|

ಬೀಜಿಂಗ್ (ಚೀನಾ) – ಭಾರತ ಮತ್ತು ಚೀನಾ ‘ನೆರೆಹೊರೆಯ ದೇಶಗಳು’ ಎಂಬಂತೆ ಸ್ನೇಹವನ್ನು ಕಾಪಾಡಿಕೊಳ್ಳಬೇಕು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಎರಡೂ ದೇಶಗಳು ಅಭಿವೃದ್ಧಿ ಮತ್ತು ಸಹಕಾರದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಭಾರತ ಮತ್ತು ಚೀನಾ ‘ಗ್ಲೋಬಲ್ ಸೌತ್’ನ (ಯುರೋಪ್ ಮತ್ತು ಉತ್ತರ ಅಮೆರಿಕಾ ಖಂಡಗಳ ಹೊರಗಿನ ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪು) ಪ್ರಮುಖ ದೇಶಗಳಾಗಿದ್ದು, ಇವೆರಡರ ನಡುವೆ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿವೆ. ಪರಸ್ಪರ ವಿಶ್ವಾಸ ಮತ್ತು ಸಹಕಾರದಿಂದ ಎರಡೂ ದೇಶಗಳ ಅಭಿವೃದ್ಧಿಗೆ ವೇಗ ಸಿಗಬಹುದು, ಆದರೆ ಸಂಘರ್ಷವು ಏಷ್ಯಾದ ಅಭಿವೃದ್ಧಿಗೆ ಹಾನಿಕರ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. ಚೀನಾದ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಆಯೋಜಿಸಲಾದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ವರ್ಷ ಭಾರತವು ‘ಬ್ರಿಕ್ಸ್’ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ. ಈಗ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರ್ಪಡೆಗೊಂಡಿವೆ) ಶೃಂಗಸಭೆಯ ಆತಿಥ್ಯ ವಹಿಸಲಿದ್ದರೆ, 2027 ರಲ್ಲಿ ಚೀನಾ ಈ ಸಭೆಯ ಆತಿಥ್ಯ ವಹಿಸಲಿದೆ.
ವಾಂಗ್ ಯಿ ತಮ್ಮ ಮಾತನ್ನು ಮುಂದುವರೆಸಿ, “2024 ರಲ್ಲಿ ರಷ್ಯಾದ ಕಜನ್ನಲ್ಲಿ ನಡೆದ ಸಭೆಯು ಎರಡೂ ದೇಶಗಳ ಸಂಬಂಧಕ್ಕೆ ಹೊಸ ಆರಂಭವನ್ನು ನೀಡಿತು, ನಂತರ ಟಿಯಾಂಜಿನ್ನಲ್ಲಿ ನಡೆದ ಚರ್ಚೆಗಳು ಸಂಬಂಧವನ್ನು ಮತ್ತಷ್ಟು ಸುಧಾರಿಸಲು ಸಹಾಯ ಮಾಡಿದವು. ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂವಾದ, ವ್ಯಾಪಾರ ಮತ್ತು ಜನರ ನಡುವಿನ ಸಂಪರ್ಕ ಹೆಚ್ಚಾಗಿದೆ. ದ್ವಿಪಕ್ಷೀಯ ವ್ಯಾಪಾರವು ಹೊಸ ದಾಖಲೆ ನಿರ್ಮಿಸಿದ್ದು, ಇದರ ನೇರ ಲಾಭ ಎರಡೂ ದೇಶಗಳ ಜನರಿಗೆ ಲಭಿಸಿದೆ. ಬ್ರಿಕ್ಸ್ ಶೃಂಗಸಭೆಯ ಆಯೋಜನೆಯಲ್ಲಿ ಎರಡೂ ದೇಶಗಳು ಪರಸ್ಪರ ಬೆಂಬಲ ನೀಡಬೇಕು,” ಎಂದರು.
ಲಡಾಖ್ನ ಡೋಕ್ಲಾಮ್ನಲ್ಲಿ ನಡೆದ ಸೈನಿಕ ಸಂಘರ್ಷದ ನಂತರ ಸುಮಾರು 5 ವರ್ಷಗಳ ಕಾಲ ಭಾರತ-ಚೀನಾ ಸಂಬಂಧ ತಣ್ಣಗಾಗಿತ್ತು; ಆದರೆ 2024 ರಲ್ಲಿ ಕಜನ್ನಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಶೀ. ಜಿನ್ಪಿಂಗ್ ಭೇಟಿಯಾದ ನಂತರ ಸಂಬಂಧಗಳನ್ನು ಸಹಜ ಸ್ಥಿತಿಗೆ ತರುವ ಪ್ರಕ್ರಿಯೆ ಆರಂಭವಾಯಿತು.
ಸಂಪಾದಕೀಯ ನಿಲುವು‘ಹಿಂದಿ-ಚೀನಿ ಭಾಯಿ ಭಾಯಿ’ ಎಂದು ಹೇಳುತ್ತಾ ಭಾರತದ ಮೇಲೆ ಆಕ್ರಮಣ ಮಾಡಿ, ಸಾವಿರಾರು ಚದರ ಕಿಲೋಮೀಟರ್ ಭೂಮಿಯನ್ನು ವಶಪಡಿಸಿಕೊಂಡ ಚೀನಾವನ್ನು ಯಾರು ತಾನೇ ನಂಬುತ್ತಾರೆ? ಚೀನಾ ಮೊದಲು ತಾನು ಪಾಲುದಾರ ಎಂಬುದನ್ನು ಕೃತಿಯಲ್ಲಿ ತೋರಿಸಿಕೊಡಲಿ, ನಂತರ ಮಾತನಾಡಲಿ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !