ಚೈನೀಸ್ ಮಾಂಜಾ (ನೂಲು)ದಿಂದ ಸಾವು ಸಂಭವಿಸಿದರೆ ‘ಅಪರಾಧಯುತ ಮಾನವಹತ್ಯೆ’ ಪ್ರಕರಣ ದಾಖಲಿಸಲಾಗುವುದು!

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಆದೇಶ

ಇಂದೋರ್ (ಮಧ್ಯಪ್ರದೇಶ) – ಚೀನಾದ ಮಾಂಜಾ ಮೇಲೆ ನಿಷೇಧವಿದ್ದರೂ ಸತತವಾಗಿ ಪ್ರಾಣಾಪಾಯದ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಮತ್ತು ಇದನ್ನು ತಡೆಯಲು ಕಠಿಣ ಕ್ರಮ ಅಗತ್ಯವಿದೆ. ಈ ಮಾಂಜಾದಿಂದ ಯಾರಾದರೂ ಮೃತಪಟ್ಟರೆ, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಲಂ ೧೦೬(೧) ರ ಅಡಿಯಲ್ಲಿ ಅಪರಾಧಯುತ ಮಾನವಹತ್ಯೆ ಪ್ರಕರಣವನ್ನು ದಾಖಲಿಸಲಾಗುವುದೆಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಆದೇಶಿಸಿದೆ.

ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು!

ಯಾವುದೇ ವ್ಯಕ್ತಿ ಚೀನಾ ಮಾಂಜಾ ಮಾರಾಟ ಮಾಡುವಾಗ ಅಥವಾ ಬಳಸುವಾಗ ಸಿಲುಕಿಕೊಂಡರೆ, ಅವರ ವಿರುದ್ಧ ನೇರ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಉಚ್ಚ ನ್ಯಾಯಾಲಯ ಹೇಳಿದೆ. ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳು ಚೀನಾ ಮಾಂಜಾ ಬಳಸುವಾಗ ಬಂಧಿಸಿದರೆ, ಪೋಷಕರನ್ನು ಜವಾಬ್ದಾರರನ್ನಾಗಿಸಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು.

ಕಳೆದ ಕೆಲವು ತಿಂಗಳಲ್ಲಿ ಇಂದೋರ್‌ನಲ್ಲಿ ಚೀನಾ ಮಾಂಜಾದಿಂದಾಗಿ ೩ ಜನರು ಸಾವನ್ನಪ್ಪಿದ್ದಾರೆ ಎಂದು ನ್ಯಾಯಾಲಯವು ತಿಳಿಸಿದೆ. ಇದಲ್ಲದೆ ಅನೇಕ ಜನರು ಗಾಯಗೊಂಡಿದ್ದಾರೆ ಮತ್ತು ಹೆಚ್ಚಿನದಾಗಿ ಪಕ್ಷಿಗಳು ಸಹ ಇದರ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿವೆ. ಜನವರಿ ೧೪ ರಂದು ಮಕರ ಸಂಕ್ರಾಂತಿ ಇದ್ದು ಈ ಹಬ್ಬದ ಸಮಯದಲ್ಲಿ ಗಾಳಿಪಟ ಹಾರಿಸುವ ಪ್ರಮಾಣ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ನಿಷೇಧಿತ ಮಾಂಜಾದ ಬಳಕೆಯಿಂದ ಗಂಭೀರ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ! – ಮಧ್ಯಪ್ರದೇಶ ಸರಕಾರ

ಚೀನಾ ಮಾಂಜಾ ನಿಷೇಧಿಸುವುದರ ಜೊತೆಗೆ ಅದರ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಜನಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಮಧ್ಯಪ್ರದೇಶ ಸರಕಾರ ಹೇಳಿದೆ. ಮಾರಾಟ ನಿಲ್ಲಿಸುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಅಪಘಾತಗಳನ್ನು ತಡೆಗಟ್ಟಲು ವಿಶೇಷ ಸಾಧನಗಳನ್ನು ಸಹ ಬಳಸಲಾಗುತ್ತಿದೆ.

ಸಂಪಾದಕೀಯ ನಿಲುವು

ಚೀನಾದ ಮಾಂಜಾ ಮೇಲೆ ನಿಷೇಧವಿದ್ದರೂ ಎಲ್ಲೆಡೆ ಮಾರಾಟವಾಗುತ್ತಿದೆ ಮತ್ತು ಬಳಕೆ ಮಾಡಲಾಗುತ್ತಿದೆ, ಇದು ಪೊಲೀಸ್ ಮತ್ತು ಸರ್ಕಾರಕ್ಕೆ ಲಜ್ಯಾಸ್ಪದ! ಅಂತಹ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು!