ಡರ್ಬನ (ದಕ್ಷಿಣ ಆಫ್ರಿಕಾ)ಇಲ್ಲಿ ಶ್ರೀ ಅನ್ನಪೂರ್ಣಾದೇವಿ ದೇವಸ್ಥಾನದ ಉದ್ಘಾಟನೆ

ಪ್ರಧಾನಿ ಮೋದಿ ಅವರಿಂದ ದೇವಸ್ಥಾನಕ್ಕೆ ‘ಅಷ್ಟಲಕ್ಷ್ಮಿ ಕಲಶ’ದ ಉಡುಗೊರೆ!

ಸ್ವಾಮಿ ಅಭೇದಾನಂದ ಸರಸ್ವತಿ ದೇವಸ್ಥಾನದ ಕಳಸ ಪೂಜೆ ಮಾಡುವಾಗ

ಡರ್ಬನ್ (ದಕ್ಷಿಣ ಆಫ್ರಿಕಾ) – ಚಿನ್ಮಯ ಮಿಷನ್ನಿನ ದಕ್ಷಿಣ ಆಫ್ರಿಕಾದ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಅಭೇದಾನಂದ ಸರಸ್ವತಿಯವರು ಡರ್ಬನ್ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಅನ್ನಪೂರ್ಣಾದೇವಿ ದೇವಸ್ಥಾನವನ್ನು ಉದ್ಘಾಟಿಸಿದರು. ಭಾರತೀಯ ಉಪಖಂಡದ ಹೊರಗೆ ಜಗತ್ತಿನಲ್ಲಿಯೇ ಸ್ಥಾಪನೆಯಾದ ಮೊದಲ ಶ್ರೀ ಅನ್ನಪೂರ್ಣಾದೇವಿ ದೇವಸ್ಥಾನವಾಗಿದೆ. ಡಿಸೆಂಬರ್ ೧ ರಂದು ‘ಮೋಕ್ಷದಾ ಏಕಾದಶಿ’ಯ ಶುಭ ದಿನದಂದು ಸುಮಾರು ೪ ಸಾವಿರ ಭಕ್ತರ ಉಪಸ್ಥಿತಿಯಲ್ಲಿ ಈ ಮಂದಿರದ ಉದ್ಘಾಟನೆ ನೆರವೇರಿತು. ನವೆಂಬರ್ ೨೧ ರಂದು ಜೋಹಾನ್ಸ್ ಬರ್ಗ್‌ನಲ್ಲಿ ನಡೆದ ಜಿ-೨೦ (ಕೆನಡಾ, ಅಮೇರಿಕಾ, ಮೆಕ್ಸಿಕೋ, ಅರ್ಜೆಂಟೈನಾ, ಬ್ರಾಜಿಲ್, ರಷ್ಯಾ, ಫ್ರಾನ್ಸ್, ಯುಕೆ, ಜರ್ಮನಿ, ಇಟಲಿ. ತುರ್ಕಿ, ದಕ್ಷಿಣ ಆಫ್ರಿಕ, ಸೌದಿ ಅರೇಬಿಯಾ, ಭಾರತ, ಚೀನಾ, ದಕ್ಷಿಣ ಕೋರಿಯಾ, ಜಪಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ ಹಾಗೂ ಯುರೋಪಿಯನ್ ಯುನಿಯನ್‌ಗಳ ಸಮೂಹ) ನಾಯಕರ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ಅಭೇದಾನಂದರನ್ನು ಭೇಟಿಯಾಗಿ ಸಂವಾದ ನಡೆಸಿದ್ದರು. ಆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಮಂದಿರಕ್ಕೆ ಪವಿತ್ರವಾದ ‘ಅಷ್ಟಲಕ್ಷ್ಮಿ ಕಲಶ’ವನ್ನು ಉಡುಗೊರೆಯಾಗಿ ನೀಡಿದ್ದರು.

ಶ್ರೀ ಅನ್ನಪೂರ್ಣೇಶ್ವರೀ ದೇವಿ

 

ಶ್ರೀ ಅನ್ನಪೂರ್ಣಾದೇವಿಯ ಪ್ರಾಣಪ್ರತಿಷ್ಠೆಯನ್ನು ಮಾಡುವಾಗ ಸ್ವಾಮಿ ಅಭೇದಾನಂದ ಸರಸ್ವತಿ

ದಕ್ಷಿಣ ಆಫ್ರಿಕಾದಲ್ಲಿ ಶ್ರೀ ಅನ್ನಪೂರ್ಣಾದೇವಿ ದೇವಸ್ಥಾನ ಸ್ಥಾಪನೆಯ ಉದ್ದೇಶ

ಸ್ವಾಮಿ ಅಭೇದಾನಂದ ಸರಸ್ವತಿ

೧. ಶ್ರೀ ಅನ್ನಪೂರ್ಣಾದೇವಿಯ ಪೋಷಣಾ ಶಕ್ತಿಯನ್ನು ಆವಾಹನೆ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಸ್ಥಳೀಯ ಸಮುದಾಯಗಳಲ್ಲಿನ ಹಸಿವೆಯನ್ನು ನೀಗಿಸುವುದು ಮತ್ತು ಅವರ ಅಭಿವೃದ್ಧಿಯನ್ನು ಸಾಧಿಸುವುದು ಈ ಮಂದಿರದ ಮುಖ್ಯ ಉದ್ದೇಶವಾಗಿದೆ.

೨. ‘ಚಿನ್ಮಯ ಮಿಷನ್’ ಅಕ್ಟೋಬರ್ ೨೦೨೪ ರಿಂದ ದಕ್ಷಿಣ ಆಫ್ರಿಕಾದಲ್ಲಿ `ನರಿಶ ಟು ಫ್ಲರಿಶ’ (ಸಮೃದ್ಧಿಗಾಗಿ ಪೋಷಣೆ) ಈ ಪ್ರಮುಖ ಸಾಮಾಜಿಕ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಮೂಲಕ ಡರ್ಬನ್‌ನ ಸುಮಾರು ೨ ಲಕ್ಷ ೫೦ ಸಾವಿರ ಬಡವರಿಗೆ ಮತ್ತು ಶಾಲಾ ಮಕ್ಕಳಿಗೆ ಈಗಾಗಲೇ ಉಚಿತ ಭೋಜನ ನೀಡಲಾಗಿದೆ.

೩. ಈ ಯೋಜನೆಯಡಿ ಪ್ರತಿದಿನ ೨ ಸಾವಿರ ಜನರಿಗೆ ಪೌಷ್ಟಿಕಾಹಾರವನ್ನು ಉಚಿತವಾಗಿ ನೀಡಲಾಗುತ್ತಿದೆ. ಡರ್ಬನ್ ನಲ್ಲಿರುವ ‘ಚಿನ್ಮಯ ಅನ್ನಪೂರ್ಣ ಆಶ್ರಮ’ದ ಅತ್ಯಾಧುನಿಕ ಬೃಹತ್ ಕೈಗಾರಿಕಾ ಅಡುಗೆ ಮನೆಯಲ್ಲಿ ಈ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

೪. ಈ ಯೋಜನೆಗೆ ಶ್ರೀ ಅನ್ನಪೂರ್ಣಾದೇವಿಯ ಆಶೀರ್ವಾದ ಸಿಗಲೆಂದು ಸ್ವಾಮಿ ಅಭೇದಾನಂದರಿಗೆ ಈ ಮಂದಿರದ ಕಲ್ಪನೆ ಮೂಡಿತ್ತು.

ಸ್ವಾಮಿ ಅಭೇದಾನಂದರ ದಿವ್ಯ ದೃಷ್ಟಿ

ಆಗಸ್ಟ್ ೨೦೨೩ ರಲ್ಲಿ ಚಿನ್ಮಯ ಮಿಷನ್ ಆಶ್ರಮದ ಆಧುನಿಕ ಅಡುಗೆ ಮನೆಯ ಭೂಮಿ ಪೂಜೆ ನಡೆದಾಗ ಸ್ವಾಮಿ ಅಭೇದಾನಂದರು, ‘ಶ್ರೀ ಅನ್ನಪೂರ್ಣಾದೇವಿಯು ಇಲ್ಲಿ ಕೈಯಲ್ಲಿ ಅನ್ನದ ಸೌಟು ಹಿಡಿದು ಕುಳಿತು ಲಕ್ಷಾಂತರ ಜನರಿಗೆ ಭೋಜನ ನೀಡಲಿದ್ದಾಳೆ. ಕೇವಲ ೨-೩ ವರ್ಷಗಳಲ್ಲಿ ಅವಳ ಲೀಲೆಯನ್ನು ನೀವೇ ನೋಡುತ್ತೀರಿ!’, ಎಂದು ಭವಿಷ್ಯ ನುಡಿದಿದ್ದರು. ಇಂದು ಕೇವಲ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಾವಿರಾರು ಜನರಿಗೆ ಈ ಅಡುಗೆ ಮನೆಯ ಮೂಲಕ ಅನ್ನದಾನ ಮಾಡಲಾಗುತ್ತಿದೆ. ‘ಸ್ವಾಮೀಜಿಯವರ ಪವಿತ್ರ ಭವಿಷ್ಯವಾಣಿಯನ್ನು ಪೂರೈಸಲೆಂದೇ ಶ್ರೀ ಅನ್ನಪೂರ್ಣಾದೇವಿಯು ಕಾಶಿಯ ಗಂಗಾ ನದಿಯ ದಡದಿಂದ ದಕ್ಷಿಣ ಆಫ್ರಿಕಾದ ಡರ್ಬನ್ ತೀರಕ್ಕೆ ಅವತರಿಸಿದ್ದಾಳೆ’, ಎಂದು ಚಿನ್ಮಯ ಮಿಶನ್‌ನ ಭಕ್ತರು ನಂಬುತ್ತಾರೆ.