ಮೊದಲು ಅಮೆರಿಕದಲ್ಲಿನ ದೇವಸ್ಥಾನಗಳ ಮತ್ತು ಭಾರತೀಯರ ಮೇಲಿನ ಆಕ್ರಮಣಗಳನ್ನು ನಿಲ್ಲಿಸಿ ! – ಭಾರತ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ‘ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ (ರಾ)’ ಈ ಸಂಸ್ಥೆಗಳ ಮೇಲೆ ನಿಷೇಧ ಹೇರಲು ಆಗ್ರಹಿಸುವ ಅಮೆರಿಕದ ವರದಿಯನ್ನು ತಿರಸ್ಕರಿಸಿದ ಭಾರತ

ನವ ದೆಹಲಿ – ಭಾರತ ಸರಕಾರವು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವಿವಾದಾತ್ಮಕ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಇದರಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಘೋಷಿಸಲು, ಹಾಗೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ‘ರಿಸರ್ಚ ಆಂಡ್ ಅನಾಲಿಸಿಸ್ ವಿಂಗ್ (ರಾ)’ ಈ ಸಂಸ್ಥೆಗಳ ಮೇಲೆ ನಿಷೇಧ ಹೇರಲು ಶಿಫಾರಸು ಮಾಡಲಾಗಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ ಜೈಸ್ವಾಲ್ ಅವರು ಈ ವರದಿಯು ಪಕ್ಷಪಾತದಿಂದ ಕೂಡಿದೆ ಮತ್ತು ಉದ್ದೇಶಪೂರ್ವಕವಾಗಿದೆ ಎಂದು ಹೇಳುತ್ತಾ, ಅಮೆರಿಕವು ಭಾರತದ ಕಡೆಗೆ ಬೆರಳು ತೋರಿಸುವ ಬದಲು ತನ್ನ ದೇಶದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಗಳ ಕಡೆಗೆ ಮತ್ತು ಭಾರತೀಯರಿಗೆ ಸಿಗುತ್ತಿರುವ ಬೆದರಿಕೆಗಳ ಕಡೆಗೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

ಭಾರತವನ್ನು ‘ಸಂದೇಹಾಸ್ಪದ ಪಟ್ಟಿ’ಯಲ್ಲಿ ಸೇರಿಸಲು ಆಯೋಗದ ಬೇಡಿಕೆ

ಆಯೋಗದ ವರ್ಷ ೨೦೨೬ ರ ವಾರ್ಷಿಕ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ ಎಂದು ಪ್ರತಿಪಾದಿಸಲಾಗಿದೆ. ಆಯೋಗವು ಭಾರತವನ್ನು ‘ಸಂದೇಹಾಸ್ಪದ ಪಟ್ಟಿ’ಯಲ್ಲಿ ಸೇರಿಸಲು ಆಗ್ರಹಿಸಿದ್ದು, ಅಮೆರಿಕವು ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟವನ್ನು ನಿಲ್ಲಿಸಬೇಕು, ಹಾಗೆಯೇ ಸುರಕ್ಷಾ ಸಹಕಾರವನ್ನು ಧಾರ್ಮಿಕ ಸ್ವಾತಂತ್ರ್ಯದ ಷರತ್ತುಗಳೊಂದಿಗೆ ಜೋಡಿಸುವ ಬಗ್ಗೆ ವಿಚಾರ ಮಾಡಬೇಕು ಎಂದೂ ಹೇಳಿದೆ.

ವಿಶ್ವಾಸಾರ್ಹತೆ ಕಳೆದುಕೊಂಡವರಿಗೆ ನಮ್ಮ ವಿರುದ್ಧ ಮಾತನಾಡುವ ಅಧಿಕಾರವಿಲ್ಲ ! – ಭಾರತ

ಭಾರತವು ಇದರ ಮೇಲೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತಾ, ಈ ಆಯೋಗವು ಪದೇ ಪದೇ ಸಂದೇಹಾಸ್ಪದ ಮೂಲಗಳ ಆಧಾರದ ಮೇಲೆ ಭಾರತದ ಪ್ರತಿಷ್ಠೆಯನ್ನು ಮಲಿನಗೊಳಿಸುವ ಕೆಲಸವನ್ನು ಮಾಡುತ್ತದೆ . ಯಾರು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೋ, ಅಂತಹ ಸಂಸ್ಥೆಗೆ ಭಾರತದ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದು ಭಾರತವು ಸ್ಪಷ್ಟಪಡಿಸಿದೆ.
ಅಮೆರಿಕದಲ್ಲಿ ಹಿಂದೂಗಳು ಮತ್ತು ಭಾರತೀಯರು ಸುರಕ್ಷಿತರಿಲ್ಲ .

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನೂನಂತಹ ವ್ಯಕ್ತಿಗಳಿಗೆ ಆಶ್ರಯ ನೀಡುತ್ತಿರುವ ಅಮೆರಿಕದಲ್ಲಿ ಹಿಂದೂ ಸಮುದಾಯ ಮತ್ತು ಭಾರತೀಯರು ಸುರಕ್ಷಿತರಿಲ್ಲ ಎಂದು ಭಾರತವು ಸ್ಪಷ್ಟಪಡಿಸಿದೆ. ಎಲ್ಲಿಯವರೆಗೆ ಅಮೆರಿಕವು ತನ್ನ ದೇಶದಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆಯುವ ಹಿಂಸೆ ಮತ್ತು ದೇವಸ್ಥಾನಗಳ ಧ್ವಂಸವನ್ನು ತಡೆಯುವುದಿಲ್ಲವೋ, ಅಲ್ಲಿಯವರೆಗೆ ಭಾರತದ ಆಂತರಿಕ ವಿಷಯಗಳ ಮೇಲೆ ಮಾತನಾಡುವ ನೈತಿಕ ಅಧಿಕಾರ ಅದಕ್ಕಿಲ್ಲ.

ಅಮೆರಿಕದಲ್ಲಿನ ಹಿಂದೂಗಳ ಮಂದಿರಗಳ ಮೇಲಿನ ದಾಳಿಗಳ ಇತಿಹಾಸ

೧. ಕ್ಯಾಲಿಫೋರ್ನಿಯಾ ರಾಜ್ಯದ ನೆವಾರ್ಕ್‌ ನಲ್ಲಿ ಡಿಸೆಂಬರ್ ೨೦೨೩ ರಲ್ಲಿ ಶ್ರೀ ಸ್ವಾಮಿನಾರಾಯಣ ಮಂದಿರದ ಗೋಡೆಗಳ ಮೇಲೆ ಖಲಿಸ್ತಾನಿ ಬೆಂಬಲಿಗರು ಭಾರತ ವಿರೋಧಿ ಘೋಷಣೆ ಮತ್ತು ಮೃತ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್‌ ವಾಲೆಯ ಸಮರ್ಥನೆಯ ಚಿತ್ರವನ್ನು ಬಿಡಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರು.

೨. ಕ್ಯಾಲಿಫೋರ್ನಿಯಾದ ಹೇವರ್ಡ್‌ ನಲ್ಲಿ ಶ್ರೀ ಶೇರಾವಾಲಿಮಾತೆಯ ಮಂದಿರದ ಫಲಕದ ಮೇಲೆ ಕಪ್ಪು ಬಣ್ಣವನ್ನು ಹಾಕಿ ಪ್ರಧಾನಮಂತ್ರಿ ಮೋದಿಯವರ ವಿರುದ್ಧ ಅಪಶಬ್ದಗಳನ್ನು ಬರೆಯಲಾಯಿತು.

೩. ಇಂಡಿಯಾನಾ ರಾಜ್ಯದ ಶ್ರೀ ಸ್ವಾಮಿನಾರಾಯಣ ಮಂದಿರದ ಮೇಲೆ ಖಲಿಸ್ತಾನಿ ಬೆಂಬಲಿಗರು ಆಕ್ರಮಣ ಮಾಡಿ ಗೋಡೆಗಳ ಮೇಲೆ ‘ಹಿಂದೂಸ್ಥಾನ-ಮೋದಿ ಮುರ್ದಾಬಾದ್’ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು.

೪. ಮೇ ೨೦೨೧ ರಲ್ಲಿ ನ್ಯೂ ಜೆರ್ಸಿಯ ರಾಬಿನ್ಸವಿಲ್‌ ನಲ್ಲಿನ ದೇವಸ್ಥಾನದ ಮೇಲೆ ‘ಮಾನವ ಕಳ್ಳಸಾಗಣೆ ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆ ’ ಎಂದು ಗಂಭೀರ ಆರೋಪಗಳನ್ನು ಮಾಡುತ್ತಾ ದಾಳಿ ನಡೆಸಲಾಗಿತ್ತು; ಆದರೆ ಸುದೀರ್ಘ ತನಿಖೆಯ ನಂತರ ಅಮೆರಿಕದ ನ್ಯಾಯಾಂಗ ಇಲಾಖೆಗೆ ಯಾವುದೇ ಪುರಾವೆಗಳು ಸಿಗಲಿಲ್ಲ ಮತ್ತು ತನಿಖೆಯನ್ನು ಮುಕ್ತಾಯಗೊಳಿಸಿತು.

ಭಾರತೀಯ ಮೂಲದ ನಾಗರಿಕರ ಮೇಲಿನ ದಾಳಿಗಳು ಮತ್ತು ದ್ವೇಷ

೧. ದೇವಸ್ಥಾನಗಳ ಹೊರತಾಗಿ ಅಮೆರಿಕದಲ್ಲಿ ವಾಸಿಸುವ ಭಾರತೀಯ ಮತ್ತು ಸಿಖ್ ಸಮುದಾಯಗಳು ಕೂಡ ಹಿಂಸಾಚಾರವನ್ನು ಎದುರಿಸಬೇಕಾಗಿದೆ. ನ್ಯೂಯಾರ್ಕ್‌ ನ ಕ್ವೀನ್ಸ್ ಪ್ರದೇಶದಲ್ಲಿ ೬೬ ವರ್ಷದ ಜಸ್ಮೇರ್ ಸಿಂಗ್ ಅವರನ್ನು ರಸ್ತೆ ಅಪಘಾತದ ನಂತರ ಗಿಲ್ಬರ್ಟ್ ಆಗಸ್ಟೀನ್ ಎಂಬ ಹೆಸರಿನ ಯುವಕನು ಹಲ್ಲೆ ನಡೆಸಿ ಕೊಲೆ ಮಾಡಿದನು.

೨. ನ್ಯೂಯಾರ್ಕ್‌ ನಲ್ಲಿಯೇ ಹಿರಿಯ ನಿರ್ಮಲ್ ಸಿಂಗ್ ಮತ್ತು ಇತರ ೨ ಸಿಖ್ ವ್ಯಕ್ತಿಗಳ ಮೇಲೆ ಕೋಲುಗಳಿಂದ ಆಕ್ರಮಣ ಮಾಡಿ ಅವರ ಪಗಡಿಯನ್ನು ತೆಗೆಯಲಾಯಿತು.

೩. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ ನಲ್ಲಿ ಕೃಷ್ಣನ್ ಜಯರಾಮನ್ ಅವರಿಗೆ ಒಂದು ಉಪಹಾರಗೃಹದಲ್ಲಿ ಜನಾಂಗೀಯ ನಿಂದನೆ ಮಾಡಲಾಯಿತು ಮತ್ತು ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಲಾಯಿತು. ‘ನೀವು ಜನರು ಭಾರತವನ್ನು ನಾಶಮಾಡಿದ್ದೀರಿ. ನಂತರ ಈಗ ಅಮೆರಿಕವನ್ನು ನಾಶ ಮಾಡುತ್ತಿದ್ದೀರಿ’ ಎಂದು ಅವನು ಹೇಳಿದನು.