ಮರಗಳ ಉಸಿರುಗಟ್ಟಿಸುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ!

  • ‘ಸುರಾಜ್ಯ ಅಭಿಯಾನ’ದಿಂದ ವಿವಿಧೆಡೆಯ ಆಡಳಿತಾಧಿಕಾರಿಗಳಿಗೆ ಮನವಿಯ ಮೂಲಕ ಒತ್ತಾಯ

  • ಮರಗಳ ಸುತ್ತಲಿನ ‘ಕಾಂಕ್ರೀಟ್’, ಹಾಗೂ ಅವುಗಳಿಗೆ ಮೊಳೆ ಹೊಡೆದು ಜಾಹೀರಾತು ಹಾಕುವುದು – ಇಂತಹ ಕಾನೂನುಬಾಹಿರ ಕೃತ್ಯಗಳ ಮೇಲೆ ಬೆಳಕು ಚೆಲ್ಲಿದ ‘ಸುರಾಜ್ಯ ಅಭಿಯಾನ’!

ನಾಗಪುರ: ಮರಗಳಿಗೆ ಮೊಳೆ ಹೊಡೆದು ಜಾಹೀರಾತು

ಮುಂಬಯಿ – ನಗರದ 29 ಲಕ್ಷ 75 ಸಾವಿರ ಮರಗಳ ರಕ್ಷಣೆಗಾಗಿ ಮುಂಬಯಿ ಮಹಾನಗರ ಪಾಲಿಕೆಯು ಏಪ್ರಿಲ್ 1 ರಂದು ‘ವೃಕ್ಷ ಸಂಜೀವಿನಿ’ ಅಭಿಯಾನವನ್ನು ಘೋಷಿಸಿದೆ. ಇದು ಕೇವಲ ಒಂದು ದಿನದ ‘ಮೇಲ್ನೋಟದ ಚಿಕಿತ್ಸೆ’ಯಾಗಿದ್ದು, ಆಡಳಿತವು ಇದನ್ನು ಕೇವಲ ಒಂದು ‘ಇವೆಂಟ್’ (ಔಪಚಾರಿಕ ಕಾರ್ಯಕ್ರಮ) ಎಂದು ನೋಡುತ್ತಿದೆಯೇ? ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರೇರಿತ ‘ಸುರಾಜ್ಯ ಅಭಿಯಾನ’ ಪ್ರಶ್ನೆ ಹಾಕಿದೆ. ವಿವಿಧ ನಗರಗಳಲ್ಲಿ ಸುಂದರೀಕರಣದ ಹೆಸರಿನಲ್ಲಿ ಮರಗಳ ಸುತ್ತಲೂ ಮಾಡಲಾದ ‘ಕಾಂಕ್ರೀಟ್’, ಹಾಗೂ ಮರಗಳಿಗೆ ಮೊಳೆ ಹೊಡೆದು ಹಾಕಲಾಗುವ ಜಾಹೀರಾತುಗಳಂತಹ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಈ ಅಭಿಯಾನವು ಧ್ವನಿ ಎತ್ತಿದೆ. ಇದು ಯಾವುದೇ ಐಚ್ಛಿಕ ಸೇವೆಯಲ್ಲ, ಬದಲಿಗೆ ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಮಾಡಲೇಬೇಕಾದ ಕಡ್ಡಾಯ ಕಾನೂನು ಪ್ರಕ್ರಿಯೆಯಾಗಿದೆ ಎಂದು ಅಭಿಯಾನ ಹೇಳಿದೆ.

ಮರಗಳಿಗೆ ಸಾವಿರಾರು ಮೊಳೆಗಳನ್ನು ಹೊಡೆದು ಜಾಹೀರಾತುಗಳನ್ನು ಹಾಕುವುದು ಮತ್ತು ಬುಡದವರೆಗೆ ಕಾಂಕ್ರೀಟ್ ಸುರಿದು ಅವುಗಳ ಉಸಿರುಗಟ್ಟಿಸುವುದು ಹಾಗೂ ಆ ಮೂಲಕ ನೈಸರ್ಗಿಕ ಬೆಳವಣಿಗೆಯನ್ನು ತಡೆಯುವುದು, ‘ಮಹಾರಾಷ್ಟ್ರ ಮರಗಳ ಸಂರಕ್ಷಣೆ ಮತ್ತು ಪಾಲನೆ ಅಧಿನಿಯಮ, 1975’ ಸೇರಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಸ್ಪಷ್ಟ ಆದೇಶಗಳ ನೇರ ಉಲ್ಲಂಘನೆಯಾಗಿದೆ ಎಂದು ಅಭಿಯಾನವು ತಿಳಿಸಿದೆ.

ಜಳಗಾಂವ್ ನಲ್ಲಿ ಮರದ ಬುಡದವರೆಗೆ ಕಾಂಕ್ರೀಟೀಕರಣ

ಈ ಕುರಿತು ಜಳಗಾಂವ್ ಮತ್ತು ಸಾತಾರಾ ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ನಾಗಪುರ ಸೇರಿದಂತೆ ಮುಂಬಯಿ ಮಹಾನಗರ ಪಾಲಿಕೆಯ ಮಹಾಪೌರರು ಮತ್ತು ಪಾಲಿಕೆ ಆಯುಕ್ತರಿಗೂ ಮನವಿ ನೀಡಲಾಗಿದೆ ಎಂದು ಅಭಿಯಾನದ ಸಂಯೋಜಕರಾದ ಶ್ರೀ. ಅಭಿಷೇಕ ಮುರುಕುಟೆ ಮಾಹಿತಿ ನೀಡಿದ್ದಾರೆ.

‘ಸುರಾಜ್ಯ ಅಭಿಯಾನ’ದ ಸಂಯೋಜಕ ಶ್ರೀ. ಅಭಿಜಿತ ಮುರುಕುಟೆ ತಿಳಿಸಿದ ಅಂಶಗಳು,

1. ರಾಜ್ಯದ ಪರಿಸ್ಥಿತಿ ಅತ್ಯಂತ ಭಯಾನಕವಾಗಿದ್ದು, ಕೇವಲ ಮುಂಬಯಿಯಲ್ಲೇ ಕಳೆದ ಒಂದು ವರ್ಷದಲ್ಲಿ ಮರಗಳಿಂದ 17.43 ಕೆಜಿ ಮೊಳೆಗಳನ್ನು ಮತ್ತು 1,460 ಅಕ್ರಮ ಜಾಹೀರಾತು ಫಲಕಗಳನ್ನು ತೆಗೆಯಲಾಗಿದೆ.

2. ಮರಗಳ ಸುತ್ತಲೂ 1 ಮೀಟರ್ ಜಾಗವನ್ನು ಕಚ್ಚಾ (ಅನ್-ಪೇವ್ಡ್) ಬಿಡಬೇಕೆಂದು ಉಚ್ಚ ನ್ಯಾಯಾಲಯದ ನಿರ್ದೇಶನವಿದ್ದರೂ ಸಹ, ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾವಿರಾರು ಮರಗಳ ಸುತ್ತಲೂ ಸಿಮೆಂಟ್ ಪದರಗಳನ್ನು ಸುರಿಯುತ್ತಿರುವುದು ಹೇಗೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ವೃಕ್ಷಸಂಪತ್ತು ಅಪಾಯಕ್ಕೆ ಸಿಲುಕಿದ್ದರೂ ಸಹ ಜಾಹೀರಾತುದಾರರು ಅಥವಾ ಗುತ್ತಿಗೆದಾರರ ಮೇಲೆ ಸರ್ಕಾರ ಏಕೆ ಮೊಕದ್ದಮೆ ದಾಖಲಿಸುತ್ತಿಲ್ಲ? ಎಂಬುದು ಕಳವಳಕಾರಿ ಸಂಗತಿಯಾಗಿದೆ.

3. ಮರಗಳ ಬೇರುಗಳಿಗೆ ಆಮ್ಲಜನಕ ಸಿಗುವುದು ನಿಂತು ಹೋಗಿರುವುದರಿಂದ ಅವು ದುರ್ಬಲಗೊಂಡು ಮರ ಉರುಳುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಆಡಳಿತಾತ್ಮಕ ಮಟ್ಟದ ನಿರ್ಲಕ್ಷ್ಯವೇ ಮೂಲ ಕಾರಣವಾಗಿದೆ.

ಮುಂಬಯಿಯ ನಾಯಗಾವ ಪ್ರದೇಶದಲ್ಲಿರುವ ಸದಾನಂದ ಜಾಧವ್ ರಸ್ತೆಯಲ್ಲಿರುವ ಮರ

‘ಸುರಾಜ್ಯ ಅಭಿಯಾನ’ದ ಬೇಡಿಕೆಗಳು!

1. ನಮ್ಮ ಬೇಡಿಕೆಗಳ ಪೈಕಿ ‘Polluter Pays’ (ಮಾಲಿನ್ಯ ಮಾಡಿದವನೇ ದಂಡ ತೆರಲಿ) ಎಂಬ ತತ್ವದಂತೆ ಮರಗಳ ಸುತ್ತಲಿನ ಕಾಂಕ್ರೀಟ್ ಅನ್ನು ತಪ್ಪಿತಸ್ಥ ಗುತ್ತಿಗೆದಾರರೇ ಸ್ವಂತ ಖರ್ಚಿನಲ್ಲಿ ತೆಗೆಯಬೇಕು. ಅಂತಹ ಗುತ್ತಿಗೆದಾರರಿಗೆ ಕೇವಲ ನೋಟಿಸ್ ನೀಡದೆ ತಕ್ಷಣವೇ ‘ಕಪ್ಪು ಪಟ್ಟಿಗೆ’ ಸೇರಿಸಬೇಕು. ಸರಕಾರಿ ಟೆಂಡರ್ ನಲ್ಲಿ ಮರಗಳ ಸುತ್ತಲೂ ಜಾಗ ಬಿಡುವ ಷರತ್ತನ್ನು ಕಡ್ಡಾಯಗೊಳಿಸಬೇಕು. ಇದರ ಉಲ್ಲಂಘನೆಯಾದರೆ ಗುತ್ತಿಗೆದಾರರ ಹಣ ಪಾವತಿಯನ್ನು ತಡೆಹಿಡಿಯಬೇಕು.

2. ‘ವೃಕ್ಷ ಸಂಜೀವಿನಿ’ ಅಂತಹ ಅಭಿಯಾನವನ್ನು ಕೇವಲ ಒಂದು ನಗರಕ್ಕೆ ಸೀಮಿತಗೊಳಿಸದೆ, ಇಡೀ ಮಹಾರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರಕಾರವು ತಕ್ಷಣ ಆದೇಶ ನೀಡಬೇಕು.

3.ಸರ್ಕಾರವು ಕೇವಲ ಒಂದು ದಿನದ ಕಾರ್ಯಕ್ರಮವನ್ನು ಮಾಡದೆ ಕಾನೂನಿನ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

4. ಇಡೀ ಮಹಾರಾಷ್ಟ್ರದಲ್ಲಿ ಮರಗಳು ಮುಕ್ತವಾಗಿ ಉಸಿರಾಡುವಂತಹ ಶಾಶ್ವತ ಕಾನೂನು ವ್ಯವಸ್ಥೆಯನ್ನು ನಿರ್ಮಿಸಬೇಕು.

5. ಎಲ್ಲಿಯವರೆಗೆ ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳು ಮತ್ತು ಗುತ್ತಿಗೆದಾರರಲ್ಲಿ ಕಾನೂನಿನ ಭಯ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೆ ವೃಕ್ಷಸಂಪತ್ತು ಸುರಕ್ಷಿತವಾಗುವುದಿಲ್ಲ.

ಸಂಪಾದಕೀಯ ನಿಲುವು

  • ಮರಗಳ ಮೇಲೆ ದೌರ್ಜನ್ಯ ಎಸಗುವ ಈ ಕೃತ್ಯಗಳು ಕಾನೂನುಬಾಹಿರವಾಗಿವೆ, ಹೀಗಿದ್ದರೂ ಸರ್ಕಾರ ಇದಕ್ಕೆ ಹೇಗೆ ಅನುಮತಿಸಬಹುದು? ಇದರರ್ಥ, ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಕಾನೂನಿನ ಅರಿವಿಲ್ಲ ಅಥವಾ ಅವರು ಉದ್ದೇಶಪೂರ್ವಕವಾಗಿ ಕಾನೂನಿನ ಕಣ್ಣು ತಪ್ಪಿಸುತ್ತಿದ್ದಾರೆ. ಆದ್ದರಿಂದ ಕೇವಲ ಗುತ್ತಿಗೆದಾರರಲ್ಲದೆ, ಆಡಳಿತಾಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು.
  • ಸಮಾಜ ಹಿತೈಷಿ ಸಂಘಟನೆಯೊಂದಕ್ಕೆ ಗಮನಕ್ಕೆ ಬರುವ ವಿಷಯ, ಎಲ್ಲಾ ವ್ಯವಸ್ಥೆ ಮತ್ತು ಮಾಹಿತಿ ಕೈಯಲ್ಲಿರುವ ಸರ್ಕಾರಕ್ಕೆ ಏಕೆ ತಿಳಿಯುತ್ತಿಲ್ಲ? ಪರಿಸರದ ನಾಶವಾಗಬಾರದೆಂದು ಆಡಳಿತಕ್ಕೆ ಅನ್ನಿಸುವುದಿಲ್ಲವೇ?