆ ಮಾಡದಂತೆ ಭಾರತಕ್ಕೆ ವಿನಂತಿಸಿತ್ತು.

ನೇಪಾಳದ ವಾದ ನ್ಯಾಯಸಮ್ಮತವಲ್ಲ! – ಭಾರತದ ಪ್ರತ್ಯುತ್ತರ

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು ಸರಕಾರದ ಅಧಿಕೃತ ನಿಲುವನ್ನು ಮಂಡಿಸುತ್ತಾ, “ಲಿಪುಲೇಖ್ ಪಾಸ್ ಮಾರ್ಗವು ಹೊಸದೇನಲ್ಲ. 1954 ರಿಂದಲೂ ಈ ಮಾರ್ಗವನ್ನು ಕೈಲಾಸ ಮಾನಸ ಸರೋವರ ಯಾತ್ರೆಯ ಮುಖ್ಯ ಮಾರ್ಗವಾಗಿ ಬಳಸಲಾಗುತ್ತಿದೆ. ಕಳೆದ ಹಲವು ದಶಕಗಳಿಂದ ಇದೇ ಮಾರ್ಗದ ಮೂಲಕ ಯಾತ್ರೆ ನಡೆಯುತ್ತಿದೆ” ಎಂದು ಹೇಳಿದರು. ಈ ವಿಷಯದಲ್ಲಿ ಭಾರತದ ನಿಲುವು ಯಾವಾಗಲೂ ಸ್ಪಷ್ಟ ಮತ್ತು ಸುಸಂಗತವಾಗಿದೆ. ಆದ್ದರಿಂದ ನೇಪಾಳದ ವಾದವು ನ್ಯಾಯಸಮ್ಮತವಲ್ಲ. ಇದು ಯಾವುದೇ ಐತಿಹಾಸಿಕ ಸತ್ಯ ಅಥವಾ ಪುರಾವೆಗಳ ಮೇಲೆ ಆಧಾರಿತವಾಗಿಲ್ಲ. ಪ್ರಾದೇಶಿಕ ಹಕ್ಕುಗಳ ಮೇಲೆ ಈ ರೀತಿಯ ‘ಏಕಪಕ್ಷೀಯ ಕೃತಕ ವಿಸ್ತರಣೆ’ಯನ್ನು ಭಾರತ ಯಾವುದೇ ಸಂದರ್ಭದಲ್ಲೂ ಒಪ್ಪುವುದಿಲ್ಲ. ಬಾಕಿ ಇರುವ ಗಡಿ ಸಮಸ್ಯೆಗಳ ಕುರಿತು ನೇಪಾಳದೊಂದಿಗೆ ರಚನಾತ್ಮಕ ಚರ್ಚೆ ಮತ್ತು ರಾಜತಾಂತ್ರಿಕ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಭಾರತ ಯಾವಾಗಲೂ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ನೇಪಾಳದಲ್ಲಿ ಯಾವ ಸರಕಾರ ಬಂದರೂ ಅದು ಭಾರತದ ವಿರುದ್ಧವೇ ನಡೆದುಕೊಳ್ಳಲಿದೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ!