ಭಾರತ ಮಾತ್ರ ತನ್ನ ನಾವಿಕರನ್ನು ಹೋರ್ಮುಜ್ ನಲ್ಲಿ ಕಳೆದುಕೊಂಡಿದೆ: ಈ ಬಿಕ್ಕಟ್ಟನ್ನು ಮಾತುಕತೆಯ ಮೂಲಕವೇ ಬಗೆಹರಿಸಬಹುದು!

೬೦ ದೇಶಗಳ ಆನ್ ಲೈನ್ ಸಭೆಯಲ್ಲಿ ಭಾರತದ ಕರೆ

ನವ ದೆಹಲಿ – ಹೋರ್ಮುಜ್ ಜಲಸಂಧಿಯ ಬಿಕ್ಕಟ್ಟಿನಲ್ಲಿ ಇದುವರೆಗೆ ಕೇವಲ ಭಾರತೀಯ ನಾಗರಿಕರು ಮಾತ್ರ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಪೂರ್ಣ ಬಿಕ್ಕಟ್ಟನ್ನು ಕೇವಲ ಸಂವಾದ ಮತ್ತು ಶಾಂತಿಯ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ ಎಂದು ಭಾರತ ಕರೆ ನೀಡಿದೆ. ಎಲ್ಲಾ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಿ ಪರಸ್ಪರ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ವಿನಂತಿಸಿದೆ. ಬ್ರಿಟನ್ ನ ಉಪಕ್ರಮದೊಂದಿಗೆ ಹೋರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸಲು ೬೦ಕ್ಕೂ ಹೆಚ್ಚು ದೇಶಗಳ ಉಪಸ್ಥಿತಿಯಲ್ಲಿ ಒಂದು ಬೃಹತ್ ಆನ್ಲೈನ್ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಭಾರತವನ್ನು ಪ್ರತಿನಿಧಿಸಿ ಈ ರೀತಿ ಕರೆ ನೀಡಿದರು. ಹೋರ್ಮುಜ್ ಜಲಸಂಧಿಯಲ್ಲಿ ಇದುವರೆಗೆ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಈ ಮೂವರೂ ವಿದೇಶಿ ನೌಕೆಗಳಲ್ಲಿ ಕೆಲಸ ಮಾಡುತ್ತಿದ್ದರು.

೧. ೬೦ ದೇಶಗಳ ಈ ಸಭೆಯಿಂದಾಗಿ ಈಗ ಅಮೆರಿಕವನ್ನು ಹೊರತುಪಡಿಸಿ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಪ್ರಯತ್ನಗಳು ಆರಂಭವಾಗಿರುವುದು ಕಂಡುಬರುತ್ತಿದೆ. ಹೋರ್ಮುಜ್ ಮುಕ್ತಗೊಳಿಸುವುದು ನನ್ನ ಜವಾಬ್ದಾರಿಯಲ್ಲ, ಆ ಮಾರ್ಗವಾಗಿ ವ್ಯಾಪಾರ ಮಾಡುವ ದೇಶಗಳೇ ಆ ಪ್ರಯತ್ನ ಮಾಡಲಿ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಈ ಹಿಂದೆಯೇ ಹೇಳಿ ಈ ವಿಷಯದಿಂದ ಕೈತೊಳೆದುಕೊಂಡಿದ್ದರು.

೨. ಈ ಹಿನ್ನೆಲೆಯಲ್ಲಿ ಹೋರ್ಮುಜ್ ಸಮಸ್ಯೆಯ ಸೂತ್ರಗಳನ್ನು ಈಗ ಬ್ರಿಟನ್ ಕೈಗೆತ್ತಿಕೊಂಡಿದೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಲಂಡನ್ ನಲ್ಲಿ ೩೫ ದೇಶಗಳ ಸಭೆ ಕರೆದಿದ್ದಾರೆ. ಇದರಲ್ಲಿ ಭಾರತಕ್ಕೂ ಆಮಂತ್ರಣ ನೀಡಲಾಗಿದ್ದು, ಇದೇ ವಾರ ನಡೆಯಲಿರುವ ಈ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭಾಗವಹಿಸಲಿದ್ದಾರೆ.

೩. ನಾವು ಇರಾನ್ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

೪. ಹೋರ್ಮುಜ್ ವಿಷಯದಲ್ಲಿ ಬ್ರಿಟನ್ ನ ಈ ಕ್ರಮಕ್ಕೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಬೆಂಬಲ ನೀಡಿದ್ದಾರೆ. ಚೀನಾದ ವಿದೇಶಾಂಗ ಸಚಿವಾಲಯವೂ ಈ ಸಭೆಗೆ ಬೆಂಬಲ ಸೂಚಿಸಿದೆ.

ಇರಾನ್-ಅಮೆರಿಕ ಯುದ್ಧದಲ್ಲಿ ಪುಟಿನ್ ಮಧ್ಯಸ್ಥಿಕೆಗೆ ಸಿದ್ಧ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕ-ಇಸ್ರೇಲ್ ವಿರುದ್ಧದ ಇರಾನ್ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧತೆ ತೋರಿಸಿದ್ದಾರೆ. ದೇಶಗಳ ನಡುವಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ನೀಡಿದ ಕರೆಯ ನಂತರ ಮಾಸ್ಕೋದಿಂದ ಮಧ್ಯಸ್ಥಿಕೆಯ ಪ್ರಸ್ತಾವನೆ ನೀಡಲಾಗಿದೆ. ‘ಯುದ್ಧಗ್ರಸ್ತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಲು ಮಾಸ್ಕೋ ಪ್ರಯತ್ನಿಸಲು ಸಿದ್ಧವಿದೆ. ಇದಕ್ಕಾಗಿ ಸ್ಥಳೀಯ ನಾಯಕರೊಂದಿಗೆ ಸಂಪರ್ಕದಲ್ಲಿರುತ್ತೇವೆ’ ಎಂದು ಪುಟಿನ್ ಹೇಳಿರುವುದಾಗಿ ವರದಿಯಾಗಿದೆ.

ಅಧ್ಯಕ್ಷರ ಕಚೇರಿ ‘ಕ್ರೆಮ್ಲಿನ್’ನ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪತ್ರಕರ್ತರೊಂದಿಗೆ ಮಾತನಾಡಿ, ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪುಟಿನ್ ಪ್ರಾದೇಶಿಕ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಮಿಲಿಟರಿ ಕ್ರಮ ನಿಲ್ಲಿಸಲು ನಮ್ಮ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಇರಾನ್ ನ ನಾಲ್ಕು ಶರತ್ತುಗಳು

ರಷ್ಯಾದಲ್ಲಿರುವ ಇರಾನ್ ರಾಯಭಾರಿ ಕಾಜೆಮ್ ಜಲಾಲಿಯವರು ಶಾಂತಿ ಸ್ಥಾಪನೆಗಾಗಿ ಅಮೆರಿಕ ಮತ್ತು ಇಸ್ರೇಲ್ ಮುಂದೆ ೪ ಪ್ರಮುಖ ಶರತ್ತುಗಳನ್ನು ಇಟ್ಟಿದ್ದಾರೆ. ಅವು ಈ ಕೆಳಗಿನಂತಿವೆ,

ಅ. ಭಯೋತ್ಪಾದಕ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಆ. ಯುದ್ಧವು ಮರುಕಳಿಸುವುದಿಲ್ಲ ಎಂಬ ಬಗ್ಗೆ ವಿಶ್ವಾಸಾರ್ಹ ಭರವಸೆ ನೀಡಬೇಕು.

ಇ. ಭೌತಿಕ ಮತ್ತು ನೈತಿಕ ಹಾನಿಗೆ ಸಂಪೂರ್ಣ ಪರಿಹಾರ ನೀಡಬೇಕು.

ಈ. ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ನ ಕಾನೂನುಬದ್ಧ ವ್ಯಾಪ್ತಿಯನ್ನು ಗೌರವಿಸಬೇಕು.

ಬಹಳ ತಡವಾಗುವ ಮೊದಲೇ ಒಪ್ಪಂದ ಮಾಡಿಕೊಳ್ಳಿ! – ಟ್ರಂಪ್ ಅವರಿಂದ ಇರಾನ್ ಗೆ ಮತ್ತೆ ಬೆದರಿಕೆ

ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿ ಪಶ್ಚಿಮ ಏಷ್ಯಾದ ಅತಿ ಎತ್ತರದ ಸೇತುವೆಗಳಲ್ಲಿ ಒಂದಾದ ಇರಾನ್ ನ ಕರಾಜ್ ಸೇತುವೆಯನ್ನು ಧ್ವಂಸಗೊಳಿಸಿವೆ. ಅದರ ನಂತರ ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಇರಾನ್ ಗೆ ಬೆದರಿಕೆ ಹಾಕಿದ್ದಾರೆ. ‘ಬಹಳ ತಡವಾಗುವ ಮೊದಲೇ ಇರಾನ್ ಒಪ್ಪಂದ ಮಾಡಿಕೊಳ್ಳಲಿ. ಇರಾನ್ ಇಂದಿಗೂ ಒಂದು ಶ್ರೇಷ್ಠ ರಾಷ್ಟ್ರವಾಗಬಹುದು; ಆದರೆ ಎಲ್ಲವೂ ನಾಶವಾಗುವ ಮೊದಲು ಈಗ ಒಪ್ಪಂದ ಮಾಡಿಕೊಳ್ಳುವ ಸಮಯ ಬಂದಿದೆ’ ಎಂದು ಅವರು ಹೇಳಿದ್ದಾರೆ.

ತನ್ನ ಸೇನಾ ಮುಖ್ಯಸ್ಥರನ್ನು ತರಾತುರಿಯಲ್ಲಿ ವಜಾಗೊಳಿಸಿದ ಅಮೆರಿಕ

ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರಿಗೆ ತಕ್ಷಣವೇ ಕಡ್ಡಾಯ ನಿವೃತ್ತಿ ಪಡೆಯುವಂತೆ ಆದೇಶಿಸಿದ್ದಾರೆ. ಜಾರ್ಜ್ ಅವರೊಂದಿಗೆ ಇನ್ನು ಇಬ್ಬರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸೇನಾ ಮುಖ್ಯಸ್ಥರಿಗೆ ತಕ್ಷಣದ ಕಡ್ಡಾಯ ನಿವೃತ್ತಿಗೆ ಆದೇಶ ನೀಡಲು ಕಾರಣವೇನು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.