ವಿಕಸಿತ ಭಾರತಕ್ಕಾಗಿ ಆಧ್ಯಾತ್ಮ, ರಾಷ್ಟ್ರಸೇವೆ ಮತ್ತು ಅಭಿವೃದ್ಧಿಯ ಸಮನ್ವಯ ಅತ್ಯಗತ್ಯ! – ಪ್ರಧಾನಿ ನರೇಂದ್ರ ಮೋದಿ

  • ಪರ್ತಗಾಳಿ ಮಠದ 550ನೇ ವರ್ಧಂತ್ಯೋತ್ಸವದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ

  • ಶ್ರೀರಾಮನ 77 ಅಡಿ ಎತ್ತರದ ಕಂಚಿನ ಲೋಹದ ಮೂರ್ತಿಯ ಅನಾವರಣ

ಕಾನಕೋಣ (ಗೋವಾ), ನವೆಂಬರ್ 28 (ವರದಿ) – ಗೋವಾದ ದೇವಸ್ಥಾನಗಳು, ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಅನೇಕ ಬಾರಿ ಆಕ್ರಮಣಗಳಾಗಿದ್ದರೂ, ಈ ಸಂಕಷ್ಟಗಳನ್ನು ಎದುರಿಸಿ ಗೋವಾ ಜನರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಶಕ್ತಿಯ ಮೂಲವಾಗಿದ್ದು, ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಈ ಮಠವು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿಕೊಂಡು, ಸಮಾಜವನ್ನು ವಿನಮ್ರತೆ, ಸೇವೆ ಮತ್ತು ಸಂಸ್ಕಾರಗಳ ಮೂಲಕ ಜೋಡಿಸಿದೆ.

ಮಠವು ಪ್ರತಿ ಸಮಾಜದ ವರ್ಗಕ್ಕೂ ಆಶ್ರಯ ನೀಡಿದೆ. ಗೋವಾ ಕಷ್ಟದ ಸಮಯದಲ್ಲಿ ಇದ್ದಾಗ, ಮಠವು ಜನರಿಗೆ ಸಹಾಯ ಮಾಡಿದೆ.

ಗೋವಾ ಒಂದು ಆಧ್ಯಾತ್ಮಿಕ ಶಕ್ತಿ ಮತ್ತು ಭಾರತದ ದಕ್ಷಿಣ ಕಾಶಿ ಆಗಿದೆ. ‘ವಿಕಸಿತ ಭಾರತ 2047’ ರ ಕನಸನ್ನು ಸಾಕಾರಗೊಳಿಸಲು ಆಧ್ಯಾತ್ಮ, ರಾಷ್ಟ್ರಸೇವೆ ಮತ್ತು ಅಭಿವೃದ್ಧಿ ಈ ಮೂರೂ ವಿಷಯಗಳ ಸಮನ್ವಯವು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಇದಕ್ಕೂ ಮೊದಲು, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಧಂತ್ಯೋತ್ಸವದ ನಿಮಿತ್ತ, ಪ್ರಧಾನಿ ನರೇಂದ್ರ ಮೋದಿಯವರ ಹಸ್ತದಿಂದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಲೋಹದ ಭವ್ಯ ಮೂರ್ತಿಯನ್ನು ಅನಾವರಣಗೊಳಿಸಿದರು.

ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಧ್ಯಾತ್ಮ, ಇತಿಹಾಸ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ವೇದಿಕೆಯ ಮೇಲೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ರಾಜ್ಯಪಾಲ ಪುಸಾಪತಿ ಅಶೋಕ ಗಜಪತಿ ರಾಜು, ಕೇಂದ್ರ ರಾಜ್ಯ ಸಚಿವ ಶ್ರೀಪಾದ ನಾಯಕ್, ಲೋಕೋಪಯೋಗಿ ಸಚಿವ ದಿಗಂಬರ ಕಾಮತ್, ಕ್ರೀಡಾ ಸಚಿವ ರಮೇಶ ತವಡಕರ, ಮಠದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ ಧೇಂಪೋ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಠದ ಅಧ್ಯಕ್ಷ ಶ್ರೀನಿವಾಸ ಧೇಂಪೋ ಸ್ವಾಗತಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಠದ 550ನೇ ವರ್ಷಾಚರಣೆಯ ನಿಮಿತ್ತ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಮಠದ ಆವರಣವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾತು ಮುಂದುವರೆಸಿ,

“ಬದಲಾದ ಪರಿಸ್ಥಿತಿಯಲ್ಲಿ ಪರ್ತಗಾಳಿ ಮಠವು ತನ್ನ ಸೇವಾಕಾರ್ಯವನ್ನು ಮುಂದುವರೆಸುತ್ತಾ, ಅದರ ದಿಕ್ಕನ್ನು ಬದಲಾಯಿಸಿಲ್ಲ. ಬದಲಾಗಿ, ಮಠವು ಜನರಿಗೆ ಸರಿಯಾದ ದಿಕ್ಕನ್ನು ತೋರಿಸುವ ಕೆಲಸ ಮಾಡಿದೆ. ಗೋವಾದ ಭೂಮಿ ನನ್ನ ಜೀವನದಲ್ಲಿ ಒಂದು ತಿರುವನ್ನು ತಂದ ಭೂಮಿ. ಗೋವಾದ ಭೂಮಿ ನನ್ನನ್ನು ಈ ಸ್ಥಾನದವರೆಗೆ ತಲುಪಿಸಿದೆ. ಗೋವಾ ತಲಾವಾರು ಆದಾಯ, ಪ್ರವಾಸೋದ್ಯಮ ಕ್ಷೇತ್ರ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದೆ. ಗೋವಾದ ಪವಿತ್ರ ಭೂಮಿಗೆ ಶತಮಾನಗಳ ಆಧ್ಯಾತ್ಮಿಕ ಪರಂಪರೆ ಇದೆ. ವಿಕಸಿತ ಭಾರತದ ಹಾದಿ ಏಕತೆಯ ಮೂಲಕ ಸಾಗುತ್ತದೆ. ಪ್ರವಾಸೋದ್ಯಮದ ಪ್ರಮುಖ ಭಾಗವಾಗಿರುವ ಗೋವಾ ರಾಜ್ಯ ಮತ್ತು ಆಧ್ಯಾತ್ಮಿಕ ಕಾರ್ಯ ಮಾಡುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠವು ‘ವಿಕಸಿತ ಭಾರತ 2047’ ರ ಗುರಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ,” ಎಂದರು.

ಮಠವು ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರೆಸಿದೆ! – ಮುಖ್ಯಮಂತ್ರಿ ಪ್ರಮೋದ ಸಾವಂತ್

ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರು ಮಾತನಾಡಿ, “ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು 550 ವರ್ಷಗಳ ಕಾಲ ಹಿಂದೂ ಧರ್ಮಕ್ಕಾಗಿ ಕಾರ್ಯ ಮಾಡಿದೆ. ಈ ಮೊದಲು ಗೋವಾವನ್ನು ಅನೇಕರು ಆಳಿದ್ದಾರೆ. ಇವರಲ್ಲಿ ಕೆಲವರು ಇಲ್ಲಿನ ಸಂಸ್ಕೃತಿ ಮತ್ತು ದೇವಸ್ಥಾನಗಳನ್ನು ನಾಶ ಮಾಡಲು ಪ್ರಯತ್ನಿಸಿದರು, ಆದರೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಮೂಲಕ ಮಠವು ಧರ್ಮರಕ್ಷಣೆಯ ಕೆಲಸ ಮಾಡಿದೆ.

ಮಠವು ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರೆಸಿದೆ. 550 ಕೋಟಿ ಶ್ರೀರಾಮ ನಾಮಜಪ ಮಾಡಿದ ಭಕ್ತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ದಕ್ಷಿಣ ಅಯೋಧ್ಯೆ ಎನಿಸಿರುವ ಪರ್ತಗಾಳಿ ಮಠ ಇಂದು ಅಭಿನಂದನೆಗೆ ಪಾತ್ರವಾಗಿದೆ. ಮಠದ ಸಂಸ್ಕೃತಿ, ಭಜನೆ ಸಂಸ್ಕೃತಿ, ವಾರಿಯ ಪರಂಪರೆ ಇರುವ ಗೋವಾ ಒಂದು ಆಧ್ಯಾತ್ಮಿಕ ಕೇಂದ್ರ ಎಂದು ತೋರಿಸುತ್ತದೆ. ಗೋವಾದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಯನ್ನು ಮುಂದೆ ಕೊಂಡೊಯ್ಯುವ ಕೆಲಸವನ್ನು ಗೋವಾ ಸರಕಾರ ಮಾಡುತ್ತಿದೆ. ಗೋವಾ ಪರಶುರಾಮ ಭೂಮಿಯಾಗಿದೆ. ನಾರ್ವೆ, ಡಿಚೋಲಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕಟ್ಟಿಸಿದ ಶ್ರೀ ಸಪ್ತಕೋಟೇಶ್ವರ ದೇವಸ್ಥಾನವನ್ನು ಗೋವಾ ಸರಕಾರ ಜೀರ್ಣೋದ್ಧಾರ ಮಾಡಿದೆ. ಪೋರ್ಚುಗೀಸರು ಗೋವಾದ 1 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ನಾಶ ಮಾಡಿದರು. ಈ ದೇವಸ್ಥಾನಗಳ ಮರುನಿರ್ಮಾಣಕ್ಕೆ ಒಂದು ಪ್ರತಿಕೃತಿಯಾಗಿ ಗೋವಾ ಸರಕಾರವು ದಿವಾರಿ ದ್ವೀಪದಲ್ಲಿ ‘ಕೋಟಿ ತೀರ್ಥ ಕಾರಿಡಾರ್’ ಅನ್ನು ನಿರ್ಮಿಸಲಿದೆ. ‘ವಿಕಸಿತ ಗೋವಾ 2037’ ಅನ್ನು ಸಾಧಿಸಲು ಮೂಲಸೌಕರ್ಯಗಳು ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಇದರೊಂದಿಗೆ, ಗೋವಾದ ಆಧ್ಯಾತ್ಮಿಕ ಅಭಿವೃದ್ಧಿಯೂ ಆಗುತ್ತಿದೆ. ಮುಂದೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಗೋವಾದ ಪ್ರವಾಸೋದ್ಯಮದ ಒಂದು ಪ್ರಮುಖ ಕೇಂದ್ರವಾಗಲಿದೆ,” ಎಂದರು.

ಈ ಸಮಾರಂಭಕ್ಕೆ ಗೋವಾ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಗೋವಾ ಪೊಲೀಸರು ಭದ್ರತೆಗಾಗಿ ಸುಮಾರು 1 ಸಾವಿರ ಪೊಲೀಸರನ್ನು ನಿಯೋಜಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಇವರು ‘ಧರ್ಮಪುತ್ರ’! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ

ಈ ಸಂದರ್ಭದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮಾತನಾಡಿ, “ದೇಶದ ಪ್ರಧಾನಿ ಮತ್ತು ತಮ್ಮನ್ನು ‘ಪ್ರಧಾನ ಸೇವಕ’ ಎಂದು ಕರೆದುಕೊಳ್ಳುವ ನರೇಂದ್ರ ಮೋದಿ ಅವರ ಉಪಸ್ಥಿತಿಯಿಂದಾಗಿ ಇಂದಿನ ದಿನವು ಮಠದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಲ್ಪಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಚಾತುರ್ಮಾಸ್ಯ ವ್ರತವನ್ನು ಒಂದು ಹೊತ್ತು ಊಟ ಮಾಡಿ ಪಾಲಿಸುತ್ತಾರೆ ಮತ್ತು ನವರಾತ್ರಿಯಲ್ಲಿ ಉಪವಾಸವನ್ನೂ ಮಾಡುತ್ತಾರೆ. ಇದು ಒಂದು ಗಮನಾರ್ಹ ವಿಷಯವಾಗಿದೆ. ಪ್ರಧಾನಿಯವರು ಅಯೋಧ್ಯೆಯಲ್ಲಿ ರಾಮಲಲ್ಲಾ ದೇವಸ್ಥಾನವನ್ನು ನಿರ್ಮಿಸಿದರು ಮತ್ತು ದಕ್ಷಿಣ ಅಯೋಧ್ಯೆಯಲ್ಲಿ (ಪರ್ತಗಾಳಿ ಮಠದಲ್ಲಿ) ಪ್ರಭು ಶ್ರೀರಾಮನ ವಿಗ್ರಹವನ್ನು ಅನಾವರಣಗೊಳಿಸಿದರು. ಅವರ ಕಾರ್ಯವು ಭಗವಾನ್ ಶ್ರೀಕೃಷ್ಣನಂತೆ ಇದೆ ಮತ್ತು ಇದಕ್ಕಾಗಿ ಅವರು ನಿಜವಾಗಿಯೂ ‘ಧರ್ಮಪುತ್ರ’ರಾಗಿದ್ದಾರೆ,” ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಠದ 550ನೇ ವರ್ಧಂತ್ಯೋತ್ಸವದ ನಿಮಿತ್ತ 550 ರೂಪಾಯಿಗಳ ನಾಣ್ಯವನ್ನು ಲೋಕಾರ್ಪಣೆ ಮಾಡಿದರು. ಈ ನಾಣ್ಯದ ತೂಕ 35 ಗ್ರಾಂ ಇದೆ ಮತ್ತು ಅದರಲ್ಲಿ 50 ಪ್ರತಿಶತ ಬೆಳ್ಳಿ, 40 ಪ್ರತಿಶತ ತಾಮ್ರ, 5 ಪ್ರತಿಶತ ಸತು ಮತ್ತು 5 ಪ್ರತಿಶತ ನಿಕಲ್ ಲೋಹಗಳು ಸೇರಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಠದ ಅನುಯಾಯಿಗಳಿಗೆ ಮುಂದಿನ 9 ಸಂಕಲ್ಪಗಳಿಗೆ ಒತ್ತಾಯಿಸಿದರು

ಜಲ ಸಂರಕ್ಷಣೆ, ಪರಿಸರ ರಕ್ಷಣೆ, ಸ್ವಚ್ಛತಾ ಅಭಿಯಾನವನ್ನು ನಿತ್ಯ ಅಭ್ಯಾಸದ ಭಾಗವಾಗಿಸುವುದು ಸ್ವದೇಶಿಯ ಅಳವಡಿಕೆ (‘ವೋಕಲ್ ಫಾರ್ ಲೋಕಲ್’), ದೇಶ ದರ್ಶನ ಮಾಡುವುದು (ದೇಶದ ವಿವಿಧ ಪ್ರಾಂತ್ಯಗಳನ್ನು ನೋಡುವುದು), ನೈಸರ್ಗಿಕ ಕೃಷಿಗೆ ಒತ್ತು ನೀಡುವುದು, ಸಿರಿಧಾನ್ಯಗಳ ಬಳಕೆ ಮಾಡುವುದು, ಊಟದಲ್ಲಿ ಎಣ್ಣೆಯ ಬಳಕೆಯನ್ನು 10 ಪ್ರತಿಶತದಷ್ಟು ಕಡಿಮೆ ಮಾಡುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಯೋಗ ಸಾಧನೆ ಮತ್ತು ಆಟಗಳನ್ನು ಅಳವಡಿಸಿಕೊಳ್ಳುವುದು ಮತ್ತು ಯಾವುದೇ ಮಾರ್ಗದಿಂದ ಬಡವರ ಸೇವೆ ಮಾಡುವುದು. ಪರ್ತಗಾಳಿ ಮಠದ 550ನೇ ವರ್ಧಂತ್ಯೋತ್ಸವದ ಸಮಾರಂಭದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂಚೆ ಚೀಟಿಯೊಂದನ್ನು ಅನಾವರಣಗೊಳಿಸಲಾಯಿತು.