೪ ದೇಶಗಳಿಂದ ಭಾರತಕ್ಕೆ ಎಲ್.ಪಿ.ಜಿ. ಗ್ಯಾಸ್ ಬರುತ್ತಿದೆ!

ನವ ದೆಹಲಿ – ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಉಂಟಾಗಬಹುದಾದ ಎಲ್.ಪಿ.ಜಿ.ಯ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಆಸ್ಟ್ರೇಲಿಯಾ, ಕೆನಡಾ ಮತ್ತು ಅಲ್ಜೀರಿಯಾದಂತಹ ದೇಶಗಳಿಂದ ಎಲ್.ಎನ್.ಜಿ. ಮತ್ತು ಎಲ್.ಪಿ.ಜಿ.ಗಾಗಿ ಬೇಡಿಕೆ ಸಲ್ಲಿಸಿದ ನಂತರ, ಅಲ್ಲಿಂದ ಹೆಚ್ಚುವರಿ ದಾಸ್ತಾನು ಭಾರತಕ್ಕೆ ಬರಲಾರಂಭಿಸಿದೆ. ಭಾರತವು ಪ್ರಮುಖವಾಗಿ ಕತಾರ್ (ಶೇ. ೪೨%) ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ (ಶೇ. ೧೧%) ದೇಶಗಳಿಂದ ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ; ಆದರೆ ಯುದ್ಧದಿಂದಾಗಿ ಈ ಮಾರ್ಗಗಳಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆಯಿರುವುದರಿಂದ ಸರಕಾರ ಈ ದೇಶಗಳಿಂದ ಅನಿಲವನ್ನು ಆಮದು ಮಾಡಿಕೊಂಡಿದೆ. ಭಾರತೀಯ ರಿಫೈನರಿಗಳು ಎಲ್.ಪಿ.ಜಿ.ಯ ದೇಶೀಯ ಉತ್ಪಾದನೆಯಲ್ಲಿ ಶೇ. ೧೦% ರಷ್ಟು ಹೆಚ್ಚಳ ಮಾಡಿವೆ. ಇದರಿಂದಾಗಿ ಸಾಮಾನ್ಯ ನಾಗರಿಕರು ಅಡುಗೆ ಅನಿಲಕ್ಕಾಗಿ ಸಾಲಿನಲ್ಲಿ ನಿಲ್ಲುವ ಅಥವಾ ಕೊರತೆಯ ಭೀತಿ ಪಡುವ ಅವಶ್ಯಕತೆಯಿಲ್ಲ.

ಕೆನಡಾ ಭಾರತದ ಇಂಧನ ಬೇಡಿಕೆಯನ್ನು ಪೂರೈಸಬಲ್ಲದು ! – ಕೆನಡಾ ಪ್ರಧಾನಿ

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ತಮ್ಮ ಹೇಳಿಕೆಯಲ್ಲಿ ‘ನಮ್ಮ ದೇಶವು ಇಂಧನ ಕ್ಷೇತ್ರದಲ್ಲಿ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ಇಂಧನದ ಅಗತ್ಯವನ್ನು ಪೂರೈಸಲು ಪ್ರಮುಖ ಪಾತ್ರ ವಹಿಸಬಹುದು. ಭಾರತದಲ್ಲಿ ಇಂಧನದ ಬೇಡಿಕೆಯು ೨೦೪೦ ರ ವೇಳೆಗೆ ಸುಮಾರು ದುಪ್ಪಟ್ಟಾಗುವ ಅಂದಾಜಿದೆ ಮತ್ತು ಕೆನಡಾ ಇದಕ್ಕೆ ಭಾರತದ ವಿಶ್ವಾಸಾರ್ಹ ಪಾಲುದಾರನಾಗಬಹುದು’ ಎಂದು ಹೇಳಿದರು.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಸ್ಫೋಟಕಗಳನ್ನು ಹರಡುತ್ತಿದೆ ! : ಅಮೆರಿಕ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ಗೆ ಎಚ್ಚರಿಕೆ ನೀಡುತ್ತಾ, ‘ಒಂದು ವೇಳೆ ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕಗಳನ್ನು ಹರಡಿದ್ದರೆ, ಅವುಗಳನ್ನು ತಕ್ಷಣ ತೆರವುಗೊಳಿಸಬೇಕು. ಹಾಗೆ ಮಾಡದಿದ್ದರೆ, ಹಿಂದೆಂದೂ ಜಗತ್ತು ನೋಡಿರದಂತಹ ಸೈನಿಕ ಪರಿಣಾಮಗಳನ್ನು ಇರಾನ್ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಸೈನ್ಯವು ೧೬ ಸ್ಫೋಟಕಗಳೊಂದಿಗೆ ಇರಾನ್‌ ನ ೧೦ ಯುದ್ಧನೌಕೆಗಳನ್ನು ನಾಶಪಡಿಸಿದೆ.

ದುಬೈ ವಿಮಾನ ನಿಲ್ದಾಣದ ಸಮೀಪದ ಆಕ್ರಮಣದಲ್ಲಿ ಓರ್ವ ಭಾರತೀಯನಿಗೆ ಗಾಯ

ಇರಾನ್ ದುಬೈ ವಿಮಾನ ನಿಲ್ದಾಣದ ಸಮೀಪ ನಡೆಸಿದ ಆಕ್ರಮಣದಲ್ಲಿ ಘಾನಾದ ೨ ಮತ್ತು ಬಾಂಗ್ಲಾದೇಶದ ಓರ್ವ ನಾಗರಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಆದರೆ ಓರ್ವ ಭಾರತೀಯ ನಾಗರಿಕನಿಗೆ ಮಧ್ಯಮ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆಯ ನಂತರವೂ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಹಾರಾಟ ಸೇವೆ ಎಂದಿನಂತೆ ನಡೆಯುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ದುಬೈ ಆಡಳಿತ ಸ್ಪಷ್ಟಪಡಿಸಿದೆ.