ಇಂದೂರ್ ಉಚ್ಚ ನ್ಯಾಯಾಲಯಕ್ಕೆ ೨,೧೦೦ ಪುಟಗಳ ವರದಿ ಸಲ್ಲಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆ – Bhojshala ASI Indore High Court

  • ಭೋಜಶಾಲಾ ಸರ್ವೇಕ್ಷಣೆ; ಹಿಂದೂ ಮಂದಿರವಿದ್ದ ಸ್ಥಳದಲ್ಲಿ ಕಮಲ್ ಮೌಲಾ ಮಸೀದಿ ನಿರ್ಮಿಸಿರುವುದು ಬಹಿರಂಗ

  • ಗಣೇಶ-ಬ್ರಹ್ಮ ಸೇರಿದಂತೆ ೯೪ ಮೂರ್ತಿಗಳು, ಸಂಸ್ಕೃತ ಭಾಷೆಯ ಶಿಲಾಶಾಸನಗಳು ಪತ್ತೆ!

ಇಂದೂರ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಧಾರಾ ಜಿಲ್ಲೆಯ ಭೋಜಶಾಲೆ ಸಂಕೀರ್ಣದಲ್ಲಿರುವ ಕಮಾಲ್ ಮೌಲಾ ಮಸೀದಿಗೆ ಸಂಬಂಧಿಸಿದಂತೆ ಫೆಬ್ರವರಿ ೨೪ ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವೈಜ್ಞಾನಿಕ ವರದಿಯನ್ನು ಇಂದೂರ್ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ವರದಿಯ ಪ್ರತಿಗಳನ್ನು ದೂರುದಾರರು, ಪಕ್ಷಕಾರರು ಮತ್ತು ಸರಕಾರಕ್ಕೆ ನೀಡಲಾಗಿದ್ದು, ಮುಂದಿನ ೨ ವಾರಗಳಲ್ಲಿ ಈ ವರದಿಯ ಬಗ್ಗೆ ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ದಾಖಲಿಸಲು ನ್ಯಾಯಾಲಯವು ಆದೇಶಿಸಿದೆ. ಕಮಾಲ್ ಮೌಲಾ ಮಸೀದಿಯನ್ನು ಪ್ರಾಚೀನ ದೇವಸ್ಥಾನಗಳ ಅವಶೇಷಗಳು, ವಾಸ್ತುಶಿಲ್ಪದ ಘಟಕಗಳು, ಶಿಲ್ಪಗಳು ಮತ್ತು ಶಿಲಾಶಾಸನಗಳ ತುಂಡುಗಳನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ಪ್ರಸ್ತುತ ಇರುವ ರಚನೆಯನ್ನು ಸಮತೋಲನ ಮತ್ತು ಸುಸಂಬದ್ಧ ಯೋಜನೆಯಿಲ್ಲದೆ ಹಲವು ಶತಮಾನಗಳ ನಂತರ ನಿರ್ಮಿಸಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

೧. ಫೆಬ್ರವರಿ ೨೩ ರಂದು ಈ ಪ್ರಕರಣದ ವಿಚಾರಣೆ ಇಂದೂರ್ ಉಚ್ಚ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಮೂರ್ತಿ ವಿಜಯ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ ಅವಸ್ಥಿ ಅವರ ಪೀಠವು, ೯೮ ದಿನಗಳಲ್ಲಿ ಸಿದ್ಧಪಡಿಸಲಾದ ೨,೧೦೦ ಪುಟಗಳ ಮತ್ತು ೧೦ ಸಂಪುಟಗಳ ವೈಜ್ಞಾನಿಕ ಸರ್ವೇಕ್ಷಣೆ ವರದಿಯನ್ನು ಮುಚ್ಚಿದ ಲಕೋಟೆಯಿಂದ ಈಗಾಗಲೇ ತೆರೆಯಲಾಗಿದ್ದು, ಅದರ ಪ್ರತಿಗಳನ್ನು ಎಲ್ಲಾ ಪಕ್ಷಗಳಿಗೆ ನೀಡಲಾಗಿದೆ ಎಂದು ತಿಳಿಸಿದೆ.

೨. ನ್ಯಾಯಾಲಯವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದ್ದು, ಪ್ರಸ್ತುತ ನಡೆಯುತ್ತಿರುವ ಪೂಜೆ ಮತ್ತು ನಮಾಜ್ ವ್ಯವಸ್ಥೆಯಲ್ಲಿ ಮುಂದಿನ ಆದೇಶದವರೆಗೆ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಂದಿನ ವಿಚಾರಣೆಯು ಮಾರ್ಚ್ ೧೬, ೨೦೨೬ ರಂದು ನಡೆಯಲಿದ್ದು, ಆಗ ಸಲ್ಲಿಕೆಯಾಗುವ ಆಕ್ಷೇಪಣೆ ಮತ್ತು ಸೂಚನೆಗಳನ್ನು ಕೂಡ ಪರಿಗಣಿಸಲಾಗುವುದು.

ಹಿಂದೆ ದೇವಸ್ಥಾನ ಶೈಲಿಯ ವಾಸ್ತುರಚನೆಯು ಅಸ್ತಿತ್ವದಲ್ಲಿದ್ದ ಬಗ್ಗೆ ಸಿಕ್ಕ ಪುರಾವೆಗಳು!

ಈ ವರದಿಯ ಪ್ರಕಾರ, ಪುರಾತತ್ವ ಇಲಾಖೆಯ ತಂಡವು ಒಟ್ಟು ೯೪ ಮೂರ್ತಿಗಳು ಮತ್ತು ಶಿಲ್ಪಗಳ ಅವಶೇಷಗಳನ್ನು ಪತ್ತೆಹಚ್ಚಿದ್ದು, ಅವುಗಳಲ್ಲಿ ಭಗವಾನ ಗಣೇಶ, ಬ್ರಹ್ಮ, ನರಸಿಂಹ, ಭೈರವ ಹಾಗೂ ವಿವಿಧ ಪ್ರಾಣಿಗಳ ಆಕೃತಿಗಳು ಸಿಕ್ಕಿವೆ. ಅನೇಕ ಶಿಲಾಖಂಡಗಳ ಮೇಲೆ ಸಂಸ್ಕೃತ ಭಾಷೆಯ ಶಿಲಾಶಾಸನಗಳು ಕಂಡುಬಂದಿದ್ದು, ಅವುಗಳು ೧೨ ರಿಂದ ೧೬ ನೇ ಶತಮಾನದವು ಎಂದು ನಂಬಲಾಗಿದೆ. ದೇವಸ್ಥಾನ ಶೈಲಿಯ ವಾಸ್ತುರಚನೆ ಮತ್ತು ಕಲೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಈ ಸಂಶೋಧನೆಗಳಿಂದ  ಸಂಕೇತ ಸಿಕ್ಕಿದೆ.

ಏನಿದು ವಿವಾದ?

ಭೋಜಶಾಲೆ ವಿವಾದವು ಅನೇಕ ವರ್ಷಗಳಿಂದ ಧಾರ್ಮಿಕ ಮತ್ತು ಐತಿಹಾಸಿಕವಾಗಿ ಸಂವೇದನಾಶೀಲ ವಿಷಯವಾಗಿದೆ. ಹಿಂದೂ ಸಮುದಾಯವು ಈ ಸ್ಥಳವನ್ನು ‘ಶ್ರೀ ವಾಗದೇವಿ ದೇವಸ್ಥಾನ’ ಎಂದು ಭಾವಿಸಿ ಪೂಜಿಸುತ್ತದೆ, ಆದರೆ ಮುಸಲ್ಮಾನ ಪಕ್ಷವು ಇದನ್ನು ಕಮಾಲ್ ಮೌಲಾ ಮಸೀದಿ ಎಂದು ಕರೆಯುತ್ತದೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ, ನ್ಯಾಯಾಲಯದ ಆದೇಶದಂತೆ ಪುರಾತತ್ವ ಇಲಾಖೆಯು ಇಲ್ಲಿ ಸರ್ವೇಕ್ಷಣೆ ನಡೆಸಿ ಈಗ ವರದಿಯನ್ನು ಸಲ್ಲಿಸಿದೆ.

ಸಂಪಾದಕೀಯ ನಿಲುವು

ಕೇವಲ ಭೋಜಶಾಲೆ ಮಾತ್ರವಲ್ಲ, ಭಾರತದಲ್ಲಿನ ಹಿಂದೂಗಳ ಅನೇಕ ಮಂದಿರಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಿ ಅಲ್ಲಿ ಮುಸಲ್ಮಾನ ಆಕ್ರಮಣಕಾರರು ಮಸೀದಿಗಳನ್ನು ನಿರ್ಮಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಅಂತಹ ಎಲ್ಲಾ ಸ್ಥಳಗಳ ಸರ್ವೇಕ್ಷಣೆ ನಡೆಸಿ, ಸತ್ಯವನ್ನು ಹೊರತಂದು ಈ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಅವಶ್ಯಕವಾಗಿದೆ!