ನಿರ್ದಿಷ್ಟ ಅಂಗಡಿಗಳಿಂದಲೇ ಶೈಕ್ಷಣಿಕ ಸಾಮಗ್ರಿ ಖರೀದಿಸುವಂತೆ ಒತ್ತಾಯ; ಶಿಕ್ಷಣ ಇಲಾಖೆಯಿಂದ ತಡೆ!

  • ಶೈಕ್ಷಣಿಕ ಸಾಮಗ್ರಿ ಖರೀದಿ ನೆಪದಲ್ಲಿ ಪೋಷಕರ ಲೂಟಿ ತಡೆದ ‘ಸುರಾಜ್ಯ ಅಭಿಯಾನ’ಕ್ಕೆ ಭಾರಿ ಯಶಸ್ಸು!

  • ದೂರು ನಿವಾರಣಾ ವ್ಯವಸ್ಥೆ ಆರಂಭಿಸಲು ಆದೇಶ!

ಮುಂಬಯಿ – ಖಾಸಗಿ ಶಾಲೆಗಳು ಶೈಕ್ಷಣಿಕ ಸಾಮಗ್ರಿಗಳ ನೆಪದಲ್ಲಿ ಪೋಷಕರನ್ನು ಆರ್ಥಿಕವಾಗಿ ಲೂಟಿ ಮಾಡುವುದನ್ನು ತಡೆಯಲು ‘ಸುರಾಜ್ಯ ಅಭಿಯಾನ’ ನಡೆಸಿದ ಹೋರಾಟಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಶಾಲೆಗಳು ‘ನಿರ್ದಿಷ್ಟ ಅಂಗಡಿಗಳಿಂದಲೇ ಸಮವಸ್ತ್ರ, ನೋಟ್‌ ಬುಕ್ ಅಥವಾ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸುವಂತೆ ಒತ್ತಾಯಿಸಬಾರದು’ ಎಂದು ಶಿಕ್ಷಣ ನಿರ್ದೇಶನಾಲಯವು ಏಪ್ರಿಲ್ 15 ರಂದು ಸುತ್ತೋಲೆ ಹೊರಡಿಸಿದೆ. ಈ ಆದೇಶದ ಪ್ರಮುಖ ವೈಶಿಷ್ಟ್ಯವೆಂದರೆ, ಕೇವಲ ನಿಯಮಗಳನ್ನು ಮಾತ್ರ ಹೇಳದೆ ‘ಸಮರ್ಥ ದೂರು ನಿವಾರಣಾ ವ್ಯವಸ್ಥೆ’ಯನ್ನು ಸಕ್ರಿಯಗೊಳಿಸಲು ಕೂಡ ಆದೇಶ ನೀಡಲಾಗಿದೆ.

ಸರಕಾರದ ಈ ನಿರ್ಧಾರವನ್ನು ‘ಸುರಾಜ್ಯ ಅಭಿಯಾನ’ ಸ್ವಾಗತಿಸಿದೆ. ಇಂತಹದ್ದೇ ಪಾರದರ್ಶಕ ವ್ಯವಸ್ಥೆಯನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಶಿಕ್ಷಣ ಮಂಡಳಿಗಳಲ್ಲಿ ಜಾರಿಗೆ ತರಬೇಕೆಂದು ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಸುರಾಜ್ಯ ಅಭಿಯಾನದ ಮಹಾರಾಷ್ಟ್ರ ರಾಜ್ಯ ಸಂಯೋಜಕ ಶ್ರೀ ಅಭಿಷೇಕ ಮುರುಕುಟೆ ತಿಳಿಸಿದ್ದಾರೆ.

ಸುತ್ತೋಲೆಯಲ್ಲಿರುವ ಕಡ್ಡಾಯ ಅಂಶಗಳು!

ರಾಜ್ಯ ಶಿಕ್ಷಣ ನಿರ್ದೇಶನಾಲಯವು ಸುತ್ತೋಲೆಯ ಮೂಲಕ, ‘ಸಂಬಂಧಿತ ವ್ಯಾಪ್ತಿಯ ಎಲ್ಲಾ ಶಾಲೆಗಳು ಶೈಕ್ಷಣಿಕ ವರ್ಷ 2026-27 ರಿಂದ ಸಮವಸ್ತ್ರ ಮತ್ತು ಇತರ ಶೈಕ್ಷಣಿಕ ಸಾಮಗ್ರಿಗಳನ್ನು ನಿರ್ದಿಷ್ಟ ಅಂಗಡಿಗಳಿಂದ ಅಥವಾ ಶಾಲೆಯಿಂದಲೇ ಖರೀದಿಸುವಂತೆ ಒತ್ತಾಯಿಸುವುದಿಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲು ತಕ್ಷಣ ಕ್ರಮ ವಹಿಸಬೇಕು’ ಎಂದು ಆದೇಶಿಸಿದೆ.

1. ಈ ಸಂಬಂಧ ಬರುವ ದೂರುಗಳಿಗಾಗಿ ಕಚೇರಿಯ ಇ-ಮೇಲ್ ವಿಳಾಸವನ್ನು ಪ್ರಕಟಿಸಬೇಕು, ಅಲ್ಲದೇ ಈ ಸಂಬಂಧಿಸಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಬೇಕು.

2. ತಮ್ಮ ವ್ಯಾಪ್ತಿಯ ಎಲ್ಲಾ ಮಾಧ್ಯಮದ ಶಾಲೆಗಳಿಗೆ ಈ ಸುತ್ತೋಲೆಯ ಮಾಹಿತಿ ತಲುಪುವ ದೃಷ್ಟಿಯಿಂದ ವ್ಯಾಪಕ ಪ್ರಚಾರ ಮಾಡಬೇಕು.

3. ಈ ಬಗ್ಗೆ ದೂರುಗಳು ಬಂದರೆ ಶಿಕ್ಷಣಾಧಿಕಾರಿ ಅಥವಾ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಿ, ದೂರಿನಲ್ಲಿ ಸತ್ಯಾಂಶ ಕಂಡುಬಂದಲ್ಲಿ ಸಂಬಂಧಪಟ್ಟ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.

ಪೋಷಕರಿಗೆ ಸುರಾಜ್ಯ ಅಭಿಯಾನದ ಕರೆ!

‘ಕೇವಲ ನಿಯಮಗಳಿದ್ದರೆ ಸಾಲದು, ಅವುಗಳ ಪರಿಣಾಮಕಾರಿ ಪಾಲನೆಯೇ ನಿಜವಾದ ಸುಶಾಸನ’: ಸುರಾಜ್ಯ ಅಭಿಯಾನದ ಮಹಾರಾಷ್ಟ್ರ ರಾಜ್ಯ ಸಂಯೋಜಕ ಶ್ರೀ ಅಭಿಷೇಕ ಮುರುಕುಟೆ

ಶ್ರೀ ಅಭಿಷೇಕ ಮುರುಕುಟೆ ಅವರು ಹೇಳಿದ ಕೆಲ ಪ್ರಮುಖ ಅಂಶಗಳು,

1. ಶಾಲೆಗಳ ಇಂತಹ ದಬ್ಬಾಳಿಕೆಯ ವಿರುದ್ಧ ಜೂನ್ 11, 2004 ರಂದೇ ಸರ್ಕಾರಿ ಆದೇಶ ಅಸ್ತಿತ್ವದಲ್ಲಿದ್ದರೂ, ಪರಿಣಾಮಕಾರಿ ಅನುಷ್ಠಾನ ಮತ್ತು ವ್ಯವಸ್ಥೆಯ ಕೊರತೆಯಿಂದಾಗಿ ಪೋಷಕರ ಲೂಟಿ ಮುಂದುವರಿದಿತ್ತು. ಸುರಾಜ್ಯ ಅಭಿಯಾನದ ನಿರಂತರ ಬೆನ್ನಟ್ಟುವಿಕೆಯಿಂದಾಗಿ ಈ ‘ಕಾಗದದ ನಿಯಮಗಳು’ ಈಗ ಪ್ರಾಯೋಗಿಕವಾಗಿ ಜಾರಿಗೆ ಬರಲಿವೆ.

2. ಮಹಾರಾಷ್ಟ್ರದಲ್ಲಿ ದೂರು ನೀಡಲು ಮಾರ್ಗ ಲಭ್ಯವಿದ್ದು, ಪೋಷಕರು ಭಯಪಡದೆ ನೋಡಲ್ ಅಧಿಕಾರಿಗಳಿಗೆ ಅಥವಾ ಇ-ಮೇಲ್ ಮೂಲಕ ಪುರಾವೆಗಳೊಂದಿಗೆ ದೂರು ನೀಡಬೇಕು. ಪೋಷಕರು ಈ ಬಗ್ಗೆ ಸುರಾಜ್ಯ ಅಭಿಯಾನವನ್ನೂ ಸಂಪರ್ಕಿಸಬಹುದು.

3. ಶಾಲೆಯು ವ್ಯವಹಾರದ ಕೇಂದ್ರವಲ್ಲ, ಜ್ಞಾನದಾನದ ಪವಿತ್ರ ದೇವಾಲಯವೆಂಬ ಭಾವವನ್ನು ಉಳಿಸಲು ಪೋಷಕರು ಜಾಗೃತರಾಗುವುದು ಅಗತ್ಯವಾಗಿದೆ.

4. ಭಾರತದ ಇತರ ರಾಜ್ಯಗಳೂ ಕೂಡ ಇಂತಹ ಕ್ರಮಗಳನ್ನು ಕೈಗೊಂಡಿವೆ; ಆದರೆ ಈ ಸಮಸ್ಯೆ ದೇಶಾದ್ಯಂತ ಹರಡಿದ್ದು, ಅನೇಕ ಕೇಂದ್ರ ಮಂಡಳಿಗಳ ಶಾಲೆಗಳು ರಾಜ್ಯದ ನಿಯಮಗಳನ್ನು ಮನ್ನಿಸುತ್ತಿಲ್ಲ. ಆದ್ದರಿಂದ ಇಡೀ ದೇಶಕ್ಕೆ ಅನ್ವಯವಾಗುವಂತೆ ಏಕರೂಪದ ದೇಶಮಟ್ಟದ ಆದೇಶವನ್ನು ಜಾರಿಗೆ ತರಬೇಕೆಂದು ನಾವು ಕೇಂದ್ರ ಶಿಕ್ಷಣ ಕಾರ್ಯದರ್ಶಿ ಮತ್ತು ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ ಅವರಿಗೆ ಒತ್ತಾಯಿಸಿದ್ದೇವೆ, ಇದರಿಂದ ಯಾವುದೇ ಪೋಷಕರ ಆರ್ಥಿಕ ಲೂಟಿಯಾಗುವುದಿಲ್ಲ.

ಸಂಪಾದಕೀಯ ನಿಲುವು

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ನೆಮ್ಮದಿ ನೀಡಿದ ‘ಸುರಾಜ್ಯ ಅಭಿಯಾನ’ಕ್ಕೆ ಅಭಿನಂದನೆಗಳು!