ಸಂತ್ರಸ್ತೆಗೆ ಪ್ರತಿ ತಿಂಗಳು ೭೫ ಸಾವಿರ ರೂಪಾಯಿ ನೀಡುವಂತೆ ನ್ಯಾಯಾಲಯದ ಆದೇಶ

ಭಾಜಪ ನಾಯಕನ ಮಗನಿಂದ ಶಾಲೆಯ ಗೆಳತಿಗೆ ಮದುವೆಯ ಆಮಿಷವೊಡ್ಡಿ ಲೈಂಗಿಕ ಶೋಷಣೆ ನಡೆಸಿದ ಪ್ರಕರಣ

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ಮಧ್ಯಂತರ ಆದೇಶವೊಂದರಲ್ಲಿ ಭಾಜಪ ನಾಯಕನ ಮಗನ ವಿರುದ್ಧ ದಾಖಲಾಗಿರುವ ಮೊಕದ್ದಮೆ ಮತ್ತು ಕೆಳ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಈ ಯುವಕನ ಮೇಲೆ ತನ್ನ ಶಾಲಾ ದಿನಗಳ ಹಳೆಯ ಗೆಳತಿಗೆ ಮದುವೆಯ ಆಮಿಷವೊಡ್ಡಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ನ್ಯಾಯಾಲಯವು ತಡೆಯಾಜ್ಞೆ ನೀಡುವಾಗ, ಆರೋಪಿಯು ಸಂತ್ರಸ್ತ ಮಹಿಳೆ ಮತ್ತು ಅವರ ಸಂಬಂಧದಿಂದ ಜನಿಸಿದ ಮಗುವಿನ ಕಲ್ಯಾಣಕ್ಕಾಗಿ ಪ್ರತಿ ತಿಂಗಳು ೭೫ ಸಾವಿರ ರೂಪಾಯಿ ಜೀವನಾಂಶವನ್ನು ನೀಡುವಂತೆ ಆದೇಶಿಸಿದೆ.

೧. ಅರ್ಜಿದಾರನು ಆ ಮಗುವಿನ ಜೈವಿಕ ತಂದೆಯಾಗಿದ್ದಾನೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗಿದೆ ಮತ್ತು ಪರೀಕ್ಷೆಯಲ್ಲೂ ಅದು ಸಾಬೀತಾಗಿದೆ ಎಂದು ನ್ಯಾಯಾಲಯವು ಹೇಳಿದೆ.

೨. ೨೨ ವರ್ಷದ ಆರೋಪಿಯು ಮೊಕದ್ದಮೆ ಮತ್ತು ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ಆರೋಪಿಯು ಮದುವೆಯಾಗಲು ಮತ್ತು ಮಗುವಿನ ಜವಾಬ್ದಾರಿಯನ್ನು ಹೊರಲು ನಿರಾಕರಿಸಿದ ನಂತರ ಸಂತ್ರಸ್ತೆಯು ೨೦೨೫ ರಲ್ಲಿ ದೂರು ದಾಖಲಿಸಿದ್ದರು.