ಸೀಹೋರ (ಮಧ್ಯಪ್ರದೇಶ) ಇಲ್ಲಿನ ವಿಐಟಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಹಿಂಸಾಚಾರ

  • ಹಾಸ್ಟೆಲ್ ಊಟದಿಂದ ವಿದ್ಯಾರ್ಥಿಗಳು ಅನಾರೋಗ್ಯ ವಾಗುತ್ತಿರುವುದರಿಂದ ಆಕ್ರೋಶ

  • ಕುಲಪತಿಗಳ ಬಂಗಲೆಯ ಧ್ವಂಸ, ಅನೇಕ ವಾಹನಗಳಿಗೆ ಬೆಂಕಿ

ಸೀಹೋರ (ಮಧ್ಯಪ್ರದೇಶ) – ಇಲ್ಲಿರುವ ವಿಐಟಿ (ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿಶ್ವವಿದ್ಯಾಲಯದಲ್ಲಿ ನವೆಂಬರ್ 25 ರ ರಾತ್ರಿ ವಿದ್ಯಾರ್ಥಿಗಳಿಂದ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯಿತು. ಅವರು ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಂಸ ಕೃತ್ಯ ನಡೆಸಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಹಾಗೆಯೇ, ಕುಲಪತಿಗಳ ಬಂಗಲೆಯ ಆವರಣವನ್ನೂ ಧ್ವಂಸ ಮಾಡಲಾಯಿತು. ಈ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿರುವ 24 ವಿದ್ಯಾರ್ಥಿಗಳಿಗೆ ಕಾಮಾಲೆಯಾಗಿದ್ದರಿಂದ, ಅಲ್ಲಿನ ದುರವಸ್ಥೆಯ ಬಗ್ಗೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಈ ಹಿಂಸಾಚಾರ ನಡೆಸಿದ್ದಾರೆ. ಅಲ್ಲಿ ನೀಡುತ್ತಿರುವ ಊಟದ ಗುಣಮಟ್ಟ ಕೆಟ್ಟದಾಗಿದ್ದರಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗುತ್ತಿದ್ದಾರೆ ಎಂದು ಅವರು ದೂರುತ್ತಿದ್ದರು.

4 ಸಾವಿರ ವಿದ್ಯಾರ್ಥಿಗಳಿಂದ ಹಿಂಸಾಚಾರ

1. ರಾತ್ರಿ ಸುಮಾರು 4 ಸಾವಿರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಒಗ್ಗೂಡಿದ್ದರು. ಅವರು ಬಸ್, ನಾಲ್ಕು ಚಕ್ರದ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಆಂಬ್ಯುಲೆನ್ಸ್ಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಇದರಿಂದಾಗಿ ಸುತ್ತಮುತ್ತಲಿನ 5 ಪೊಲೀಸ್ ಠಾಣೆಗಳ ಪೊಲೀಸ್ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು.

2. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿಶ್ವವಿದ್ಯಾಲಯದ ಆವರಣಕ್ಕೆ ತಲುಪಿದರು. ಬೆಂಕಿ ಹಚ್ಚಿದ ನಂತರ ಒಂದೂವರೆ ಕಿಲೋಮೀಟರ್ ದೂರದವರೆಗೆ ಹೊಗೆಯ ಸುರುಳಿಗಳು ಗೋಚರಿಸುತ್ತಿದ್ದವು. ಅಗ್ನಿಶಾಮಕ ದಳವು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿತು. ಈ ಹಿಂಸಾಚಾರದ ನಂತರ ಅನೇಕ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಸಧ್ಯ ವಿದ್ಯಾರ್ಥಿಗಳಿಗೆ 5 ದಿನಗಳ ರಜೆಯನ್ನು ನೀಡಲಾಗಿದೆ.

3. ಪೊಲೀಸ್ ಅಧೀಕ್ಷಕ ದೀಪಕ ಕುಮಾರ ಶುಕ್ಲಾ ಅವರು ಮಾತನಾಡಿ, ನಾವು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದೇವೆ. ಆಹಾರ ಮತ್ತು ಔಷಧ ಆಡಳಿತವು ಹಾಸ್ಟೆಲ್ ನಲ್ಲಿ ನೀಡಲಾಗುವ ಊಟದ ಮಾದರಿಗಳನ್ನು ಪರಿಶೀಲಿಸಲಿದೆ, ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಆಡಳಿತ ಮತ್ತು ವ್ಯವಸ್ಥಾಪಕ ಮಂಡಳಿಗಳು ನಿಷ್ಕ್ರಿಯರಾದಾಗ, ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದರೆ, ಸಮಾಜವು ಆಕ್ರೋಶಗೊಳ್ಳುತ್ತದೆ ಮತ್ತು ಇಂತಹ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತದೆ!
  • ‘ವಿದ್ಯಾರ್ಥಿಗಳು ಏಕೆ ಹಿಂಸಾತ್ಮಕರಾದರು?’ ಎಂಬುದರ ಬಗ್ಗೆ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ವಿಚಾರ ಮಾಡುವ ಆವಶ್ಯಕತೆಯಿದೆ!