ಮಣಿಪುರದಲ್ಲಿ ಪ್ರತ್ಯೇಕತಾವಾದಿಗಳಿಂದ ಇಬ್ಬರ ಹತ್ಯೆ

ಇಂಫಾಲ (ಮಣಿಪುರ) – ಇಲ್ಲಿನ ಉಖರುಲ್ ಜಿಲ್ಲೆಯಲ್ಲಿ ಏಪ್ರಿಲ್ ೧೮ ರಂದು ಮಧ್ಯಾಹ್ನ ೨:೩೦ ರ ಸುಮಾರಿಗೆ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರನ್ನು ಎಸ್.ಡಬ್ಲ್ಯೂ. ಚಿನಾವೋಷಾಂಗ್ ಮತ್ತು ಯರುಯಿಂಗಮ್ ವಾಶುಮ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಇಂಫಾಲದಿಂದ ಉಖರುಲ್‌ಗೆ ಹೋಗುತ್ತಿದ್ದಾಗ ಪ್ರತ್ಯೇಕತಾವಾದಿಗಳು ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಈ ಘಟನೆಯಲ್ಲಿ ಕುಕಿ ಸಮುದಾಯದ ಯಾವುದೇ ಕೈವಾಡವಿಲ್ಲ ಎಂದು ‘ಕುಕಿ ಜೋ ಕೌನ್ಸಿಲ್’ ಹೇಳಿದ್ದರೆ, ‘ತಂಗ್ಖುಲ್ ನಾಗಾ ಲಾಂಗ್’ನ ಕಾರ್ಯಕಾರಿ ಸಮಿತಿಯು ಈ ಘಟನೆಯನ್ನು ಖಂಡಿಸಿ, ‘ಈ ದಾಳಿಯನ್ನು ಕುಕಿ ಸಮುದಾಯವೇ ಮಾಡಿದೆ’ ಎಂದು ಆರೋಪಿಸಿದೆ.

ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಭದ್ರತಾ ಪಡೆಗಳು ದಾಳಿಕೋರರಿಗಾಗಿ ಶೋಧ ನಡೆಸುತ್ತಿವೆ. ಈ ಘಟನೆ ನಡೆಯುವ ಒಂದು ದಿನ ಮುಂಚೆಯೇ ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಅವರು ಉಖರುಲ್‌ಗೆ ಭೇಟಿ ನೀಡಿದ್ದರು ಮತ್ತು ಕುಕಿ ಮತ್ತು ನಾಗಾ ಸಮುದಾಯಗಳಿಗೆ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದರು.