ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆ!

ಕಳೆದ ವರ್ಷ ನಡೆದ ಹಿಂಸಾಚಾರದ ವೇಳೆ ಹತ್ಯೆಯ ಆದೇಶ ನೀಡಿದ ಆರೋಪ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಇಲ್ಲಿನ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ತಥಾಕಥಿತ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಹತ್ಯೆಗೆ ಪ್ರಚೋದನೆ ಮತ್ತು ಹತ್ಯೆಗೆ ಆದೇಶ ನೀಡಿಲಾಗಿತ್ತೆಂದು ಹಸೀನಾ ಅವರ ವಿರುದ್ಧ ಆರೋಪ ಹೇರಲಾಗಿತ್ತು. ಇದೇ ಪ್ರಕರಣದಲ್ಲಿ, ಅಲ್ಲಿನ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಅವರು 12 ಜನರ ಕೊಲೆಗೆ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅವರಿಗೂ ಸಹ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ, ಮೂರನೇ ಆರೋಪಿ, ಪೊಲೀಸ್ ಮಹಾನಿರೀಕ್ಷಕ ಅಬ್ದುಲ್ಲಾ ಅಲ್-ಮಾಮುನ್ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಮುನ್ ಪ್ರಸ್ತುತ ಬಂಧನದಲ್ಲಿದ್ದು, ಅವರು ಸಾಕ್ಷಿದಾರರಾಗಿದ್ದಾರೆ. ನ್ಯಾಯಾಲಯವು ಹಸೀನಾ ಮತ್ತು ಅಸದುಜ್ಜಮಾನ್ ಕಮಾಲ್ ಅವರ ಆಸ್ತಿಗಳನ್ನು ಮುಟ್ಟುಗೋಲು ಮಾಡುವಂತೆ ಆದೇಶ ನೀಡಿದೆ. ಆಗಸ್ಟ್ 5, 2024 ರಂದು ಅಧಿಕಾರ ಪಲ್ಲಟವಾದ ನಂತರ ಶೇಖ್ ಹಸೀನಾ ಮತ್ತು ಅಸದುಜ್ಜಮಾನ್ ಅವರು ಬಾಂಗ್ಲಾದೇಶ ತೊರೆದಿದ್ದಾರೆ. ಇಬ್ಬರೂ ನಾಯಕರು ಕಳೆದ 15 ತಿಂಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ.

ವಿಚಿತ್ರವೆಂದರೆ, ಪ್ರಧಾನಿಯಾಗಿದ್ದಾಗ ಹಸೀನಾ ಅವರೇ ಈ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯನ್ನು ಸ್ಥಾಪಿಸಿದ್ದರು. 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಡೆದ ಯುದ್ಧ ಅಪರಾಧಗಳು ಮತ್ತು ನರಮೇಧದ ವಿಚಾರಣೆ ನಡೆಸಲು ಹಾಗೂ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು 2010 ರಲ್ಲಿ ಈ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿತ್ತು.

ಈ ತೀರ್ಪು ತಪ್ಪು ಮತ್ತು ಪಕ್ಷಪಾತದಿಂದ ಕೂಡಿದೆ! – ಶೇಖ್ ಹಸೀನಾ

ನ್ಯಾಯಾಲಯದ ತೀರ್ಪಿನ ಬಗ್ಗೆ ಶೇಖ್ ಹಸೀನಾ ಅವರು ಪ್ರತಿಕ್ರಿಯಿಸಿದ್ದು, “ಈ ತೀರ್ಪು ಅನ್ಯಾಯದಿಂದ ಕೂಡಿದೆ, ಪಕ್ಷಪಾತ ಮತ್ತು ರಾಜಕೀಯ ಪ್ರೇರಿತವಾಗಿದೆ. ಈ ನಿರ್ಧಾರವನ್ನು ಚುನಾಯಿತವಲ್ಲದ ಸರಕಾರದಿಂದ ನಡೆಸಲ್ಪಡುವ ನ್ಯಾಯಮಂಡಳಿಯು ನೀಡಿದೆ. ಇದು ಸಾರ್ವಜನಿಕ ಆದೇಶವಲ್ಲ. ಇದರಲ್ಲಿ ನನ್ನ ಪರವಾದ ವಾದವನ್ನು ಆಲಿಸಲೇ ಇಲ್ಲ. ಈ ಸಂಪೂರ್ಣ ಪ್ರಕರಣವು ನೈಜ ಘಟನೆಗಳ ತನಿಖೆಯಲ್ಲ, ಬದಲಿಗೆ ಅವಾಮಿ ಲೀಗ್ ಪಕ್ಷವನ್ನು ಗುರಿಯಾಗಿಸುವ ಪ್ರಯತ್ನ ಎಂಬುದು ಜನರಿಗೆ ತಿಳಿದಿದೆ. ಯುನೂಸ್ ಸರಕಾರದ ಅವಧಿಯಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗವು ದುರ್ಬಲಗೊಂಡಿದೆ.

ಅವಾಮಿ ಲೀಗ್ ಬೆಂಬಲಿಗರು ಮತ್ತು ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ, ಮಹಿಳಾ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಮತ್ತು ಮೂಲಭೂತವಾದಿಗಳ ಪ್ರಭಾವವು ಹೆಚ್ಚುತ್ತಿದೆ. ಡಾ. ಯುನೂಸ್ ಅವರನ್ನು ಯಾರೂ ಆಯ್ಕೆ ಮಾಡಿಲ್ಲ. ಬಾಂಗ್ಲಾದೇಶದ ಮುಂದಿನ ಚುನಾವಣೆಯು ಸಂಪೂರ್ಣವಾಗಿ ಮುಕ್ತ ಮತ್ತು ನಿಷ್ಪಕ್ಷಪಾತವಾಗಿರಬೇಕು” ಎಂದು ಹಸೀನಾ ಆಗ್ರಹಿಸಿದರು.

ನನ್ನ ತಾಯಿ ಭಾರತದಲ್ಲಿ ಸುರಕ್ಷಿತ! – ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೆದ್

ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೆದ್ ಅವರು ಕೆಲ ದಿನಗಳ ಹಿಂದೆ ಪತ್ರಕರ್ತರ ಜೊತೆ ಮಾತನಾಡಿ, ನನ್ನ ತಾಯಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು ಎಂದು ನಮಗೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದರು. ಶೇಖ್ ಹಸೀನಾ ಭಾರತದಲ್ಲಿ ಸುರಕ್ಷಿತವಾಗಿದ್ದಾರೆ ಮತ್ತು ಭಾರತೀಯ ಭದ್ರತಾ ಸಂಸ್ಥೆಗಳು ಅವರಿಗೆ ಸಂಪೂರ್ಣ ರಕ್ಷಣೆ ನೀಡಲಿವೆ ಎಂದು ಕೂಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಂಡಲ್ಲಿ ಗುಂಡು ಹಾರಿಸುವ ಆದೇಶ

ಈ ತೀರ್ಪು ಹೊರಬರುವ ಎರಡು ದಿನಗಳ ಮೊದಲೇ ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ ಪ್ರಾರಂಭವಾಗಿತ್ತು. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಸರಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದರು. ನಂತರ, ಪೊಲೀಸರಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ನೀಡಲಾಯಿತು. ಈ ಕಾರಣದಿಂದಾಗಿ, ತೀರ್ಪು ಪ್ರಕಟವಾದ ದಿನದಂದು ಬಾಂಗ್ಲಾದೇಶದೆಲ್ಲೆಡೆ ಶಾಂತ ವಾತಾವರಣವಿತ್ತು.