ಅರುಣಾಚಲ ಪ್ರದೇಶ: ಕಳೆದ ೧೦ ದಿನಗಳಲ್ಲಿ ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸುತ್ತಿದ್ದ ೪ ಮಂದಿಯ ಬಂಧನ !

ಪಾಕಿಸ್ತಾನ ಮತ್ತು ಚೀನಾಗಾಗಿ ಗೂಢಚಾರಿಕೆ ನಡೆಸುವ ಜಾಲ ಸಕ್ರಿಯವಾಗಿರುವ ಮಾಹಿತಿ

ಇಟಾನಗರ (ಅರುಣಾಚಲ ಪ್ರದೇಶ) – ರಾಜ್ಯದ ಪೊಲೀಸರು ಕಳೆದ ೧೦ ದಿನಗಳಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಗೂಢಚಾರಿಕೆ ಜಾಲಕ್ಕೆ ಸೇರಿದ ೪ ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸೈನಿಕರ ಚಲನವಲನಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್‌ ಗಳಿಗೆ ರವಾನಿಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಈ ಜಾಲವು ಚೀನಾದೊಂದಿಗೂ ಸಂಬಂಧ ಹೊಂದಿರುವ ಸುಳಿವು ಸಿಕ್ಕಿದೆ. ಮತ್ತೊಂದೆಡೆ, ನೈಜ ನಿಯಂತ್ರಣ ರೇಖೆಯ ಸಮೀಪ ಚೀನಾ ಸೈನಿಕರ ಉಪಸ್ಥಿತಿ ಮತ್ತು ಸಂಭವನೀಯ ನುಸುಳುವಿಕೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗೂಢಚಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ರಾಜ್ಯದ ಗೃಹ ಸಚಿವ ಮಾಮಾ ನಾತುಂಗ್ ಅವರು ತಿಳಿಸಿದ್ದಾರೆ.

೧. ಇಟಾನಗರದಿಂದ ಡಿಸೆಂಬರ್ ೧೧ ರಂದು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ನಜೀರ್ ಅಹ್ಮದ್ ಮಲಿಕ್ ಮತ್ತು ಸಬೀರ್ ಅಹ್ಮದ್ ಮೀರ್ ಎಂಬುವವರನ್ನು ಬಂಧಿಸಲಾಗಿದೆ. ಅವರಿಬ್ಬರೂ ಕಂಬಳಿ ಮಾರಾಟಗಾರರಂತೆ ಸಂಚರಿಸುತ್ತಿದ್ದರು ಮತ್ತು ‘ಟೆಲಿಗ್ರಾಮ್’ ಚಾನೆಲ್ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದರು. ಅಕ್ರಮ ವಲಸೆಗೆ ಸಹಾಯ ಮಾಡಲು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಲು ಈ ಆರೋಪಿಗಳಿಗೆ ನಿರ್ದೇಶನಗಳು ಸಿಕ್ಕಿರುವುದು ಬೆಳಕಿಗೆ ಬಂದಿದೆ.

೨. ಡಿಸೆಂಬರ್ ೧೩ ರಂದು ಕಾಶ್ಮೀರದ ಇನ್ನಿಬ್ಬರು ಯುವಕರನ್ನು ಬಂಧಿಸಲಾಯಿತು. ಈ ಜಾಲವು ಆಸ್ಸಾಂವರೆಗೆ ಹರಡಿರುವ ಸುಳಿವು ಸಿಕ್ಕಿದೆ. ಗೂಢಚಾರಿಕೆ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ತೇಜಪುರದಿಂದ ಬಂಧಿಸಲಾದ ವಾಯುಸೇನೆಯ ನಿವೃತ್ತ ಅಧಿಕಾರಿ ಕುಲೇಂದ್ರ ಶರ್ಮಾ ಅವರನ್ನೂ ಇದೇ ಜಾಲದೊಂದಿಗೆ ಜೋಡಿಸಿ ನೋಡಲಾಗುತ್ತಿದೆ. ಆಸ್ಸಾಂ ಮತ್ತು ಈಶಾನ್ಯದ ಇತರ ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

೩. ಬಂಧಿತ ಶಂಕಿತರು ಸ್ಥಳೀಯ ಮುಸಲ್ಮಾನ ಸಮುದಾಯಗಳಲ್ಲಿ ಬೆರೆತು ‘ಸ್ಲೀಪರ್ ಸೆಲ್’ (ರಹಸ್ಯವಾಗಿ ಭಯೋತ್ಪಾದಕರಿಗೆ ಸಹಾಯ ಮಾಡುವ ಮತಾಂಧರ ಸ್ಥಳೀಯ ಗುಂಪುಗಳು) ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರು. ಕೆಲವು ಬಾಂಗ್ಲಾದೇಶಿ ಯುವಕರ ಪಾತ್ರವೂ ಸಂಶಯಾಸ್ಪದವಾಗಿದೆ ಎಂದು ಪರಿಗಣಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ.