ಸಾಮಾಜಿಕ ಸುಧಾರಣೆಯ ಹೆಸರಲ್ಲಿ ಧರ್ಮವನ್ನು ಪೊಳ್ಳು ಮಾಡಲು ಸಾಧ್ಯವಿಲ್ಲ!

ಶಬರಿಮಲೆ ದೇವಸ್ಥಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ನಿರೀಕ್ಷಣೆ

ನವ ದೆಹಲಿ – ಲಕ್ಷಾಂತರ ಜನರ ನಂಬಿಕೆಗೆ ಧಕ್ಕೆ ತರುವುದು ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ. ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಯ ಹೆಸರಿನಲ್ಲಿ ಯಾವುದೇ ಧರ್ಮವನ್ನು ಪೊಳ್ಳು ಮಾಡಲು ಸಾಧ್ಯವಿಲ್ಲ ಎಂದು ಶಬರಿಮಲೆ ದೇವಸ್ಥಾನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಂವಿಧಾನದ ವಿಧಿ 25 (2)(ಬಿ) ಮತ್ತು ವಿಧಿ 26 (ಬಿ) ಅಡಿಯಲ್ಲಿ ಧಾರ್ಮಿಕ ಸಂಸ್ಥೆಯು ತನ್ನ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕಿನ ನಡುವಿನ ಸಂಬಂಧದ ಬಗ್ಗೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ವಾದವನ್ನು ಆಲಿಸುವಾಗ ನ್ಯಾಯಾಲಯವು ಈ ಅವಲೋಕನವನ್ನು ಮಾಡಿದೆ. ವಿಧಿ 25 (2)(ಬಿ) ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಗಾಗಿ ಕಾನೂನುಗಳನ್ನು ಮಾಡಲು ಅಥವಾ ಸಾರ್ವಜನಿಕ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಎಲ್ಲಾ ವರ್ಗದ ಹಿಂದೂಗಳಿಗೆ ಮುಕ್ತವಾಗಿಡಲು ಸರಕಾರಕ್ಕೆ ಅನುಮತಿ ನೀಡುತ್ತದೆ.

ಯಾವ ಸಂಪ್ರದಾಯ ಅಗತ್ಯ ಅಥವಾ ಅಲ್ಲ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ!

‘ತಿರುವಾಂಕೂರು ದೇವಸ್ವಂ ಮಂಡಳಿ’ಯ ಪರವಾಗಿ ವಾದ ಮಂಡಿಸಿದ ವಕೀಲ ಸಿಂಘ್ವಿ ಅವರು, ವಿಧಿ 25 (2)(ಬಿ) ಅಡಿಯಲ್ಲಿ ಹಿಂದೂಗಳ ಎಲ್ಲಾ ಪಂಗಡಗಳಿಗೆ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳಿಗೆ ಪ್ರವೇಶ ಕೋರುವ ಹಕ್ಕಿದ್ದರೂ, ವಿಧಿ 26 (ಬಿ) ಅಡಿಯಲ್ಲಿ ಧಾರ್ಮಿಕ ಪಂಗಡಕ್ಕೆ ತನ್ನ ಧಾರ್ಮಿಕ ಆಚರಣೆಗಳನ್ನು ನಿಯಂತ್ರಿಸುವ ಹಕ್ಕಿದೆ ಎಂದು ಹೇಳಿದರು. ವಿಧಿ 25 (2)(ಬಿ) ನ ಉದ್ದೇಶವು ಯಾವುದೇ ಧರ್ಮದ ಅಸ್ತಿತ್ವ ಅಥವಾ ಗುರುತನ್ನು ನಾಶಪಡಿಸುವುದಲ್ಲ. ಆ ವಿಧಿಯ ಅಡಿಯಲ್ಲಿ ಮಾಡುವ ಕಾನೂನುಗಳು ಧರ್ಮದ ಮೂಲಭೂತ ಆಚರಣೆಗಳ ಮೇಲೆ ಪರಿಣಾಮ ಬೀರಬಾರದು. ಸಾಂವಿಧಾನಿಕ ರಕ್ಷಣೆಯನ್ನು ಕೇವಲ ಅನಿವಾರ್ಯ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ, ಹಾಗೆಯೇ ಯಾವ ಸಂಪ್ರದಾಯ ಅಗತ್ಯ ಅಥವಾ ಅಲ್ಲ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಅವರು ತಿಳಿಸಿದರು.

ಶಬರಿಮಲೆ ದೇವಸ್ಥಾನ ‘ರೆಸ್ಟೋರೆಂಟ್’ ಅಲ್ಲ! – ತಿರುವಾಂಕೂರು ದೇವಸ್ವಂ ಮಂಡಳಿ

ತಿರುವಾಂಕೂರು ದೇವಸ್ವಂ ಮಂಡಳಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮಾತನಾಡಿ, “ಇದು ಆಟಿಕೆ ಅಂಗಡಿ ಅಥವಾ ರೆಸ್ಟೋರೆಂಟ್ ಪ್ರಕರಣವಲ್ಲ. ಇದು ಆಜನ್ಮ ಬ್ರಹ್ಮಚಾರಿ ಎಂದು ನಂಬಲಾದ ದೇವರಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ. 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶವು ಈ ದೇವತೆಯ ಸ್ವರೂಪ ಮತ್ತು ಗುರುತಿಗೆ ವಿರುದ್ಧವಾಗಿದೆ. ಭಾರತದಲ್ಲಿ ಸುಮಾರು 1,೦೦೦ ಅಯ್ಯಪ್ಪ ದೇವಾಲಯಗಳಿವೆ. ಮಹಿಳೆಯರಿಗೆ ದರ್ಶನ ಪಡೆಯಬೇಕೆಂದಿದ್ದರೆ ಅವರು ಅಲ್ಲಿಗೆ ಹೋಗಬಹುದು. ಅವರು ಇದೇ ನಿರ್ದಿಷ್ಟ ದೇವಸ್ಥಾನಕ್ಕೆ ಏಕೆ ಬರಬೇಕು?” ಎಂದು ಪ್ರಶ್ನಿಸಿದರು.

ಪ್ರಕರಣದ ಹಿನ್ನೆಲೆ ಏನು?

ಕೇರಳ ಹೈಕೋರ್ಟ್ 1991 ರಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ 2018 ರಲ್ಲಿ ಈ ನಿಷೇಧವು ತಾರತಮ್ಯದಿಂದ ಕೂಡಿದೆ ಎಂದು ಹೇಳಿ ಅದನ್ನು ರದ್ದುಗೊಳಿಸಿತ್ತು. ತದನಂತರ ದಾಖಲಾದ ಮರುಪರಿಶೀಲನಾ ಅರ್ಜಿಗಳ ಆಧಾರದ ಮೇಲೆ 7 ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.