೩ ವರ್ಷಗಳಿಂದ ಹುಡುಗಿಗೆ ಕಿರುಕುಳ; ಪೊಲೀಸ್ ದೂರು ನೀಡಿದ್ದಕ್ಕಾಗಿ ತಂದೆಯ ಹತ್ಯೆ!

  • ಕಾನ್ಪುರ: ಪೊಲೀಸರಿಗೆ ೬ ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ!

  • ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಅಮಾನತು.

ಕಾನ್ಪುರ (ಉತ್ತರ ಪ್ರದೇಶ) – ಸಾಹಿಲ್ ಎಂಬ ಯುವಕ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಕಳೆದ ೩ ವರ್ಷಗಳಿಂದ ಕಿರುಕುಳ ನೀಡುತ್ತಿದ್ದನು. ಈತನ ವಿರುದ್ಧ ಪೊಲೀಸರಿಗೆ ೬ ಬಾರಿ ದೂರು ನೀಡಿದರೂ ಪೊಲೀಸರು ಅದನ್ನು ನಿರ್ಲಕ್ಷಿಸಿದ್ದರು. ಪದೇ-ಪದೇ ದೂರು ನೀಡಿದ ಕೋಪದಲ್ಲಿ, ಸಾಹಿಲ್ ಸಂತ್ರಸ್ತೆಯ ಪಾರ್ಶ್ವವಾಯು ಪೀಡಿತ ತಂದೆಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆ ಶಾಲೆಗೆ ಹೋಗುವಾಗ ಸಾಹಿಲ್ ಆಕೆಗೆ “ನನ್ನೊಂದಿಗೆ ಮಾತನಾಡು, ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ” ಎಂದು ಹೇಳುತ್ತಿದ್ದನು. ಸಂತ್ರಸ್ತೆ ನಿರಾಕರಿಸಿದಾಗ ಆತ ಬಲವಂತ ಮಾಡತೊಡಗಿದನು. “ನಾನು ಸತ್ತು ಹೋಗುತ್ತೇನೆ” ಎಂದು ಆಕೆಗೆ ಬೆದರಿಕೆ ಹಾಕುತ್ತಿದ್ದನು. ಸಾಹಿಲ್ ನಿಗೆ ಅವನ ಸಹೋದರಿ ಕೂಡ ಬೆಂಬಲ ನೀಡುತ್ತಿದ್ದಳು ಎಂದು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಸಾಹಿಲ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಈ ಪ್ರಕರಣದಲ್ಲಿ ಸಾಹಿಲ್ ಮತ್ತು ಅವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಠಾಣೆಯ ಮುಖ್ಯಸ್ಥ ಮಾನವೇಂದ್ರ ಸಿಂಗ್ ಅವರು ಈ ಬಗ್ಗೆ ಮಾತನಾಡಿ, ಮಹಿಳೆಯ ದೂರಿನ ಮೇರೆಗೆ ಸಾಹಿಲ್, ಅವನ ತಾಯಿ ರಾಧಾ, ಸಹೋದರಿ ಕೋಮಲ್ ಮತ್ತು ಅವನ ಸಹೋದರ ಕರಣ್ ವಿರುದ್ಧ ಹತ್ಯೆಯ ಪ್ರಯತ್ನದ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿ ಶುಭಂ ಸಿಂಗ್ ಅವರನ್ನು ಪೊಲೀಸ್ ಉಪ ಆಯುಕ್ತ ಅತುಲ್ ಶ್ರೀವಾಸ್ತವ ಅವರು ಅಮಾನತುಗೊಳಿಸಿದ್ದಾರೆ.

ಇದಕ್ಕೂ ಮೊದಲು ಕಳೆದ ವರ್ಷ ನವೆಂಬರ್ ೨೬ ರಂದು ಸಾಹಿಲ್ ಸಂತ್ರಸ್ತೆಗೆ ಪಿಸ್ತೂಲ್ ತೋರಿಸಿ, “ನೀನು ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಗಂಗಾ ನದಿಗೆ ತಳ್ಳುತ್ತೇನೆ” ಎಂದು ಬೆದರಿಸಿದ್ದನು. ನವೆಂಬರ್ ೯ ರಂದು ಸಾಹಿಲ್ ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿದ್ದನು. ಪೊಲೀಸರಿಗೆ ದೂರು ನೀಡಿದರೂ ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅವನ ಧೈರ್ಯ ಇನ್ನಷ್ಟು ಹೆಚ್ಚಾಗಿತ್ತು.

ಸಂಪಾದಕೀಯ ನಿಲುವು

ಕಿರುಕುಳ ನೀಡಿದವನು ಎಷ್ಟು ದೋಷಿಯೋ, ಕಾನ್ಪುರದ ಪೊಲೀಸ್ ಅಧಿಕಾರಿಗಳೂ ಅಷ್ಟೇ ದೋಷಿಗಳಾಗಿದ್ದಾರೆ. ಕರ್ತವ್ಯ ನಿರ್ವಹಿಸದ ಪೊಲೀಸರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಒತ್ತಾಯಿಸಿದರೆ ಅದರಲ್ಲಿ ತಪ್ಪೇನಿದೆ?