ಅನಧಿಕೃತ ಮದರಸಾಗಳನ್ನು ಮುಚ್ಚಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ; ಆದರೆ ಸರಕಾರಿ ಅನುದಾನವನ್ನು ನಿರಾಕರಿಸಬಹುದು! – ಅಲಹಾಬಾದ್ ಉಚ್ಚ ನ್ಯಾಯಾಲಯ

ಪ್ರಯಾಗರಾಜ್ (ಉತ್ತರ ಪ್ರದೇಶ) – ಉತ್ತರ ಪ್ರದೇಶದಲ್ಲಿ ಅನಧಿಕೃತವಾಗಿರುವ ಮದರಸಾಗಳಿಗೆ ಅನುದಾನ ನೀಡಲು ರಾಜ್ಯ ಸರಕಾರವು ನಿರಾಕರಿಸಬಹುದು; ಆದರೆ ಅವುಗಳ ಕಾರ್ಯಚಟುವಟಿಕೆಯನ್ನು ನಿಲ್ಲಿಸುವ ಕಾನೂನಾತ್ಮಕ ಅಧಿಕಾರ ಸರಕಾರಕ್ಕಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ.

ಶ್ರಾವಸ್ತಿ ಜಿಲ್ಲೆಯ ‘ಮದರಸಾ ಅಹ್ಲೆ ಸುನ್ನತ್ ಇಮಾಮ್ ಅಹ್ಮದ್ ರಜಾ’ ಎಂಬ ಮದರಸಾಗೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಯು, ‘ನಿಮ್ಮ ಮದರಸಾ ಅನಧಿಕೃತವಾಗಿದ್ದು, ಕೂಡಲೇ ಅದರ ಕಾರ್ಯಚಟುವಟಿಕೆಯನ್ನು ನಿಲ್ಲಿಸಬೇಕು’ ಎಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮದರಸಾ ಆಡಳಿತ ಮಂಡಳಿಯು ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ಧಾರ ಪ್ರಕಟಿಸಿದೆ.

ನ್ಯಾಯಾಲಯದ ತೀರ್ಪಿನಲ್ಲಿ ಏನಿದೆ?

ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ೨೦೧೬ ರ ನಿಯಮಾವಳಿಯ ಪ್ರಕಾರ, ಮದರಸಾಗಳಿಗೆ ಕೇವಲ ಸರಕಾರಿ ಅನುದಾನವನ್ನು ನಿರಾಕರಿಸಲು ಮಾತ್ರ ಅವಕಾಶವಿದೆ. ಆದರೆ ಮಾನ್ಯತೆ ಇಲ್ಲ ಎಂಬ ಕಾರಣ ನೀಡಿ ಮದರಸಾವನ್ನು ಮುಚ್ಚಲು ನಿಯಮಾವಳಿಯಲ್ಲಿ ಯಾವುದೇ ಅವಕಾಶವಿಲ್ಲ. ಆದ್ದರಿಂದ ಇಂತಹ ಸಂಸ್ಥೆಗಳ ಶೈಕ್ಷಣಿಕ ಕಾರ್ಯಚಟುವಟಿಕೆಯನ್ನು ತಡೆಯುವ ಅಧಿಕಾರ ಸರಕಾರಕ್ಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.